ದಾವಣಗೆರೆ: ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೇಲರ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 7 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೇಲರ್ ಇದ್ದಕ್ಕಿದ್ದಂತೆ ಕಳವು ಆಗುತ್ತಿದ್ದವು. ಈ ಬಗ್ಗೆ ಜಗಳೂರು ಮತ್ತು ಬಿಳಿಚೂಡು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣ ಪತ್ತೆ ಕಾರ್ಯಕ್ಕಾಗಿ ದಾವಣಗೆರೆ ಗ್ರಾಮಾಂತರ ರಾಣೆ ಡಿವೈಎಸ್ ಪಿ ಕನ್ನಿಕಾ ಸಕ್ರಿವಾಲ್ , ಜಗಳೂರು ಪ್ರಭಾರ ಡಿವೈಎಸ್ ಪಿ ಸತ್ಯನಾರಾಯಣ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜಗಳೂರು ಪಿಎಸ್ ಐಗಳಾದ ಎಲ್ .ಎಚ್. ಮಹೇಶ್ ಹಾಗೂ ಸಿ.ಎನ್. ಬಸವರಾಜ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಇಸಾಮುದ್ರ ಹೊಸಹಟ್ಟಿ ಗ್ರಾಮದ ಸುರೇಶ್ (23), ಅಜಯ್ (19) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಎರಡು ಟ್ರ್ಯಾಕ್ಟರ್ ಟ್ರೇಲರ್, ಕೃತ್ಯಕ್ಕೆ ಬಳಸಿದ ಒಂದು ಇಂಜಿನ್, ಎರಡು ಬೈಕ್ ಸೇರಿ ಒಟ್ಟು 7 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಗೆ ಎಸ್ ಪಿ ರಿಷ್ಯಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



