Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಧ್ಯೇಯ: ಜಿಲ್ಲಾ ಉಸ್ತುವಾರಿ ಸಚಿವ  ಭೈರತಿ ಬಸವರಾಜ  

ದಾವಣಗೆರೆ

ದಾವಣಗೆರೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಧ್ಯೇಯ: ಜಿಲ್ಲಾ ಉಸ್ತುವಾರಿ ಸಚಿವ  ಭೈರತಿ ಬಸವರಾಜ  

ದಾವಣಗೆರೆ: ಕೊರೊನಾ ಸವಾಲುಗಳನ್ನು ತಂದೊಡ್ಡಿದ್ದರೂ, ಲಸಿಕಾಕರಣ ಹಾಗೂ ವೈದ್ಯಕೀಯ ವ್ಯವಸ್ಥೆಯ ಅಭಿವೃದ್ಧಿ ಮೂಲಕ ಯಶಸ್ವಿಯಾಗಿ ಹಿಮ್ಮೆಟ್ಟಿಸಿರುವ ನಮ್ಮ ಸರ್ಕಾರ ಅಭಿವೃದ್ಧಿ ಪೂರಕ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ  ಬಸವರಾಜ ಹೇಳಿದರು.

ಜಿಲ್ಲಾಡಳಿತ ವತಿಯಿಂದ ಬುಧವಾರದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 73ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ನೆರೆವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿ ಅವರು ಮಾತನಾಡಿದರು.ಜಿ ಲ್ಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ವೇಗ ದೊರಕಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆಗಳಿಗೆ ಚಾಲನೆ ದೊರೆತಿದ್ದು, ಗ್ರಾಮೀಣ ಭಾಗದಲ್ಲಿ ಜನರು ಸ್ವಾವಲಂಬನೆಯಿಂದ ಬದುಕಲು ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ಕೆರೆಗಳಿಗೆ ನೀರುಣಿಸುವ ಯೋಜನೆಗಳು ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ರೈತರ ಸ್ವಾವಲಂಬಿ ಬದುಕಿನ ಕನಸು ನನಸಾಗುವಂತಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದ್ದು, ನಮ್ಮ ಸರ್ಕಾರ ಅಭಿವೃದ್ಧಿ ಪೂರಕ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.

ಕಳೆದೆರಡು ವರ್ಷ ಕಾಡಿದ ಕೊರೋನಾ ಮಹಾಮಾರಿ ನಮ್ಮ ಮುಂದೆ ಹಲವಾರು ಸವಾಲುಗಳನ್ನು ತಂದೊಡ್ಡಿದರೂ, ಅದನ್ನು ಲಸಿಕಾಕರಣ ಮತ್ತು ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಯ ಮೂಲಕ ಯಶಸ್ವಿಯಾಗಿ ಹಿಮ್ಮೆಟ್ಟಿಸಿರುವುದು ಹೆಮ್ಮೆಯ ಸಂಗತಿ. ಇದಕ್ಕಾಗಿ ಶ್ರಮಿಸಿದ ವಿಜ್ಞಾನಿಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು, ಅಧಿಕಾರಿಗಳು ಅಲ್ಲದೆ ಸಹಕರಿಸುತ್ತಿರುವ ಸಾರ್ವಜನಿಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

