ವಿಜಯನಗರ: ಜಿಲ್ಲೆಯ ಹೊಸಪೇಟೆ ಮತ್ತು ದಾವಣಗೆರೆ ನಡುವಿನ ನೂತನ ಡೆಮು ರೈಲಿಗೆ ಇಂದು( ಏ.11) ಚಾಲನೆ ನೀಡಲಾಯಿತು.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಇಂದು ಹೊಸಪೇಟೆ ರೈಲು ನಿಲ್ದಾಣದಲ್ಲಿ ಹೊಸಪೇಟೆ-ದಾವಣಗೆರೆ-ಹರಿಹರ ಡೆಮು ರೈಲುಗೆ ಚಾಲನೆ ನೀಡಿದರು. ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಸಹ ಭಾಗಿಯಾಗಿದ್ದರು. ಈ ವೇಳೆ ಪ್ರಯಾಣಿಕರು ಹೊಸ ರೈಲು ಸೇವೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಡೆಮು ರೈಲು ವೇಳಾಪಟ್ಟಿ: ಏಪ್ರಿಲ್ 4ರಿಂದ ಈ ರೈಲು ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಏಪ್ರಿಲ್ 11ರಿಂದ ರೈಲು ಸಂಚಾರ ಆರಂಭವಾಗಿದೆ. ಇದರಿಂದಾಗಿ ಹಲವು ದಿನಗಳ ವಿಜಯನಗರ ಜಿಲ್ಲೆಯ ಜನರ ಬೇಡಿಕೆ ಈಡೇರಿದಂತಾಗಿದೆ.
ಪ್ರತಿದಿನ ಬೆಳಿಗ್ಗೆ 9.40ಕ್ಕೆ ಹೊಸಪೇಟೆಯಿಂದ ನಿರ್ಗಮಿಸಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು ಮಾರ್ಗವಾಗಿ ಮಧ್ಯಾಹ್ನ 1.30ಕ್ಕೆ ದಾವಣಗೆರೆ ತಲುಪಲಿದೆ. ಅಲ್ಲಿಂದ ಹರಿಹರಕ್ಕೆ ತೆರಳಿ ಮಧ್ಯಾಹ್ನ 3ಕ್ಕೆ (ಗಾಡಿ ಸಂಖ್ಯೆ 07396) ಬಂದ ಮಾರ್ಗದಲದಲಿಯೇ ರಾತ್ರಿ 8ಕ್ಕೆ ಹೊಸಪೇಟೆಗೆ ತಲುಪಲಿದೆ.
ಇದರ ಜೊತೆಗೆ ಹೊಸಪೇಟೆ-ಬಳ್ಳಾರಿ (ಗಾಡಿ ಸಂಖ್ಯೆ: 07397) ರೈಲು ಸಹ ಪರೀಕ್ಷಾರ್ಥ ಪ್ರತಿದಿನ ಬೆಳಿಗ್ಗೆ 6ಕ್ಕೆ ಹೊಸಪೇಟೆಯಿಂದ ನಿರ್ಮಿಸಿ 7.40ಕ್ಕೆ ಬಳ್ಳಾರಿ ತಲುಪಲಿದೆ. ಬಳ್ಳಾರಿಯಿಂದ (ಗಾಡಿ ಸಂಖ್ಯೆ: 07398) 7.50ಕ್ಕೆ ಬಿಟ್ಟು 9.30ಕ್ಕೆ ಹೊಸಪೇಟೆ ಸೇರಲಿದೆ.
ದರ ಪಟ್ಟಿ:ಹೊಸಪೇಟೆ-ಹೆಚ್. ಬಿ. ಹಳ್ಳಿ 10 ರೂ., ಹೊಸಪೇಟೆ-ಕೊಟ್ಟೂರು 25 ರೂ., ಹೊಸಪೇಟೆ-ದಾವಣಗೆರೆ 35 ರೂ., ಹೊಸಪೇಟೆ-ಹರಿಹರ 35 ರೂ., ಹೊಸಪೇಟೆ-ಬಳ್ಳಾರಿ ಕಂಟೋನ್ಮೆಂಟ್ 15 ರೂ., ಹೊಸಪೇಟೆ-ಬಳ್ಳಾರಿ 20 ರೂ.ಗಳು.
ಈ ಡೆಮು ರೈಲಿನಿಂದ ಹೊಸಪೇಟೆ-ದಾವಣಗೆರೆ ನಡುವೆ ಸಂಚರಿಸುವ ಜನರಿಗೆ ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ಜನರು ಸಂಚಾರ ನಡೆಸಬಹುದಾಗಿದೆ. ಹಂಪಿ ಹೊಸಪೇಟೆಯಿಂದ 10 ಕಿ. ಮೀ. ದೂರದಲ್ಲಿದೆ. ಇದರಿಂದ ಪ್ರವಾಸಿಗರಿಗೆ ಸಹ ಅನುಕೂಲವಾಗಲಿದೆ. ಇನ್ನು ಬಳ್ಳಾರಿಯಿಂದ ವಾಣಿಜ್ಯ, ಶೈಕ್ಷಣಿಕ ನಗರಿ ದಾವಣಗೆರೆಗೆ ಸಂಚಾರ ಅನುಕೂಲವಾಗಲಿದೆ.
ಉಭಯ ನಗರಗಳ ನಡುವೆ ಪ್ರತಿದಿನ ವಿದ್ಯಾರ್ಥಿಗಳು, ವ್ಯಾಪಾರಿಗಳು, ಪ್ರವಾಸಿಗರು ಸಂಚಾರ ನಡೆಸುತ್ತಾರೆ. ಅವರಿಗೆ ಅನುಕೂಲವಾಗಲಿದೆ. ಡೆಮು ರೈಲಿನಿಂದ ಹೆಚ್ಚಿನ ಆಸನ ಸಿಗಲಿದ್ದು, ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 2014ರ ಮಾರ್ಚ್ 3ರಂದು ಕೊಟ್ಟೂರು-ಹರಿಹರ ನಡುವಿನ ರೈಲು ಸಂಚಾರಕ್ಕೆ ಅಂದಿನ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದ್ದರು.



