ಬೆಂಗಳೂರು: 2ನೇ ಪೋಕ್ಸೋ ಕೇಸ್ನಲ್ಲಿ ಮುರುಘಾ ಶರಣರ ಬಂಧನಕ್ಕೆ ತಡೆ ನೀಡಿದೆ. ಹೈಕೋರ್ಟ್ ತುರ್ತು ವಿಚಾರಣೆ ಮಾಡಿದ್ದು, ಮುರುಘಾಶ್ರೀ ಜಾಮೀನು ರಹಿತ ಬಂಧನದ ವಾರಂಟ್ಗೆ ತಡೆ ನೀಡಿದೆ. ಹೈಕೋರ್ಟ್ ನ್ಯಾ.ಸೂರಜ್ ಗೋವಿಂದರಾಜ್ರವರಿದ್ದ ಪೀಠ ಆದೇಶ ಹೊರಡಿಸಿದೆ. ಮಧ್ಯಾಹ್ನ ಬಂಧನ ಮಾಡಿ, ಸಂಜೆ ಬಿಡುಗಡೆ ಮಾಡಲಾಗಿದೆ.
ಜಿಲ್ಲಾ ನ್ಯಾಯಾಲಯದ ಆದೇಶದಿಂದ ಆರೋಪಿ ಮುರುಘಾಶ್ರೀಗೆ ಅನ್ಯಾಯವಾಗಿದೆ. ಜಾಮೀನು ರಹಿತ ಬಂಧನದ ವಾರೆಂಟ್ಗೆ ಹೈಕೋರ್ಟ್ ತಡೆ ನೀಡಿದೆ. ಚಿತ್ರದುರ್ಗಕ್ಕೆ ಕರೆತಂದಿರುವುದು ಹೈಕೋರ್ಟ್ ಆದೇಶದ ಉಲ್ಲಂಘನೆ ಆಗಿದೆ. ಮುರುಘಾಶ್ರೀ ಬಿಡುಗಡೆಗೊಳಿಸುವಂತೆ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮುರುಘಾಶ್ರೀ ವಿರುದ್ಧದ 2ನೇ ಪೋಕ್ಸೋ ಕೇಸ್ನಲ್ಲಿ ಮಧ್ಯಂತರ ಆದೇಶವಿದೆ. ಮುಂದಿನ ಆದೇಶದವರೆಗೂ ವಿಚಾರಣೆ ಮುಂದೂಡುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. 1ನೇ ಪೋಕ್ಸೋ ಕೇಸ್ನಲ್ಲಿ ಹೈಕೋರ್ಟ್ ಜಾಮೀನು ನೀಡಿದೆ. ಚಿತ್ರದುರ್ಗ ಪ್ರವೇಶಿಸದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಸೂಚಿಸಿದೆ. ಹೀಗಿರುವಾಗ ಸ್ಥಳೀಯ ಅಭಿಯೋಜಕರು ಜಿಲ್ಲಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಮುರುಘಾಶ್ರೀ ಕೋರ್ಟ್ಗೆ ಹಾಜರಾಗುತ್ತಿಲ್ಲವೆಂದು ದೂರಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಹೈಕೋರ್ಟ್ ಸೂಚಿಸಿಲ್ಲವೆಂದು ವಾದಿಸಿದ್ದಾರೆ. ಆದರೂ ವಾರಂಟ್ ಹೊರಡಿಸಲು ಜಿಲ್ಲಾ ಕೋರ್ಟ್ಗೆ ಅಭಿಯೋಜಕರ ಅರ್ಜಿ ಕೋರಿರುವುದು ಅಚ್ಚರಿದಾಯಕವಾಗಿದೆ. ಹೈಕೋರ್ಟ್ ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ಷರತ್ತು ವಿಧಿಸಿದೆ. ಹೈಕೋರ್ಟ್ ಆದೇಶದಂತೆ ವಿಚಾರಣೆಯನ್ನು ಮುಂದೂಡಬೇಕಿತ್ತು. ಆದರೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಕೇಸ್ ಬೇರೆಯದಾದರೂ ನಿರ್ಬಂಧ ಬದಲಾಗುವುದಿಲ್ಲ. ಈಗ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಮುರುಘಾಶ್ರೀ ಪರ ವಕೀಲ ಉಮೇಶ್ ಪ್ರತಿಕ್ರಿಯಿಸಿದ್ದು, ಇ-ಮೇಲ್ ಮೂಲಕ ಹೈಕೋರ್ಟ್ ಆದೇಶ ಕಾರಾಗೃಹಕ್ಕೆ ತಲುಪಿದೆ. ಡಾ.ಶಿವಮೂರ್ತಿ ಮುರುಘಾ ಶರಣರು ಕೋರ್ಟ್ಗೆ ಹಾಜರಾಗಿಲ್ಲ ಎಂದು ಅಭಿಯೋಜಕರು ಜಿಲ್ಲಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ವಾರಂಟ್ ಹೊರಡಿಸುವಂತೆ ಕೋರಿದ್ದಾರೆ. ಕೋರ್ಟ್ ವಾರಂಟ್ ಹೊರಡಿಸಿ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಅಭಿಯೋಜಕರು ತಕರಾರು ಮಾಡಿದ್ದು, ಹೈಕೋರ್ಟ್ ಆದೇಶ ಪರಿಗಣಿಸಿಲ್ಲವೆಂದು ಮುರುಘಾಶ್ರೀ ವಕೀಲರು ವಾದ ಮಂಡಿಸಿದ್ದಾರೆ.
ಹೈಕೋರ್ಟ್ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸಬಾರದು. ಅಭಿಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಆರೋಪಿ ಯಾರೇ ಆದರೂ ಕಾನೂನಿನಂತೆ ಮಾತ್ರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದ್ದಾರೆ.ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಮುರುಘಾಶ್ರೀ ಕರೆ ತರಲಾಗಿತ್ತು.