ದಾವಣಗೆರೆ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ (guarantee scheme) ಜನರ ಆರ್ಥಿಕಾಭಿವೃದ್ದಿಯಾಗುತ್ತಿದ್ದು ಯೋಜನೆಗಳ ಅನುಷ್ಟಾನಕ್ಕೆ ಅಪಸ್ವರವೆತ್ತಿದವರು ರಾಜ್ಯಕ್ಕೆ ಬಂದು ಗ್ಯಾರಂಟಿ ಯೋಜನೆಗಳ ಅಧ್ಯಯನ ಮಾಡುವಂತಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಜೀವನ ಮಟ್ಟ ಸುಧಾರಣೆ
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಇಂಧನ, ಸಾರಿಗೆ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳಿಂದ ಏರ್ಪಡಿಸಲಾದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕಚೇರಿ ಉದ್ಘಾಟನೆ ನೆರವೇರಿಸಿ ಸಮಾರಂಭದಲ್ಲಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದು ಕಷ್ಟ, ಇದರಿಂದ ಆರ್ಥಿಕ ನಷ್ಟವಾಗಿ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ವಿರೋಧ ಪಕ್ಷದವರು ಮಾತನಾಡುತ್ತಿದ್ದರು. ಆದರೆ ಯೋಜನೆಗಳನ್ನು ಕಳೆದೆರಡು ವರ್ಷಗಳಿಂದ ಯಶಸ್ವಿಯಾಗಿ ಅನುಷ್ಟಾನ ಮಾಡಲಾಗಿದೆ.
ಯಶಸ್ವಿಯಾದ ಯೋಜನೆಗಳ ಕುರಿತು ವಿವಿಧ ರಾಜ್ಯಗಳು ಕರ್ನಾಟಕಕ್ಕೆ ಬಂದು ಅಧ್ಯಯನ ಮಾಡುವಂತಾಗಿದೆ. ಪ್ರತಿ ಕುಟುಂಬಕ್ಕೆ 4 ರಿಂದ 6 ಸಾವಿರದಷ್ಟು ಯೋಜನೆಗಳ ಲಾಭ ಸಿಗುತ್ತಿರುವುದರಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿದ್ದು ಪರೋಕ್ಷವಾಗಿ ಆರ್ಥಿಕಾಭಿವೃದ್ದಿಯಾಗಿ ಜೀವನ ನಿರ್ವಹಣಾ ಮಟ್ಟ ಹೆಚ್ಚಳವಾಗಿದೆ ಎಂದರು.
ಪ್ರತಿ ತಿಂಗಳು 1 ರಿಂದ 5 ನೇ ತಾರೀಖಿನೊಳಗೆ ತಲುಪಿಸಲು ಕ್ರಮ
ಪಂಚ ಗ್ಯಾರಂಟಿ ನೇರವಾಗಿ ಜನರಿಗೆ ತಲುಪುವುದರಿಂದ ಇನ್ನೂ ಪಾರದರ್ಶಕವಾಗಿ ಯೋಜನೆಗಳನ್ನು ಅನುಷ್ಟಾನ ಮಾಡಿ ಜನರಿಗೆ ತಲುಪಿಸುವ ಕೆಲಸವನ್ನು ಸಮಿತಿಯಿಂದ ಮಾಡಬೇಕಾಗಿದೆ. ಆರ್ಥಿಕ ಸೌಲಭ್ಯ ನೀಡುವ ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳನ್ನು ಪ್ರತಿ ತಿಂಗಳು 1 ರಿಂದ 5 ನೇ ತಾರೀಖಿನೊಳಗೆ ತಲುಪಿಸುವಂತೆ ಮಾಡಬೇಕೆಂದರು.
