ದಾವಣಗೆರೆ: ಜಗತ್ತಿನಾದ್ಯಂತ ವಿಶಿಷ್ಟ ಅನುಭವ ನೀಡಿದ ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉತ್ತಮ ಫಲಿತಾಂಶ ಪಡೆಯುವಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶಿಕ್ಷಣ ಆಯುಕ್ತರ ನಿರ್ದೇಶನದ ಮೇರೆಗೆ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ ಪ್ರಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ ನೀಡಲು ಏರ್ಪಡಿಸಲಾಗಿದ್ದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನವರಿ 1 ರಿಂದ ಹತ್ತನೇ ತರಗತಿಗಳನ್ನು ಆರಂಭಿಸಲಾಗಿದೆ. ಪ್ರಾರಂಭದಲ್ಲಿ ಹಾಜರಾತಿ ಕಮ್ಮಿ ಇದ್ದು ಈಗ ಶೇ.75 ಇದೆ. ಇನ್ನುಳಿದ ಮಕ್ಕಳನ್ನೂ ಮನವೊಲಿಸಿ ಶಾಲೆಗೆ ಕರೆತರುವ ಯತ್ನ ಮಾಡಬೇಕು. ನಾಲ್ಕು ತಿಂಗಳ ಅವಧಿಯಲ್ಲಿ ಒಂದು ವರ್ಷದ ಪಾಠಗಳನ್ನು ಪೂರ್ಣಗೊಳಿಸಿ, ಪರೀಕ್ಷೆಗೆ ಸಜ್ಜುಗೊಳಿಸುವ ಸವಾಲು ಶಿಕ್ಷಕರ ಮುಂದಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಸಹಕರಿಸಲು ಮತ್ತು ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ತಂದುಕೊಡಲು ‘ಸಂಕಲ್ಪ-2021’ ಮಾರ್ಗಸೂಚಿಗಳನ್ನು ಪ್ರೌಢಶಿಕ್ಷಕರಿಗೆ ಬಿಡುಗಡೆಗೊಳಿಸಿದೆ ಎಂದರು.
ಕಳೆದ ಬಾರಿ ಜಿಲ್ಲೆಯಲ್ಲಿ ಎರಡು ಶಾಲೆಗಳಲ್ಲಿ ಶೇ.0 ಫಲಿತಾಂಶ ಬಂದಿತ್ತು.. ಶಿಕ್ಷಕರು ಶ್ರದ್ದೆ ಮತ್ತು ಬದ್ದತೆಯಿಂದ ಮಕ್ಕಳಿಗೆ ಕಲಿಸಿ ಉತ್ತಮ ಫಲಿತಾಂಶ ಬರುವಲ್ಲಿ ಶ್ರಮಿಸಬೇಕು. ಈ ಬಾರಿ ಹೀಗೆ ಶೇ.0 ಬರುವ ಶಾಲೆಗಳನ್ನು ಮುಚ್ಚಲು ಕ್ರಮ ವಹಿಸಿ, ಅಂತಹ ಶಿಕ್ಷಕರ ವಿರುದ್ದ ಶಿಸ್ತಿನ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಕೂಡ ಆನ್ಲೈನ್ ಶಿಕ್ಷಣಕ್ಕೆ ಪ್ರಯತ್ನಿಸಲಾಗಿತ್ತು. ವಿದ್ಯಾಗಮ, ಓದುವ ಬೆಳಕು ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿತ್ತು. ಆದರೆ ಎಸ್ಎಸ್ಎಲ್ಸಿ ಪರೀಕ್ಷೆ ಹತ್ತಿರವೇ ಇದ್ದು ಇದು ನಿಜವಾದ ಸವಾಲಿನ ಸಮಯ ಆಗಿದೆ. ಇನ್ನು ಎರಡು ತಿಂಗಳ ಒಳಗೆ ವಿದ್ಯಾರ್ಥಿಗಳನ್ನು ಎಸ್ಎಸ್ಎಲ್ಸಿ ಪರೀಕ್ಷೆಗೆ ಸಜ್ಜುಗೊಳಿಸಬೇಕಿದ್ದು, ಮಕ್ಕಳು ಖುಷಿಯಿಂದ ಕಲಿಯುವ ವಾತಾವರಣ ನಿರ್ಮಿಸಬೇಕು ಎಂದರು.