ದೇಶದ ಅಖಂಡತೆಯ ಪ್ರತೀಕವಾದ ನಮ್ಮ ಸಂವಿಧಾನವನ್ನು 1950ರ ಜನವರಿ 26ರಂದು ಇಡೀ ದೇಶಕ್ಕೆ ಏಕೈಕ ಪೌರತ್ವವನ್ನು ಉಪಬಂಧಿಸಿ, ಎಲ್ಲಾ ಪೌರರಿಗೆ ಮೂಲಭೂತ ಹಕ್ಕುಗಳನ್ನು ದಯಪಾಲಿಸಿ, ಪ್ರಜೆಗಳು ಜವಾಬ್ದಾರಿಯುತವಾಗಿ ವರ್ತಿಸಲು ಸಂವಿಧಾನವು ನೀಡಿದೆ. ಇಂತಹ ಮಹತ್ವದ ದಿನದಂದು, ನಾವು ಸಂವಿಧಾನವನ್ನು ರಚಿಸಿದ ಮತ್ತು ಈ ಸಂವಿಧಾನದ ವಿಧಿವಿಧಾನಗಳ ಚರ್ಚೆಯಲ್ಲಿ ಪಾಲ್ಗೊಂಡ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಎಲ್ಲಾ ದಿಗ್ಗಜರನ್ನು ಕೃತಜ್ಞತಾಪೂರ್ವಕವಾಗಿ ನೆನೆಯಬೇಕಾಗಿದೆ. ಭಾರತದ ಪ್ರಜೆಗಳಾದ ನಾವು ನಮಗಾಗಿ ಹೃದಯಪೂರ್ವಕವಾಗಿ ಈ ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ. ನಾವು ಭಾರತದ ಪ್ರತಿಯೊಬ್ಬ ನಾಗರೀಕರಿಗೂ ಸಮಾನ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಬ್ರಾತೃತ್ವ ನೀಡಲು ಒಪ್ಪಿಕೊಂಡಿರುತ್ತೇವೆ. ಹಾಗಾಗಿ, ನಮ್ಮ ಭಾರತ ದೇಶ ಸರ್ವಸ್ವತಂತ್ರ, ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದೆ. ಸ್ವಾತಂತ್ರ್ಯ ಗಳಿಸಿದ ಏಳು ದಶಕಗಳಲ್ಲಿ ಭಾರತೀಯರಾದ ನಾವು ಕೃಷಿ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಬಾಹ್ಯಾಕಾಶ, ರಕ್ಷಣೆ, ವಾಣಿಜ್ಯ, ವ್ಯಾಪಾರ, ಶಿಕ್ಷಣ, ಮೂಲಭೂತ ಸೌಕರ್ಯಗಳ ಅಭಿವೃದ್ದಿ ಹಾಗೂ ಬಡತನ ಮತ್ತು ಅಸಮಾನತೆ ನಿವಾರಿಸುವಲ್ಲಿ ಕೈಗೊಂಡ ಸಾಧನೆ ಶ್ಲಾಘನೀಯವಾಗಿದೆ ಎಂದರು.

