ಬೆಂಗಳೂರು: ರಾಷ್ತ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಶೀಘ್ರವೇ ಒಂದು ಕೋಟಿ ಲಸಿಕೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದರು.
ಕೇಂದ್ರ ಸರ್ಕಾರದ ಪಶುಸಂಗೋಪನೆ ಸಚಿವರಾದ ಪರಷೋತ್ತಮ್ ರೂಪಾಲ ಅವರನ್ನು ಭೇಟಿ ಮಾಡಿ, ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳಾದ ಜಾನುವಾರುಗಳ ಆರೋಗ್ಯ ಮತ್ತು ರೋಗ ನಿಯಂತ್ರಣಕ್ಕೆ ಅನುದಾನ ಹಾಗೂ ಅಗತ್ಯ ಲಸಿಕೆಯನ್ನು ತುರ್ತಾಗಿ ನೀಡುವಂತೆ ಮನವಿ ಮಾಡಿದ ನಂತರ ಈ ಮಾಹಿತಿ ನೀಡಿದರು.
ಜಾನುವಾರುಗಳಿಗೆ ಮೇವು ಉತ್ಪಾದನೆಗಾಗಿ ರೂ. 51 ಕೋಟಿ ಅನುದಾನ ಮತ್ತು ಜಾನುವಾರುಗಳಿಗೆ ಮೂರನೇ ಸುತ್ತು ಎಫ್.ಎಂ.ಡಿ ಲಸಿಕೆಯನ್ನು ನೀಡಬೇಕಾಗಿರುವುದರಿಂದ ಒಂದು ಕೋಟಿ ಲಸಿಕೆಯನ್ನು ತುರ್ತಾಗಿ ನೀಡುವಂತೆ ಪ್ರಭು ಚವ್ಹಾಣ್ ಅವರು ಕೇಂದ್ರ ಪಶುಸಂಗೋಪನೆ ಸಚಿವ ಪರಷೋತ್ತಮ್ ರೂಪಾಲ ಅವರಿಗೆ ಕೋರಿದ್ದಾರೆ.
ಜಾನುವಾರುಗಳಲ್ಲಿ ಕಂಡುಬರುವ ರೋಗ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿರುವ ಪರಷೋತ್ತಮ್ ರೂಪಾಲ ಅವರು, ಜಾನುವಾರುಗಳಾದ (ಹಸು, ಎಮ್ಮೆ) ಕಾಲುಬಾಯಿ ರೋಗದ ವಿರುದ್ಧ ವರ್ಷಕ್ಕೆ 2 ಬಾರಿ ಲಸಿಕೆಯನ್ನು ಕೂಡಲೇ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.



