Connect with us

Dvgsuddi Kannada | online news portal | Kannada news online

ರಜೆ ರದ್ದು ಪಡಿಸಿ ಕರ್ತವ್ಯ ನಿರ್ವಹಣೆ ಮೂಲಕ ಬಸವ ಜಯಂತಿ ಅರ್ಥಪೂರ್ಣಗೊಳಿಸಬೇಕು; ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಪ್ರಮುಖ ಸುದ್ದಿ

ರಜೆ ರದ್ದು ಪಡಿಸಿ ಕರ್ತವ್ಯ ನಿರ್ವಹಣೆ ಮೂಲಕ ಬಸವ ಜಯಂತಿ ಅರ್ಥಪೂರ್ಣಗೊಳಿಸಬೇಕು; ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಧಾರವಾಡ:ಮನುಕುಲಕ್ಕೆ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರು ಯಾವುದೇ ಒಂದು ಜಾತಿ,ಧರ್ಮಕ್ಕೆ ಸೀಮಿತವಲ್ಲ.ಅವರು 12 ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಮಹಾನ್ ಮಾನವತಾವಾದಿ‌.ನವದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನದ ಸೂಕ್ತ ಭಾಗವೊಂದಕ್ಕೆ ಬಸವಣ್ಣನವರ ಹೆಸರಿಡಲು ಭಾರತ ಸರ್ಕಾರಕ್ಕೆ ಮನವಿ ಮಾಡಲಾಗಿದೆ.ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರ ಜಯಂತಿ ದಿನ ರಜೆ ರದ್ದು ಪಡಿಸಿ ಕರ್ತವ್ಯ ನಿರ್ವಹಣೆ ಮೂಲಕ ಬಸವ ಜಯಂತಿಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಜಿಲ್ಲಾಡಳಿತ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕವಿವ ಸಂಘದ ನಾಡೋಜ ಡಾ.ಪಾಪು ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು,
ಬಸವಣ್ಣನವರು ಯಾವುದೇ ಜಾತಿ,ಧರ್ಮಕ್ಕೆ ,ಒಂದು ನಾಡು,ದೇಶಕ್ಕೆ ಮಾತ್ರ ಸೀಮಿತವಲ್ಲ‌. ಸಮಸ್ತ ಮನುಕುಲಕ್ಕೆ ಸಮಾನತೆ ಸಂದೇಶ ಸಾರಿದ್ದಾರೆ.12 ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಸಂಸದೀಯ ಮಾದರಿ ಪ್ರಜಾಪ್ರಭುತ್ವ ಜಾರಿಗೊಳಿಸಿದ ಹಿರಿಮೆ ಬಸವಣ್ಣನವರದು.ನವದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಸಂಸತ್ ಭವನದ ಒಂದು ಸೂಕ್ತ ವಿಭಾಗಕ್ಕೆ ಬಸವಣ್ಣನವರ ಹೆಸರು ಇಡಲು ಮನವಿ ಮಾಡಿದ್ದೇನೆ.ತಾವು ಸಭಾಪತಿಯಾದ ಕೂಡಲೇ ವಿಧಾನಪರಿಷತ್ ಸಭಾಂಗಣದಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವ ಕ್ರಮವಹಿಸಲಾಯಿತು. ಮಹಾತ್ಮ ಬಸವಣ್ಣನವರ ತತ್ವಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾಯಕವೇ ಕೈಲಾಸ ಎಂದು ಸಂದೇಶ ಸಾರಿದ ಬಸವಣ್ಣನವರ ಜಯಂತಿಗೆ ರಜೆ ನೀಡದೇ ಕರ್ತವ್ಯ ನಿರ್ವಹಣೆ ಮೂಲಕ ಆಚರಿಸಿ ಅವರ ಆಶಯಕ್ಕೆ ನಿಜ ಗೌರವ ತರಬೇಕು. ಜಾತ್ಯಾತೀತ ತತ್ವವನ್ನು ನಾವೆಲ್ಲ ನಿಜ ಅರ್ಥದಲ್ಲಿ ಪಾಲಿಸಬೇಕು.ಆ ಮೂಲಕ ಸಾಮಾಜಿಕ ಸಾಮರಸ್ಯ,ಸೌಹಾರ್ದತೆ ಕಾಪಾಡಲು ಸಾಧ್ಯ.ಕಳೆದ 50 ವರ್ಷಗಳ ಅವಧಿಯಲ್ಲಿ ತಾವು ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತ ಬಂದಿದ್ದೇನೆ‌. ನಾಡಿನ,ದೇಶದ ಮಹಾನ್ ಚೇತನಗಳ ಜಯಂತಿಗಳ ಆಚರಣೆಗಳು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಪೂರಕ ಎಂದರು.

