ದಾವಣಗೆರೆ: ನಗರದ ಪ್ರಸಿದ್ಧ ಮಾಲ್ ಗಳಲ್ಲೊಂದಾದ ಎಸ್ ಎಸ್ ಮಾಲ್ ನಿರ್ಮಾಣ ವೇಳೆ ಸಾರ್ವಜನಿಕ ರಸ್ತೆ, ಉದ್ಯಾನವ ಒತ್ತುವರಿ ಮಾಡಿದ್ದಾರೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಆರೋಪಿಸಿದ್ದರು. ಈ ಆರೋಪದಲ್ಲಿ ಹುರುಳಿಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಹೇಳಿದ್ದಾರೆ.
ಗಾಂಜಿ ವೀರಪ್ಪ ಕುಟುಂಬದಿಂದ ಖರೀದಿಸಿದ ಜಮೀನಿನಲ್ಲಿ ನಿರ್ಮಿಸಲಾದ ಎಸ್.ಎಸ್. ಮಾಲ್ನಲ್ಲಿ ಸಾರ್ವಜನಿಕ ರಸ್ತೆ, ಉದ್ಯಾನಕ್ಕೆ ಬಿಟ್ಟ ಜಾಗ ಒತ್ತುವರಿ ಮಾಡಲಾಗಿದೆ. ಉದ್ಯಮಿ ಎಸ್.ಎಸ್. ಗಣೇಶ್ ಅವರ ಹೆಸರಿಗೆ ಇಡೀ ಜಾಗವನ್ನು ಏಕನಿವೇಶನವಾಗಿ ಪರಿವರ್ತಿಸಲಾಗಿದೆ. ಈ ಸಂದರ್ಭದಲ್ಲಿ ಪಾಲಿಕೆ ಮತ್ತು ಹಿಂದಿನ ದೂಡಾ ಅಧಿಕಾರಿಗಳು ತಪ್ಪು ಎಸಗಿದ್ದಾರೆ ಸುದ್ದಿಗೋಷ್ಠಿಯಲ್ಲಿ ರಾಜನಹಳ್ಳಿ ಶಿವಕುಮಾರ್ ಹೇಳಿದ್ದರು.
ಏಕ ನಿವೇಶನವಾಗಿ ಪರಿವರ್ತಿಸಬೇಕಾದರೆ, ಒಂದು ಸೈಟ್ ಕೂಡ ಮಾರಾಟ ಮಾಡಿರಬಾರದು ಎಂದು ನಿಯಮವಿದೆ. ಆದರೆ, ನಿಯಮ ಉಲ್ಲಂಘಿಸಿ ಅಧಿಕಾರಿಗಳು ಏಕನಿವೇಶನ ಮಾಡಿಕೊಟ್ಟಿದ್ದಾರೆ. ಈ ವೇಳೆ ನಿವೇಶನ ರಸ್ತೆ, ಪಾರ್ಕ್ ಒತ್ತುವರಿಯಾಗಿದೆ. 30 ಅಡಿ ಉದ್ದದ ಎರಡು ರಸ್ತೆ ಒತ್ತುವರಿಯಾಗಿದೆ. ಹೀಗಾಗಿ ಎಷ್ಟೇ ಪ್ರಭಾವಿಗಳಾಗಿದ್ದರೂ ಒತ್ತುವರಿ ತೆರವುಗೊಳಿಸಲಾಗುವುದು ಎಂದರು.
ದೂಡಾ ನಿಯಮ ಪಾಲನೆ ಮಾಡದಿದ್ದರೆ. ಬಡಾವಣೆ ರದ್ದುಪಡಿಸುವ ಅಧಿಕಾರ ದೂಡಾಗೆ ಇದೆ. ರಸ್ತೆ, ಪಾರ್ಕ್ ಒತ್ತು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ಸಹ ಇದ್ದು, ಎಸ್ ಎಸ್ ಮಾಲ್ ಬಳಿಯ ಒತ್ತುವರಿ ತೆರವುಗೊಳಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜನಹಳ್ಳಿ ಶಿವಕುಮಾರ್ ಹೇಳಿದರು.
ಏಕ ನಿವೇಶನ ಆದೇಶ ರದ್ದುಪಡಿಸಲು ದೂಡಾ ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಕಾನೂನು ಪ್ರಕ್ರಿಯೆ ಬಳಿಕ ಒತ್ತುವರಿ ತೆರವುಗೊಳಿಸಲಾಗುವುದು. ಒತ್ತುವರಿ ಮಾಡಿಕೊಂಡಿರುವ ದೂಡಾ ವ್ಯಾಪ್ತಿಯಲ್ಲಿನ ಸರ್ಕಾರಿ ಜಾಗ, ಸಾರ್ವಜನಿಕ ಆಸ್ತಿ, ಕೆರೆ, ಉದ್ಯಾನ, ರಸ್ತೆಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ರಾಜನಹಳ್ಳಿ ಶಿವಕುಮಾರ್ ಹೇಳಿದ್ದರು.
ಸಾರ್ವಜನಿಕ ಆಸ್ತಿ ಕಬಳಿಕೆ ಕುರಿತು ಯಾರೇ ದಾಖಲೆ ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವ ಪಕ್ಷದವರು ಬೇಕಾದರೂ ಇರಲಿ, ಎಷ್ಟೇ ಪ್ರಭಾವಿಗಳೂ ಇದ್ದರೂ ಸರಿಯೇ, ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡರೆ ಕ್ರಮ ಕೈಗೊಳ್ಳಲಾಗುವುದು. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಹಲವು ಅಕ್ರಮ ನಡೆದಿದೆ. ನಿಯಮ ಬಾಹಿರವಾಗಿ ಅಧಿಕಾರಿಗಳೂ ಅಕ್ರಮಕ್ಕೆ ಸಾಥ್ ನೀಡಿದ್ದಾರೆ. ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರೋಪದಲ್ಲಿ ಹುರುಳಿಲ್ಲ: ಕಾಂಗ್ರೆಸ್
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಯಾವುದೇ ಒತ್ತುವರಿಯಾಗಿಲ್ಲ. ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತೇ ವಿನಃ, ಯಾವುದೇ ರೀತಿ ಒತ್ತುವರಿ ಮಾಡಿಲ್ಲ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಆರೋಪದಲ್ಲಿ ಸತ್ಯಾಂಶವಿಲ್ಲ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತರಲಾಗಿದೆ. ದೂಡಾ ಅಧ್ಯಕ್ಷರು ಪ್ರಚಾರಕ್ಕಾಗಿ ಇಂತಹ ಆರೋಪ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದು ಒಂದು ವರ್ಷ ಕಳೆದಿದೆ. ಸರ್ಕಾರ ಸಾಧನೆ ಬಗ್ಗೆ ಮಾತನಾಡುವ ಬದಲು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಕೆ. ಚಮನ್ ಸಾಬ್, ಕೆ.ಎಂ ಮಂಜುನಾತ್, ಉದಯ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.