ಉತ್ತರ ಕನ್ನಡ: ಅಂಕೋಲಾ ಪಟ್ಟಣದ ನಿರ್ಮಲ ಹೃದಯ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಚಾವಣಿ ಕುಸಿದು ಐದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಶಾಲೆಯ ನಾಲ್ಕನೇ ತರಗತಿಯಲ್ಲಿ ಘಟನೆ ನಡೆದಿದೆ. ಊಟದ ಸಮಯವಾಗಿದ್ದರಿಂದ 16 ವಿದ್ಯಾರ್ಥಿಗಳು ಕೊಠಡಿಯಲ್ಲಿ ಊಟ ಮಾಡುತ್ತಿದ್ದರು. ಊಟ ಮಾಡುತ್ತಿರುವ ವೇಳೆ ಮೇಲ್ಪದರ ಕುಸಿದು, ಕಾಂಕ್ರೀಟ್ ವಿದ್ಯಾರ್ಥಿಗಳ ತಲೆಗೆ ಮತ್ತು ಬೆನ್ನಿಗೆ ಬಡಿದಿವೆ. ಮೇಲ್ಪದರ ಕುಸಿದ ಪರಿಣಾಮ ವರ್ಗಕೋಣೆಯ ಬೆಂಚುಗಳು ಮುರಿದು ಬಿದ್ದಿವೆ. ವಿದ್ಯಾರ್ಥಿಗಳನ್ನು ತಕ್ಷಣ ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಯಿತು. ವಿದ್ಯಾರ್ಥಿ ಸಫಲ್ ತಲೆಗೆ ಮತ್ತು ಬೆನ್ನಿಗೆ ಗಾಯಗಳಾಗಿವೆ. ಈತನೊಂದಿಗೆ ಊಟ ಮಾಡಲು ತಮ್ಮ ಸದ್ವಿನ್ ವರ್ಗಕೋಣೆಗೆ ಬಂದಿದ್ದು ಆತನೂ ಗಾಯಗೊಂಡಿದ್ದಾನೆ.
ತಹಶೀಲ್ದಾರ್ ಉದಯ ಕುಂಬಾರ, ಇ.ಒ ಪರಶುರಾಮ ಸಾವಂತ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಹರ್ಷಿತಾ ನಾಯಕ, ಪಿ.ಎಸ್.ಐ ಪ್ರವೀಣಕುಮಾರ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.



