ಬೆಂಗಳೂರು: ಹಾಲು, ಅನ್ನ ಭಾಗ್ಯ ಕೊಟ್ಟವರು ಏನಾದರು? 130 ಸೀಟು ಇದ್ದದ್ದು 78ಕ್ಕೆ ಏಕೆ ಬಂತು? ಹಾಸನದಲ್ಲಿ ಈಗ ಕಾಂಗ್ರೆಸ್ ಏನಾಗಿದೆ? ಒಂದು ನಗರಸಭೆ ಚುನಾವಣೆ ಗೆಲ್ಲಲು ಆಗಲಿಲ್ಲ, ಇದು ಆನಂದವಾ ನಿಮಗೆ?. ಎಲ್ಲದಕ್ಕೂ ತೆರೆ ಎಳೆಯುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮೋದಿ ಹೋಗಿದ್ದರು. ಆಗ ನಾವು ಕಾಂಗ್ರೆಸ್ ಜೊತೆ ನಿಲ್ಲಲಿಲ್ಲವೇ. ಅದಕ್ಕೆ ಕುಮಾರಸ್ವಾಮಿ ಕಾರಣವಲ್ಲ. ಈ ಸಲ ನನ್ನ ಜಾತ್ಯತೀತತೆಯನ್ನು ಪರೀಕ್ಷೆ ಮಾಡಲಿ. ತಮಿಳುನಾಡಲ್ಲಿ ಏನಾಯ್ತು, ಯಾರು ಯಾರ ಮನೆ ಬಾಗಿಲಿಗೆ ಹೋಗಿದ್ದರು, ಬಿಹಾರದಲ್ಲಿ ಏನಾಯಿತು? ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಸರ್ಕಾರ ಮಾಡಿಕೊಂಡಿಲ್ವಾ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.ಗೋದ್ರಾ ಹತ್ಯಾಕಾಂಡ ವಿಚಾರ ಏನಾಯ್ತು? ಮುಸ್ಲಿಮರನ್ನು ರಕ್ಷಿಸುವ ಶಕ್ತಿ ಇವರಿಗೆ ಇಲ್ಲ? ಮುಸ್ಲಿಮರನ್ನು ದಾರಿ ತಪ್ಪಿಸಿದ್ದು ಯಾರು..? ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ಸಭಾಪತಿ ರಾಜೀನಾಮೆ ವಿಚಾರದಲ್ಲಿ ತಮ್ಮ ಜಾತ್ಯತೀತತೆಯನ್ನು ಪ್ರಶ್ನೆ ಮಾಡಿದ್ದಾರೆ. ಇವರು ಮಾಡುತ್ತಿರುವುದು ಏನು?. ನಾವು 28 ಸೀಟ್ ಕಳೆದುಕೊಂಡರೆ, ಕಾಂಗ್ರೆಸ್ ನವರು 50ಸೀಟು ಕಳೆದುಕೊಂಡರು.ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇದೆ. ನಮಗೆ ಯಾವ ಹೈಕಮಾಂಡ್ ಕೂಡ ಇಲ್ಲ, ನಾನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೋಗಲು ಸಾಧ್ಯವಿಲ್ಲ, ವಯಸ್ಸಿಗೆ ತಕ್ಕಂತೆ ನನ್ನ ಕೆಲಸ ಮಾಡುತ್ತೇನೆ ಎಂದರು.