ಜಿಲ್ಲೆಗೆ ಬಿಡುಗಡೆಯಾದ ಅನುದಾನ
ಶಕ್ತಿ ಯೋಜನೆಯಡಿ ದಾವಣಗೆರೆ ಕೆಎಸ್ಆರ್ ಟಿ ಸಿಗೆ ರೂ.213.48 ಕೋಟಿ, ಅನ್ನಭಾಗ್ಯ ಯೋಜನೆಯಡಿ 3.44 ಲಕ್ಷ ಕಾರ್ಡ್ದಾರರು ಹಾಗೂ 12.42 ಲಕ್ಷ ಫಲಾನುಭವಿಗಳಿಗೆ ರೂ.346 ಕೋಟಿ, ಗೃಹಜ್ಯೋತಿ ಯೋಜನೆಯಡಿ 5.03 ಲಕ್ಷ ಆರ್.ಆರ್.ಸಂಖ್ಯೆ ಹೊಂದಿದ ಕುಟುಂಬಗಳಿಗೆ ರೂ.409 ಕೋಟಿ ವಿದ್ಯುತ್ ಸಬ್ಸಿಡಿ, ಗೃಹಲಕ್ಷ್ಮಿಯಡಿ 3.6 ಲಕ್ಷ ಯಜಮಾನಿಯರಿಗೆ ರೂ.1255 ಕೋಟಿ ಮತ್ತು ಯುವನಿಧಿಯಡಿ 9094 ವಿದ್ಯಾರ್ಥಿಗಳಿಗೆ ರೂ.13 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗೆ 82 ಸಾವಿರ ಕೋಟಿ ವೆಚ್ಚ
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರು ನೂತನ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಕಳೆದೆರಡು ವರ್ಷಗಳಲ್ಲಿ ರೂ.82 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರ ಯೋಜನೆಗಳನ್ನು ಬರೀ ಚುನಾವಣೆಗಾಗಿ ರೂಪಿಸಿಲ್ಲ, ಜನರ ಕಲ್ಯಾಣಕ್ಕಾಗಿ ಅನುಷ್ಟಾನ ಮಾಡುತ್ತಿದೆ ಎಂದರು.
ಪಂಚ ಗ್ಯಾರಂಟಿ ಯಶಸ್ವಿ
ಉಳುವವನೇ ಭೂ ಒಡೆಯ, ಪದವೀಧರರಿಗೆ ಸ್ಟೈಫಂಡ್, ಸಿಇಟಿ ಮೂಲಕ ಉನ್ನತ ವ್ಯಾಸಂಗಕ್ಕೆ ಆಯ್ಕೆ, ರೈತರಿಗೆ ಉಚಿತ ವಿದ್ಯುತ್, ಬೆಂಗಳೂರು ಐಟಿ, ಬಿಟಿ ನಗರವನ್ನಾಗಿ ಅಭಿವೃದ್ದಿ, ಕಳೆದ ಸರ್ಕಾರದ ಅವಧಿಯಲ್ಲಿ ನೀಡಿದ 165 ಭರವಸೆಗಳಲ್ಲಿ ಎಲ್ಲವನ್ನು ಈಡೇರಿಸಲಾಗಿದೆ. ಈಗ ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನ ಮಾಡಿದ್ದು ಈ ಯೋಜನೆಗಳು ಮನೆ ಮಾತಾಗಿವೆ ಎಂದರು.
