Connect with us

Dvgsuddi Kannada | online news portal | Kannada news online

ಕಲ್ಯಾಣ ಕರ್ನಾಟಕ ಪ್ರವಾಹ; ರಾಷ್ಟ್ರೀಯ ವಿಪತ್ತು ಘೋಷಣೆಗೆ ಕೇಂದ್ರಕ್ಕೆ ಮನವಿ: ಆರ್. ಅಶೋಕ್

ಪ್ರಮುಖ ಸುದ್ದಿ

ಕಲ್ಯಾಣ ಕರ್ನಾಟಕ ಪ್ರವಾಹ; ರಾಷ್ಟ್ರೀಯ ವಿಪತ್ತು ಘೋಷಣೆಗೆ ಕೇಂದ್ರಕ್ಕೆ ಮನವಿ: ಆರ್. ಅಶೋಕ್

ಡಿವಿಜಿ ಸುದ್ದಿ, ಕಲಬುರ್ಗಿ: ಕಲ್ಯಾಣ ಕರ್ನಾಟಕದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಾಷ್ಟ್ರೀಯ ವಿಪತ್ತು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ  ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ನೆರೆ ಪೀಡಿತ ಕಲಬುರ್ಗಿ ಜಿಲ್ಲೆಯ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಭಾರೀ ಮಳೆಯಿಂದ ಜನತೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.  ಅದರಲ್ಲಿಯೂ ತೊಗರಿ ನಾಡು ಕಲಬುರ್ಗಿಯಲ್ಲಿ ಭಾರಿ ಹಾನಿಯಾಗಿದೆ. ಕಳೆದ ವರ್ಷ ಮಲೆನಾಡು ಭಾಗದಲ್ಲಿ ಭಾರಿ ಪ್ರವಾಹ ಸೃಷ್ಟಿಯಾಗಿತ್ತು. ಈ ಬಾರಿ ಕಲ್ಯಾಣ ಕರ್ನಾಟಕದಲ್ಲಿ ಭಾರಿ ಪ್ರವಾಹ ಬಂದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರಕ್ಕೆ ಮನವಿ ಮಾಡಲಾಗುವುದು. ಕೇಂದ್ರ ಸರ್ಕಾರದ ಪರಿಹಾರದ ಜೊತೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪರಿಹಾರ ನೀಡಲಾಗುವುದು ಎಂದರು.

ಪ್ರವಾಹ ನಿರ್ವಹಣೆ ವಿಷಯದಲ್ಲಿ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ತೋರುವಂತಿಲ್ಲ. ನಿರ್ಲಕ್ಷ್ಯ ತೋರಿದ ಅಧಿಕಾರಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ವಿಪಕ್ಷದವರಿಗೆ ವಿರೋಧ ಮಾಡೋದೆ ಕೆಲಸ. ಹಿಂದೆ ಸಿದ್ದರಾಮಯ್ಯ ಸರ್ಕಾರ ಏನು ಮಾಡಿದೆ ಅಂತಾ ಎಲ್ಲರಿಗೆ ಗೊತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ಎರಡನೆ ಬಾರಿಗೆ ಪ್ರವಾಹ ಎದುರಿಸುತ್ತಿದೆ. ಆದರೂ ಹಣದ ಕೊರತೆ ಆಗದಂತೆ ನೋಡಿಕೊಂಡಿದ್ದೇವೆ. ಪ್ರವಾಹದ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಎಂಬ ಸಿದ್ಧರಾಮಯ್ಯ ಹೇಳಿಕೆಗೆ ಸಚಿವ ಅಶೋಕ್ ಕಿಡಿಕಾರಿದರು.

ಕಲಬುರ್ಗಿ ಜಿಲ್ಲೆಯಲ್ಲಿ 30 ವರ್ಷದ ಬಳಿಕ ದೊಡ್ಡ ಪ್ರವಾಹ ಬಂದಿದೆ. ತಗ್ಗು ಪ್ರದೇಶದ ಗ್ರಾಮಗಳನ್ನು ಬೇರೆಡೆ ಕಡೆ ಶಿಫ್ಟ್ ಮಾಡುವ್ಉದಕ್ಕೆ 11 ಎಕರೆ ಜಮೀನು ನೋಡಲಾಗಿದೆ ಎಂದರು.

ಕಲಬುರಗಿ , ಬೀದರ್ , ರಾಯಚೂರು , ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರವಾಹ ಆಗಿದೆ. 173 ತಾಲ್ಲೂಕು ಪ್ರವಾಹ ಪೀಡಿತ ತಾಲ್ಲೂಕು ಅಂತಾ ಘೋಷಣೆ ಮಾಡಲಾಗಿದೆ. ಕಲಬುರ್ಗಿ ಜಿಲ್ಲೆಯ ಎಲ್ಲ 11 ತಾಲೂಕುಗಳೂ ಪ್ರವಾಹ ಪೀಡಿತ ಎಂದು ಘೋಷಿಸಿದ್ದೇವೆ. ಎನ್ ಡಿ ಆರ್ ಎಫ್ ತಂಡ ಇವತ್ತು ಎಲ್ಲ ಕಡೆ ಹೋಗಿ ತಲುಪುತ್ತದೆ ಎಂದು ಹೇಳಿದರು.

ಹಣದ ಕೊರತೆ ಇಲ್ಲ, ಜಿಲ್ಲಾಧಿಕಾರಿಗೆ ಹಣ ನೀಡಲಾಗಿದೆ. ಕಲಬುರ್ಗಿ ಜಿಲ್ಲಾಧಿಕಾರಿ ಖಾತೆಯಲ್ಲಿ 20 ಕೋಟಿ ಹಣ ಇದೆ. ಯಾದಗಿರಿ ಜಿಲ್ಲಾಧಿಕಾರಿ ಅಕೌಂಟ್ ನಲ್ಲಿ 11 ಕೋಟಿ ಹಣ ಇದೆ ಎಂದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top