ದಾವಣಗೆರೆ: ಡಿಸೆಂಬರ್ 11 ರಿಂದ 15ರವರೆಗೆ ಐದು ದಿನ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸ್ವದೇಶಿ ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್- ಕರ್ನಾಟಕದ ಕೆ.ಜಗದೀಶ್ ಹೇಳಿದರು.
ಜನರಿಗೆ ಸ್ವದೇಶಿ ವಸ್ತುಗಳ ಪರಿಚಯಿಸುವ ಜೊತೆಗೆ ಸ್ಥಳೀಯ ಉತ್ಪಾದಕರಿಗೆ ಮಾರುಕಟ್ಟೆ ಕೊಡುವ ದೃಷ್ಟಿಯಿಂದ ಸ್ವದೇಶಿ ಮೇಳ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಮೇಳದಲ್ಲಿ ಸುಮಾರು 250ಕ್ಕೂ ಹೆಚ್ಚು ವಿವಿಧ ರೀತಿಯ ಮಳಿಗೆಗಳು ಇರಲಿವೆ. ದೇಶೀಯ ಕ್ರೀಡೆ, ಆಹಾರಗಳು, ಉಡುಗೆ-ತೊಡುಗೆಗಳು, ಹಸುಗಳ ಪ್ರದರ್ಶನ, ವೈವಿದ್ಯಮಯ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ರೀತಿಯ ತರಬೇತಿ ಶಿಬಿರಗಳು ನಡೆಯಲಿವೆ. ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, 2 ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಡಿಸೆಂಬರ್ 11ರ ಸಂಜೆ 5.30ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಚಲನಚಿತ್ರ ನಟಿ ತಾರಾ ಅನುರಾಧ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಜವಳಿ ಉದ್ಯಮಿ ಬಿ.ಸಿ.ಉಮಾಪತಿ, ಸ್ವದೇಶಿ ಚಿಂತಕ ಶಿವಮೊಗ್ಗದ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಯೋಜಕ ಎಸ್.ಟಿ.ವೀರೇಶ್, ಎಸ್.ಚೇತನ್, ಮಂಜುಳಾ ಮಹೇಶ್, ಪ್ರದೀಪ್, ಶರತ್ ಇದ್ದರು.