ಹಿಂದೆ ಗುಜರಾತ್ ಮಾದರಿ ಎಂದು ಹೇಳಲಾಗುತ್ತಿತ್ತು,ಲ. ಆದರೆ ಈಗ ಕರ್ನಾಟಕ ಮಾದರಿ ಎಂದು ಹೇಳುವಂತಾಗಿದ್ದು ಅನೇಕ ರಾಜ್ಯಗಳು ನಮ್ಮ ಪಂಚ ಗ್ಯಾರಂಟಿಗಳನ್ನು ಅನುಕರಣೆ ಮಾಡುವ ನಿಟ್ಟಿನಲ್ಲಿ ಸಾಗಿವೆ. ಪಂಚ ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 450 ಕೋಟಿಯಷ್ಟು ಮಹಿಳೆಯರು ಎಲ್ಲಾ ಜಿಲ್ಲೆಗಳಿಂದ ಪ್ರಯಾಣಿಸಿದ್ದು ಇದಕ್ಕಾಗಿ ರೂ.11188 ಕೋಟಿ ವೆಚ್ಚ ಭರಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಕಾರ್ಡ್ದಾರರಿಗೆ ರೂ.11821 ಕೋಟಿ, ಗೃಹಜ್ಯೋತಿಯಡಿ 1.63 ಕೋಟಿ ಕುಟುಂಬಗಳಿಗೆ ರೂ.14950 ಕೋಟಿ, ಗೃಹಲಕ್ಷ್ಮಿಯಡಿ 1.22 ಕೋಟಿ ಯಜಮಾನಿಯರಿಗೆ ರೂ.42552 ಕೋಟಿ ಮತ್ತು ಯುವನಿಧಿಯಡಿ 2.74 ಲಕ್ಷ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ರೂ.326.95 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದ್ದು ಪಂಚ ಗ್ಯಾರಂಟಿ ಯೋಜನೆಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ರೂ.82000 ಕೋಟಿಯಷ್ಟು ವೆಚ್ಚ ಮಾಡಲಾಗಿದೆ. ಇದರಿಂದ ಮಹಿಳೆಯರ ಆದಾಯ ಹೆಚ್ಚಳವಾಗಿ ಕೊಡು, ಕೊಳ್ಳುವಿಕೆ ಸಾಮಥ್ರ್ಯ ಹೆಚ್ಚಿದೆ. ಯಾವುದೇ ಕಾರಣಕ್ಕೂ ಈ ಯೋಜನೆಗಳು ನಿಲ್ಲುವುದಿಲ್ಲ ಎಂದರು.
ಸಾಲಗಳಿಗೆ ಜಮಾ ಮಾಡದಂತೆ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು
ಮಾಯಕೊಂಡ ಕ್ಷೇತ್ರದ ಶಾಸಕ ಕೆ,ಎಸ್.ಬಸವಂತಪ್ಪ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರಜೆಗಳ ಹಿತಕ್ಕಾಗಿ ಜಾರಿಗೊಳಿಸಲಾಗಿದ್ದು, ನಿರಂತರ 2 ವರ್ಷಗಳಿಂದ ಈ ಯೋಜನೆಯ ನೀಡುತ್ತಾ ಬಂದಿದೆ. ಇಂತಹ ಯೋಜನೆಗಳನ್ನು ಅರ್ಹ ಫಲಾನುಭವಿಗೆ ತಲುಪಿಸುವ ಸಲುವಾಗಿ ಗ್ಯಾರಂಟಿ ಯೋಜನಾ ಸಮಿತಿ ಸ್ಥಾಪಿಸಲಾಗಿದೆ. ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆಯಡಿ ನೀಡುವ ಹಣವನ್ನು ಯಾವುದೇ ಬ್ಯಾಂಕ್ಗಳು ಇತರೆ ಸಾಲಗಳಿಗೆ ಜಮಾ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಕ್ರಮ ವಹಿಸಬೇಕೆಂದರು.
ಮಧ್ಯವರ್ತಿಗಳ ಹಾವಳಿ ಇಲ್ಲ
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಗ್ಯಾರಂಟಿ ಅನುಷ್ಠಾನ ಸಮತಿಯಿಂದ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡಲಾಗುತ್ತದೆ. ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಿಂದ ಬಡವರು, ಮಧ್ಯಮ ವರ್ಗದ ಪ್ರತಿ ಕುಟುಂಬವೂ ಪ್ರೀತಿ, ಸಹಬಾಳ್ವೆ, ಸಾಮರಸ್ಯದಿಂದ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ. ಜಿ.ಎಂ.ಗಂಗಾಧರಸ್ವಾಮಿ, ಜಿ.ಪಂ. ಸಿಇಓ ಸುರೇಶ್ ಬಿ.ಇಟ್ನಾಳ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಶಾಮನೂರು ಟಿ. ಬಸವರಾಜ್, ದೂಡ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ರಾಜ್ಯ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಮಾಜಿ ಮೇಯರ್ ಚಮನ್ ಸಾಬ್, ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಉಪಾಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.