ನಮ್ಮ ಸರ್ಕಾರ ರೈತ ಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಮಹತ್ವಾಕಾಂಕ್ಷಿ ಯೋಜನೆಯಡಿ ಜಿಲ್ಲೆಯ 12,719 ವಿದ್ಯಾರ್ಥಿಗಳಿಗೆ 3.17 ಕೋಟಿ ರೂ.ಗಳ ವಿದ್ಯಾರ್ಥಿ ಶಿಷ್ಯ ವೇತನ ನೀಡಲಾಗಿದೆ. ಅಲ್ಲದೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ 258.32 ಕೋಟಿ ರೂ.ಗಳನ್ನು ಜಮೆ ಮಾಡಲಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ 15862.97 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, 24535 ರೈತರಿಗೆ ಒಟ್ಟು ರೂ.12.57 ಕೋಟಿ ಮೊತ್ತವನ್ನು ಪರಿಹಾರ ತಂತ್ರಾಂಶದ ಮೂಲಕ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಹೊಂದಿದ ಬಿ.ಪಿ.ಎಲ್ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರದಿಂದ ರೂ.1.00 ಲಕ್ಷ ಮತ್ತು ಕೇಂದ್ರ ಸರ್ಕಾರದಿಂದ ರೂ.50 ಸಾವಿರ ಪರಿಹಾರದಡಿ ಒಟ್ಟು 331 ಫಲಾನುಭವಿಗಳಿಗೆ 4.96 ಕೋಟಿ ಹಾಗೂ ಎ.ಪಿ.ಎಲ್. ಕುಟುಂಬದ 210 ಫಲಾನುಭವಿಗಳಿಗೆ 1.05 ಕೋಟಿ ರೂ. ಹೀಗೆ ಜಿಲ್ಲೆಯಲ್ಲಿ ಒಟ್ಟು 541 ಫಲಾನುಭವಿಗಳಿಗೆ 6.02 ಕೋಟಿ ರೂ.ಗಳ ಪರಿಹಾರವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವಿತರಿಸಲಾಗಿದೆ. ಅಲ್ಲದೆ ಕಳೆದ ಡಿ. 30 ರಂದು ಅಪರ ಜಿಲ್ಲಾಧಿಕಾರಿಗಳ ಸಮಿತಿ ಸಭೆಯಲ್ಲಿ 870 ಪ್ರಕರಣಗಳನ್ನು ಕೋವಿಡ್-19 ರಿಂದ ಮೃತಪಟ್ಟವರೆಂದು ದೃಢೀಕರಿಸಿ 4.35 ಕೋಟಿ ರೂ. ಪರಿಹಾರವನ್ನು ಮಂಜೂರು ಮಾಡಲು ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದರು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ, ಹನಿ ನೀರಾವರಿಗೆ ಪ್ರಸ್ತುತ ವರ್ಷದಲ್ಲಿ 28 ಕೋಟಿ ರೂ. ಆರ್ಥಿಕ ಗುರಿಯಿದ್ದು ಅಂದಾಜು 6325 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಒದಗಿಸುವ ಗುರಿ ಹೊಂದಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 1602 ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಮಾಡಲಾಗಿದ್ದು ರೂ.32.12 ಕೋಟಿಗಳ ಕೂಲಿ ಪಾವತಿಸಲಾಗಿದೆ. ಇದರಿಂದ 9,60,041 ಮಾನವ ದಿನಗಳ ಸೃಜನೆಯಾಗಿದ್ದು, 3200 ರೈತರಿಗೆ ಅನುಕೂಲವಾಗಿದೆ. ಈ ಯೋಜನೆಯ ಅನುಪಾತನದಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ರೈತರ ಆದಾಯ ದ್ವಿಗುಣವಾಗುವಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಇ-ಶೌಚಾಲಯ, ಕುಂದುವಾಡ ಕೆರೆಯ ಅಭಿವೃದ್ಧಿ, ಪರ್ಕ್ ಗಳಲ್ಲಿ ಜಿಮ್ ಸಾಮಗ್ರಿಗಳ ಅಳವಡಿಕೆ ರೂ.37.43 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಗ್ಲಾಸ್ ಹೌಸ್‍ನಲ್ಲಿ ಲೇಸರ್ ಶೋ ಕಾಮಗಾರಿ ಮತ್ತು ರಿಂಗ್ ರಸ್ತೆ ಗಡಿಯಾರ ವೃತ್ತದಿಂದ ಸಪ್ತಗಿರಿ ಶಾಲೆ ಮಾರ್ಗವಾಗಿ ಕುಂದವಾಡ ರಸ್ತೆಗೆ ಸೇರುವ ರಸ್ತೆ ಕಾಮಗಾರಿಯನ್ನು ರೂ. 15 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುತ್ತದೆ ಎಂದು ಹೇಳಿದರು.

ಆಕರ್ಷಕ ಪಥ ಸಂಚಲನ : ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ವಿದ್ಯಾರ್ಥಿಗಳ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿರಲಿಲ್ಲ, ಹೀಗಾಗಿ ಸರ್ಕಾರದ ವತಿಯಿಂದ ಒಟ್ಟು 6 ತಂಡಗಳು ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡವು. ಕಿರಣ್‍ಕುಮಾರ್ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶರಣಪ್ಪ ಬಸಪ್ಪ ನೇತೃತ್ವದ ತಂಡ, ನಗರ ಉಪವಿಭಾಗದ ಕಾಂತರಾಜ್ ನೇತೃತ್ವದ ತಂಡ, ಕೆ.ಎಸ್. ಅಣ್ಣಿಗೇರಿ ನೇತೃತ್ವದ ಗ್ರಾಮಾಂತರ ನಾಗರಿಕ ಪೊಲೀಸ್ ತಂಡ, ಹಾಲೇಶ್ ನೇತೃತ್ವದಲ್ಲಿ ಗೃಹರಕ್ಷಕ ದಳ, ಅವಿನಾಶ್ ಮುಂದಾಳತ್ವದಲ್ಲಿ ಅಗ್ನಿಶಾಮಕ ದಳ, ಆಂಜನಪ್ಪ ನೇತೃತ್ವದಲ್ಲಿ ಅರಣ್ಯ ರಕ್ಷಕದಳ ಆಕರ್ಷಕ ಪಥಸಂಚಲನ ನಡೆಸಿದರು. ಡಿಎಆರ್‍ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡದಿಂದ ರಾಷ್ಟ್ರಗೀತೆ ಸಹಿತ, ಶುಶ್ರಾವ್ಯ ವಾದ್ಯ ಪ್ರಸ್ತುತಪಡಿಸಿದರು. ಪಥ ಸಂಚವಲನಕ್ಕೂ ಮುನ್ನ ತೆರೆದ ಜೀಪ್‍ನಲ್ಲಿ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವರು, ಗೌರವ ವಂದನೆ ಸ್ವೀಕರಿಸಿದರು.

