ಒಮಾನ್ ದೇಶದ ಮಸ್ಕತ್ ನಗರದಲ್ಲಿ ಬಸವ ಬಳಗ ಮಸ್ಕತ್ ಸಂಘಟನೆಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಒಮಾನ್ ದೇಶದ ಭಾರತದ ರಾಯಭಾರಿ ಅಮಿತ್ ನಾರಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ತತ್ವ ಆದರ್ಶಗಳು, ಮಾನವೀಯ ಮೌಲ್ಯಗಳು ಜೀವನಕ್ಕೆ ಮಾರ್ಗದರ್ಶಿ. ತರಳಬಾಳು ಮಠದಿಂದ ಹೊರ ತಂದಿರುವ ಬಸವಾದಿ ಶರಣರ ವಚನಗಳ ಮೊಬೈಲ್ ಆ್ಯಪ್ ವೀಕ್ಷಿಸಿ, ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದವಿಗಿರುವುದನ್ನು ನೋಡಿ ತುಂಬಾ ಖುಷಿಪಟ್ಟರು.
ಆಶೀರ್ವಚನ ದಯಪಾಲಿಸಿದ ಶ್ರೀಗಳು, ಬಹಿರಂಗ ಶುದ್ಧಿಯಷ್ಟೇ ಅಂತರಂಗ ಶುದ್ಧಿಗೂ ಒತ್ತು ನೀಡಬೇಕು. ಕಾಯಕವೇ ಕೈಲಾಸ ಎಂಬ ಮಹೋನ್ನತ ಆದರ್ಶವನ್ನು 12ನೇ ಶತಮಾನದಲ್ಲೇ ಇಡೀ ಜಗತ್ತಿಗೆ ನೀಡಿದ ವಿಶ್ವಗುರು ಬಸವೇಶ್ವರರು ಸಾಮಾಜಿಕ ಕ್ರಾಂತಿಯ ಹರಿಕಾರರು. 900 ವರ್ಷಗಳ ಹಿಂದೆ ಬಸವಾದಿ ಶರಣರು ವಚನಗಳ ಮೂಲಕ ಬಿತ್ತಿದ ಆದರ್ಶ ಸಮಾಜ ಪರಿಕಲ್ಪನೆ ಇಂದಿಗೂ ಪ್ರಸ್ತುತ. ಜಗತ್ತು ಇಂದು ಎದುರಿಸುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಪರಿಹಾರವಿದೆ ಎಂದು ಅಭಿಪ್ರಾಯಪಟ್ಟರು.
ಭಾರತದಿಂದ ಬಂದು ಇಲ್ಲಿ ನೆಲೆಸಿರುವ ಕೇವಲ ಬಸವ ಧರ್ಮೀಯರೇ ಅಲ್ಲದೆ ಎಲ್ಲ ಸಮುದಾಯದವರೂ ಸೇರಿ ಇಲ್ಲೊಂದು ಭಾರತವನ್ನು ನೆಲೆಗೊಳಿಸಿದ್ದೀರಿ ಎಂದರು. ಮನುಷ್ಯ “ಆಧುನಿಕವಾದ ಪ್ರಪಂಚದಲ್ಲಿ ಕೇವಲ ಬಾಹ್ಯ ಬೆಳಕನ್ನು ನೋಡುತ್ತಾನೆ. ತನ್ನೊಳಗಿನ ಅರಿವಿನ ಬೆಳಕನ್ನು ನೋಡಿದಾಗ ವ್ಯಕ್ತಿಯಲ್ಲಿ ಮಹಾ ಬೆಳಗಿನ ಅರಿತು ಬರುತ್ತದೆ ಎಂದರು.
Women Empowerment ಬಗ್ಗೆ ಮಾತನಾಡುವಾಗ ಸಭಾಂಗಣಕ್ಕೆ ತಮ್ಮನ್ನು ಬಸವ ಬಳಗದ ಮಹಿಳೆಯರು ಕೈಯಲ್ಲಿ ಆರತಿ ಹಿಡಿದು ಭಕ್ತಿಯಿಂದ ಬರಮಾಡಿಕೊಂಡದ್ದನ್ನು ಪ್ರಸ್ತಾಪಿಸಿದ ಶ್ರೀ ಜಗದ್ಗುರುಗಳವರು ನಮ್ಮ ಮಹಿಳೆಯರು ಮಂಗಳ ಕಾರ್ಯಗಳ ಸಂದರ್ಭದಲ್ಲಿ ಕೈಯಲ್ಲಿ ಆರತಿ ಹಿಡಿಯುವುವಂತೆ, ವಿಷಮ ಸನ್ನಿವೇಶಗಳಲ್ಲಿ ವೀರ ವನಿತೆ ಓಬವ್ವನಂತೆ ಕೈಯಲ್ಲಿ ಒನಕೆಯನ್ನೂ ಹಿಡಿಯಬಲ್ಲರು, ವೀರರಾಣಿ ಕಿತ್ತೂರು ಚೆನ್ನಮ್ಮನಂತೆ ಕೈಯಲ್ಲಿ ಖಡ್ಗವನ್ನೂ ಹಿಡಿಯಬಲ್ಲರು” ಎಂದು ನುಡಿದಾಗ ಸಭೆಯಲ್ಲಿ ಕರತಾಡನ ಮೊಳಗಿತು.
ಇಂಗ್ಲೆಂಡ್ ದೇಶದ ಲ್ಯಾಂಬೆತ್ ಬಳಿ ಬಸವ ಪುತ್ಥಳಿ ಸ್ಥಾಪಿತವಾಗಿರುವಂತೆ ಮಸ್ಕತ್ ನಗರದಲ್ಲಿ ಬಸವ ಶಿಲಾಮೂರ್ತಿಯನ್ನು ಸ್ಥಾಪಿಸುವಂತೆ ಬಸವ ಬಳಗಕ್ಕೆ ಶ್ರೀ ಜಗದ್ಗುರುಗಳವರು ಸಲಹೆ ನೀಡಿದರು. ಬಸವ ಶಿಲಾ ಮೂರ್ತಿಯನ್ನು ಮಠದ ವತಿಯಿಂದ ನೀಡುವುದಾಗಿ ಘೋಷಿಸಿದ ಪೂಜ್ಯರು ಪ್ರತಿಮೆ ಸ್ಥಾಪನೆಗೆ ನಿಯಮಾನುಸಾರ ಮುಂದುವರೆಯುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರುಗಳವರು ಬಸವಾದಿ ಶರಣರ 22 ಸಾವಿರಕ್ಕೂ ಹೆಚ್ಚು ವಚನಗಳ ಮೊಬೈಲ್ ಆಪ್ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮವು ಮಸ್ಕತ್ ನಲ್ಲಿರುವ ಕೃಷ್ಣ ದೇವಾಲಯದ ಸಭಾಂಗಣದಲ್ಲಿ ಆಯೋಜನೆಗೊಂಡಿತ್ತು. ಬಸವ ಬಳಗದ ಪದಾಧಿಕಾರಿಗಳು, ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಸಾಕ್ಷಿಯಾದರು.