ಕೊರೊನಾ ಕಾಲದಲ್ಲಿಯೂ ಉತ್ತಮ ಸೇವೆ ಸಲ್ಲಿಸಿರುವ ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ನಾನು ಮತ್ತು ಸಿಇಓ ಸದಾ ನಿಮ್ಮೊಟ್ಟಿಗಿದ್ದೇವೆ. ಅತ್ಯಂತ ಹುಮ್ಮಸ್ಸಿನಿಂದ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು ಹಾಗೂ ಎಸ್ಎಸ್ಎಲ್ಸಿ ಯಲ್ಲಿ ಶೇ.100 ಫಲಿತಾಂಶ ತರಲು ಹಗಲು ಇರುಳು ಶ್ರಮಿಸುತ್ತೇನೆಂದು ನಿರ್ಧಾರ ಕೈಗೊಳ್ಳಬೇಕೆಂದರು.
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರೌಢಶಾಲಾ ಮುಖ್ಯ ಶಿಕ್ಷಕರು ಜಿಲ್ಲಾ ಕೇಂದ್ರಗಳಿಗೆ ಸಭೆ, ಇನ್ನಿತರೆ ಕಾರ್ಯಕ್ರಮ ಎಂದು ಅಲೆದಾಡುವಂತಿಲ್ಲ. ಡಿಡಿಪಿಐ, ಬಿಇಓ, ಇಓ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೇ ತಾಲ್ಲೂಕುಗಳಿಗೆ ಮತ್ತು ಶಾಲೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಬೇಕು.
ಕಳೆದ ಬಾರಿ ಎಸ್ಎಸ್ಎಲ್ಸಿ ಯಲ್ಲಿ ಜಿಲ್ಲೆಯ 41 ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿತ್ತು. ಈ ಬಾರಿ ಇನ್ನೂ ಹೆಚ್ಚಿನ ಶಾಲೆಗಳಲ್ಲಿ ಶೇ.100 ಫಲಿತಾಂಶ ಬರಬೇಕು. ಹೀಗೆ ಶೇ.100 ಫಲಿತಾಂಶ ಕೊಡುವ ಶಾಲೆಯ ಮುಖ್ಯೋಪಾಧ್ಯಾಯರನ್ನು ದೊಡ್ಡ ಕಾರ್ಯಕ್ರಮ ಏರ್ಪಡಿಸಿ ಸನ್ಮಾನಿಸಿ ಗೌರವಿಸಲಾಗುವುದು.
ಶಿಕ್ಷಕ ಎಂದಿಗೂ ಕಲಿಯುವ ವಿದ್ಯಾರ್ಥಿ. ತರಗತಿಗೂ ಮುನ್ನ ವಿಷಯದ ಬಗ್ಗೆ ಸಿದ್ದತೆ ನಡೆಸಿಕೊಂಡು ಮಕ್ಕಳಿಗೆ ಹೇಳಿಕೊಡಬೇಕು. ನಾವೀನ್ಯ ತಂತ್ರಗಳನ್ನು ಬಳಸಿ ಅರ್ಥವಾಗುವಂತೆ ಮಕ್ಕಳಿಗೆ ಪ್ರೀತಿಯಿಂದ ಪಾಠ ಹೇಳಿಕೊಟ್ಟಲ್ಲಿ ಫಲಿತಾಂಶದಲ್ಲಿ ಹೆಚ್ಚಳ ಕಾಣಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ, ಎಂ.ನಿರಂಜನಮೂರ್ತಿ, ಜಿ.ಕೊಟ್ರೇಶ್, ರಾಜೀವ್, ವೆಂಕಟೇಶ್, ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಡಿ.ಡಿ.ಹಾಲಪ್ಪ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥಯ್ಯ ಹಾಜರಿದ್ದರು.