ಚಿಕ್ಕಮಗಳೂರು : ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳನ್ನು ಹೊರತುಪಡಿಸಿ ಖಾಸಗಿ ಹಿಂದೂ ದೇವಸ್ಥಾನಗಳು ಒಂದು ತಿಂಗಳ ಒಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು, ನೋಂದಣಿ ಮಾಡಿಕೊಳ್ಳಲು ನಿರಾಕರಿಸಿದ್ದಲ್ಲಿ ದೇವಸ್ಥಾನದ ವಿರುದ್ಧ ಸರ್ಕಾರ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ.
ಧಾರ್ಮಿಕ ದತ್ತಿ ಸಮಿತಿ 2011ರ ತಿದ್ದುಪಡಿ ಕಾಯ್ದೆಗೆ ಬಗ್ಗೆ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಮಾತನಾಡಿ, ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ 2015ರಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ 2011 ರನ್ನೊಳಗೊಂಡಂತೆ ಕಲಂ-53ರ ಅಡಿ ಆಯಾಯ ಸಹಾಯಕ ಆಯುಕ್ತರು ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ. ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳನ್ನು ಹೊರತುಪಡಿಸಿ ಪ್ರತಿಯೊಂದು ಖಾಸಗಿ ಹಿಂದೂ ದೇವಸ್ಥಾನಗಳು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ದೇವಸ್ಥಾನಗಳಿಗೆ ಅರ್ಚಕರನ್ನು ನೇಮಿಸಿ ಗ್ರೇಡ್ಗಳನ್ನು ನೀಡಲಾಗುತ್ತದೆ ಎಂದರು.
ಈ ಹಿಂದೆ 2014-15ರಲ್ಲಿ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಿದ್ದರೂ ಕೂಡ ಈವರೆಗೂ ಯಾವುದೇ ದೇವಸ್ಥಾನಗಳು ನೋಂದಣಿ ಮಾಡಿಕೊಂಡಿರುವುದಿಲ್ಲ. ದೇವಸ್ಥಾನದ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಸಮಿತಿಯು ನೋಂದಣಿ ಕ್ರಮ ಕೈಗೊಂಡಿದೆ ಎಂದ ಅವರು ನೋಂದಣಿ ಮಾಡಿಕೊಳ್ಳುವ ದೇವಸ್ಥಾನದ ಸ್ಥಳ, ದೇವಾಲಯದ ಹೆಸರು, ಉಳಿತಾಯದ ಬ್ಯಾಂಕ್ ಖಾತೆ, ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟಡಗಳು ಹಾಗೂ ಕಲ್ಯಾಣ ಮಂಟಪಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಬೇಕು ಎಂದರು.



