Connect with us

Dvgsuddi Kannada | online news portal | Kannada news online

ರಾಜ್ಯದಾದ್ಯಂತ ಫ್ರೀ ಬಸ್ ಪ್ರಯಾಣ ಶುರು; ಫ್ರೀ ಬಸ್​ ಹತ್ತುವ ಮಹಿಳೆ ತಿಳಿಯಬೇಕಾದ ಮಾಹಿತಿ..!

ದಾವಣಗೆರೆ

ರಾಜ್ಯದಾದ್ಯಂತ ಫ್ರೀ ಬಸ್ ಪ್ರಯಾಣ ಶುರು; ಫ್ರೀ ಬಸ್​ ಹತ್ತುವ ಮಹಿಳೆ ತಿಳಿಯಬೇಕಾದ ಮಾಹಿತಿ..!

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ  ನಾಳೆಯಿಂದ ಅಧಿಕೃತವಾಗಿ ಶುರುವಾಗಲಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಭಾನುವಾರ ( ಜೂನ್ 11) ಬಸ್ ಕಂಡಕ್ಟರ್ ಆಗಿ ಮಹಿಳೆಯರಿಗೆ ಫ್ರೀ ಟಿಕೆಟ್​ ನೀಡುವ ಮೂಲಕ ಚಾಲನೆ ನೀಡಲಿದ್ದಾರೆ.

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿರುವ ಕೆಎಸ್‍ಆರ್ ಟಿಸಿ ಜಿಲ್ಲಾ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ 12.30 ಗಂಟೆಗೆ ರಾಜ್ಯ ಸಾರಿಗೆ ಸಂಸ್ಥೆಯ ಸಾರಿಗೆಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 12.30 ರಿಂದ ಕೆ.ಎಸ್.ಆರ್.ಟಿ.ಸಿ. ಸಾರಿಗೆ ಬಸ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಭಾನುವಾರ ಬೆಳಗ್ಗೆ 11 ಗಂಟೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ ಹತ್ತಲಿದ್ದಾರೆ ಮತ್ತು ಬಸ್‌ನಲ್ಲಿ ಮಹಿಳೆಯರಿಗೆ ‘ಪಿಂಕ್ ಟಿಕೆಟ್’ ನೀಡಲಿದ್ದಾರೆ. ಅವರು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ವಿಧಾನಸೌಧಕ್ಕೆ ಬಿಎಂಟಿಸಿ ಬಸ್‌ನಲ್ಲಿ ತೆರಳಲಿದ್ದಾರೆ.

ಫ್ರೀ ಬಸ್​ ಹತ್ತುವ ಮುನ್ನ ಮಹಿಳೆ ತಿಳಿಯಬೇಕಾದ ಮಾಹಿತಿ:

1. ಎಲ್ಲ ಮಹಿಳೆಯರಿಗೂ ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಶಕ್ತಿ ಯೋಜನೆ ಅನ್ವಯವಾಗುತ್ತೆದೆ. ಕರ್ನಾಟಕ ರಾಜ್ಯದೊಳಗೆ ಎಲ್ಲಿಂದ ಎಲ್ಲಿಗೆ ಬೇಕಾದರೂ ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲಾ ಮಹಿಳೆಯರು ಸರ್ಕಾರಿ ಬಸ್​​ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಹೊರ ರಾಜ್ಯಗಳಿಗೆ ಪ್ರಯಾಣ ಬೆಳೆಸಲು ಇದು ಅನ್ವಯಿಸುವುದಿಲ್ಲ.

2. ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ), ಕೆಎಸ್​ಆರ್​ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ), ಎನ್​​​​ಡಬ್ಲ್ಯೂಕೆಆರ್​​ಟಿಸಿ (ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಮತ್ತು ಕೆಕೆಆರ್​ಟಿಸಿ (ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ) ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.