ಆಕಾಶವಾಣಿಯ ನಿವೃತ್ತ ಮಹಾನಿರ್ದೇಶಕ ಡಾ.ಬಸವರಾಜ ಸಾದರ ಮಾತನಾಡಿ, ಬಸವಣ್ಣನವರು ಮತ್ತು ಶರಣಕ್ರಾಂತಿ ಪ್ರಸ್ತುತತೆ ಕುರಿತು ವಿಶೇಷ ಉಪನ್ಯಾಸ ನೀಡಿ, ಶರಣ ಕ್ರಾಂತಿ ಮತ್ತು ವಚನ ಸಾಹಿತ್ಯಕ್ಕೆ ಇಡೀ ಸಮಾಜದ ನೋವು ,ದೌರ್ಬಲ್ಯ ಹಾಗೂ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವ ಶಕ್ತಿ ಇದೆ.ಸ್ವಾತಂತ್ರ್ಯ ಪೂರ್ವ ಪರಕೀಯರ ಆಳ್ವಿಕೆಯಲ್ಲಿದ್ದ ಕಾಲದ ಶೋಷಣೆಗಿಂತಲೂ ಭೀಕರವಾದ ಸಾಮಾಜಿಕ‌ ಶೋಷಣೆ,ಅಸಮಾನತೆ 12 ನೇ ಶತಮಾನದಲ್ಲಿತ್ತು.ಬಸವಣ್ಣ ತಾನು ಉತ್ತಮ ಕುಲದಲ್ಲಿ ಹುಟ್ಟಿದೆ ಎಂಬ ಭಾರವ ಹೊರಿಸಬೇಡಿ ಎಂದು ತಮ್ಮನ್ನು ಅಪವರ್ಣೀಕರಿಸಿಕೊಂಡರು.ಎನಗಿಂತ ಕಿರಿಯರಿಲ್ಲ ಎಂದು ಸಾರಿಕೊಂಡಿದ್ದು ಕೇವಲ ತೋರಿಕೆಗಾಗಿ ಅಲ್ಲ.ಅವರ ವಚನಗಳಲ್ಲಿ ಆತ್ಮ ನಿರೀಕ್ಷಣೆ,ಸಾಮಾಜಿಕ‌ ವರ್ಗ,ಲಿಂಗ ಭೇದ,ಶೋಷಣೆ ಹೊಡೆದು ಹಾಕಿ ಸಕಲ ಜೀವಾತ್ಮರಿಗೆ ಲೇಸ ಬಯಸಿದ ಚೇತನ ಬಸವಣ್ಣ.ಜಗತ್ತಿನ ಮಹತ್ವದ ಚಿಂತಕರಾದ ಅಬ್ರಹಾಂ ಲಿಂಕನ್,ಕಾರ್ಲ್ ಮಾರ್ಕ್ಸ್, ಮಹಾತ್ಮ ಗಾಂಧಿ,ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮೊದಲಾದ ಎಲ್ಲರ ಚಿಂತನೆಗಳ ಸಮಗ್ರ ಮೊತ್ತವೇ ಬಸವಣ್ಣನವರಾಗಿದ್ದಾರೆ . ಸುಮಾರು 23 ಸಾವಿರಕ್ಕೂ ಹೆಚ್ಚು ವಚನಗಳು ಲಭ್ಯ ಇವೆ ಇವುಗಳಲ್ಲಿ ಬಹುತೇಕ ವಚನಗಳು ಪ್ರಶ್ನೆ ರೂಪದಲ್ಲಿವೆ, ಪ್ರಶ್ನೆ,ಪ್ರತಿಭಟನೆ ,ನಿರಾಕರಣ ತತ್ವಗಳ ಮೂಲಕ‌ ಜಡಗೊಂಡ ಸಮಾಜಕ್ಕೆ ಚಲನಶೀಲತೆ ತಂದುಕೊಟ್ಟವು.ನಡೆ ಮತ್ತು ನುಡಿ ಒಂದಾಗುವುದೇ ಶರಣತ್ವ ಎಂದರು.

ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ,ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ,ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ,ಬಸವರಾಜ ಸೂರಗೊಂಡ,ಎಂ.ಆರ್.ಶರಣ್ಣವರ,ಎಸ್‌.ಎ.ತಿಗಡಿ,ಶಂಕರ ಕುಂಬಿ ಮತ್ತಿತರರು ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top