ಸಾಧಕರಿಗೆ ಸನ್ಮಾನ : 2020-21 ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಯಲ್ಲಿ ತೃತೀಯ ಸ್ಥಾನ ಪಡೆದು ಸಾಧನೆಗೈದ ಚನ್ನಗಿರಿ ತಾಲ್ಲೂಕು ತ್ಯಾವಣಗಿ ಗ್ರಾಮದ ಆಶಾರಾಣಿ ರೈತ ಮಹಿಳೆಯನ್ನು ಇದೇ ಸಂದರ್ಭದಲ್ಲಿ ಸಚಿವರು ಸನ್ಮಾನಿಸಿದರು. ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಸಾಧಾರಣ ಸಾಧನೆ ಮಾಡಿದ ಪ್ರತಿಭಾನ್ವಿತ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ನೀಡಲಾಗುವ ಪ್ರಶಸ್ತಿಗೆ ಆಯ್ಕೆಯಾದ 08 ಮಕ್ಕಳಿಗೆ ಸನ್ಮಾನಿಸಿ ತಲಾ 10 ಸಾವಿರ ರೂ. ಬಹುಮಾನ ಹಾಗೂ ಪ್ರಶಸ್ತಿಪತ್ರ ವಿತರಿಸಲಾಯಿತು. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ವಿವರ ಇಂತಿದೆ. ಸಂಗೀತ ಕ್ಷೇತ್ರದಲ್ಲಿ ದಾವಣಗೆರೆಯ ವರುಣ್ ವಿ., ಹಾಗೂ ಜಿ.ಕೆ. ಅನನ್ಯ. ಕ್ರೀಡಾ ಕ್ಷೇತ್ರದಲ್ಲಿ ದಾವಣಗೆರೆ ಡಿಆರ್‍ಎಂ ಕಾಲೇಜು ವಿದ್ಯಾರ್ಥಿ ಗಜಚೌಹಾಣ್ ಎಂ.ಹೆಚ್. ಹಾಗೂ ಎಆರ್‍ಜಿ ಕಾಲೇಜಿನ ವಿದ್ಯಾರ್ಥಿ ಶರೀಫ್ ಲಾಲ್‍ ಸಾಬ್ ಯಲಿಗಾರ್ ತಾರ್ಕಿಕ ಸಾಧನೆ ಕ್ಷೇತ್ರದಲ್ಲಿ ಹೊನ್ನಾಳಿ ತಾಲ್ಲೂಕಿನ ಅದ್ವಿಕ ಕಾವ್ಯ ಎ.ಟಿ., ದಾವಣಗೆರೆಯ ಪೂರ್ವಿಕ ಎಂ.ಎ.. ನಾವೀನ್ಯತೆ ವಿಭಾಗದಲ್ಲಿ ಜಗಳೂರಿನ ವಿಸ್ಮಯ್ ತೇಜಸ್ವಿ ಹಾಗೂ ದಾವಣಗೆರೆಯ ಆಪ್ತಾ ಶೆಟ್ಟಿ.

ಸಮಾರಂಭದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರಾಥ್, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಎಸ್‍ಪಿ ಸಿ.ಬಿ. ರಿಷ್ಯಂತ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಕೋವಿಡ್ ಕಾರಣಕ್ಕಾಗಿ ಯಾವುದೇ ಮನರಂಜನಾ ಕಾರ್ಯಕ್ರಮಗಳು ಜರುಗಲಿಲ್ಲ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top