3. ಐಷಾರಾಮಿ ಬಸ್‌ಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಎಸಿ ಸ್ಲೀಪರ್​, ವಜ್ರ, ವಾಯುವಜ್ರ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪವರ್ ಪ್ಲಸ್ ಬಸ್​ಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

4. ಬಿಎಂಟಿಸಿ ಬಸ್ಸುಗಳನ್ನು ಹೊರತುಪಡಿಸಿ, ಉಳಿದ ರಸ್ತೆ ಸಾರಿಗೆ ಸಂಸ್ಥೆಗಳಾದ ಕೆಎಸ್​ಆರ್​ಟಿಸಿ, ಎನ್​​​​ಡಬ್ಲ್ಯೂಕೆಆರ್​​ಟಿಸಿ ಮತ್ತು ಕೆಕೆಆರ್​ಟಿಸಿ ಬಸ್‌ಗಳಲ್ಲಿ ಪುರುಷರಿಗಾಗಿ ಶೇ.50 ಆಸನಗಳನ್ನು ಕಾಯ್ದಿರಿಸಲಾಗಿರುತ್ತದೆ.

5.ಉಚಿತ ಎಂದು ಬಸ್​ ಹತ್ತಿದ ಬಳಿಕ ಕಂಡೆಕ್ಟರ್​ ಟಿಕೆಟ್​ ಪಡೆಯುವಂತೆ ಸೂಚಿಸಿದ್ರೆ ನೀವು ವಿರೋಧ ವ್ಯಕ್ತಪಡಿಸಿ ಅವರೊಂದಿಗೆ ಜಗಳ ಮಾಡುವಂತಿಲ್ಲ. ಫ್ರೀ ಆದ್ರೂ ಕೂಡ ಅದಕ್ಕೆ ಒಂದು ಟಿಕೆಟ್​ ನೀಡಲಾಗುವುದು.

6.ಒಂದು ವೇಳೆ ಟಿಕೆಟ್​ ನೀಡಲು ತಾಂತ್ರಿಕ ದೋಷವಾದಲ್ಲಿ ಕಂಡಕ್ಟರ್ ನಿಮಗೆ ಪಿಂಕ್​ ಟಿಕೆಟ್​ ನೀಡುತ್ತಾರೆ, ಅದನ್ನು ಪಡೆಯಿರಿ.

7. ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಾದರೆ ʻಶಕ್ತಿ ಸ್ಮಾರ್ಟ್‌ ಕಾರ್ಡ್‌ʼ ಹೊಂದುವುದು ಕಡ್ಡಾಯ. ಈ ಕಾರ್ಡ್​ಗಳನ್ನು ಸೇವಾ ಸಿಂಧು ಪೋರ್ಟಲ್​ ಮೂಲಕ ಅರ್ಜಿಗಳನ್ನು ಸಲ್ಲಿಸಿ ಪಡೆಯಬೇಕು. ಆದರೆ ಈ ಕಾರ್ಡ್‌ಗಳನ್ನು ಸರ್ಕಾರ ಯಾವಾಗ ವಿತರಿಸಲು ಪ್ರಾರಂಭಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

8. ಶಕ್ತಿ ಸ್ಮಾರ್ಟ್‌ ಕಾರ್ಡ್‌ ಸಿಗುವವರೆಗೆ ಆಧಾರ್​ ಕಾರ್ಡ್​, ಪಾನ್​ ಕಾರ್ಡ್​, ಮತದಾರರ ಗುರುತಿನ ಚೀಟಿ ಸೇರಿದಂತೆ ಭಾರತ ಸರ್ಕಾರ ಅಥವಾ ಕರ್ನಾಟಕ ಸರ್ಕಾರ ಅಥವಾ ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ನಿಮ್ಮ ಭಾವಚಿತ್ರ ಹಾಗೂ ವಸತಿ ವಿಳಾಸವಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೋರಿಸಿ ಉಚಿತ ಟಿಕೆಟ್‌ ಪಡೆಯಬಹುದು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top