ದಾವಣಗೆರೆ: ಜಿಲ್ಲೆಯಾದ್ಯಂತ ಇಂದು (ಮೇ.3) ಬೆಳಗಿನ ಜಾವ ಗುಡುಗು ಸಹಿತ ಜೋರು ಮಳೆಯಾಗಿದೆ. ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದ್ದು, ಇದು ಮುಂಗಾರಿನ ಕೃಷಿ ಚಟುವಟಿಕೆ ಪೂರಕವಾಗಿದೆ.
ಈ ಹದ ಮಳೆಯಿಂದ ಮಳೆ ಆಶ್ರಿತ ಬೆಳೆ ಬೆಳೆಯವ ರೈತರು ಜಮೀನುಗಳನ್ನು ಉಳುಮೆ ಮಾಡಿಕೊಳ್ಳಲು ಅನುಕೂಲವಾಗಿದೆ. ಇದಲ್ಲದೆ, ತೀವ್ರ ಬಿಸಿಲಿನಿಂದ ಒಣಗುತ್ತಿದ್ದ ತೋಟಗಾರಿಕೆ ಬೆಳೆಗೆ ಹಸಿ ಮಳೆಯಾಗಿದೆ. ಈ ಮಳೆ ರೈತರ ಮುಖದಲ್ಲಿ ಸಂತಸ ಮನೆಮಾಡಿದೆ.
ಬೆಳಗಿನ ವರೆಗೂ ಬಿಡದ ಮಳೆ
ಬೆಳಗಿನ ಜಾವ 3ಗಂಟೆ ವೇಳೆಗೆ ಗುಡುಗಿನ ಆರ್ಭಟದೊಂದಿಗೆ ಆರಂಭವಾದ ಮಳೆ ಕೆಲ ಹೊತ್ತು ಜೋರು ಮಳೆ ಸುರಿಯಿತು. ನಂತರ ಬೆಳಿಗ್ಗೆ 8 ಗಂಟೆ ವರೆಗೂ ಜಿಟಿಜಿಟಿ ಮಳೆಯಾಗಿದೆ. ಹರಿಹರ, ದಾವಣಗೆರೆ,ನ್ಯಾಮತಿ, ಹೊನ್ನಾಳಿ, ಮಾಯಕೊಂಡ, ಸಂತೇಬೆನ್ನೂರು, ಚನ್ನಗಿರಿ ಸಹಿತ ಬಹುತೇಕ ಕಡೆ ಮಳೆಯಾಗಿದೆ.
ಮುಂಗಾರು ಪೂರ್ವ ಉತ್ತಮ ಮಳೆ
ಈ ವರ್ಷ ಉತ್ತಮ ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೈತರ ಮುಂಗಾರಿನ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ಜಿಲ್ಲೆಯಲ್ಲಿ ನಾಲ್ಕೈದು ಉತ್ತಮ ಮುಂಗಾರು ಪೂರ್ವ ಮಳೆಯಾಗಿದ್ದು, ತಾಪಮಾನ ತೀವ್ರತೆ ತಗ್ಗಿಸಿವೆ.



