ದಾವಣಗೆರೆ: ಅಗತ್ಯ ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಡಾವಣೆಯ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯ 1-10ನೇ ತರಗತಿ ಮಾನ್ಯತೆ ರದ್ದು ಮಾಡಲಾಗಿದೆ.
ಯಾವುದೇ ಮೂಲಸೌಕರ್ಯ ಇಲ್ಲದೆ ಕರ್ನಾಟಕ ಶಿಕ್ಷಣ ಕಾಯ್ದೆ ಉಲ್ಲಂಘಿಸಿರುವ ಕಾರಣ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಯಿಂದ 10ನೇ ತರಗತಿಗೆ ನೀಡಿದ್ದ ಮಾನ್ಯತೆಯನ್ನು ಡಿಡಿಪಿಐ ಹಿಂಪಡೆದಿದ್ದಾರೆ. ಆದ್ದರಿಂದ ಪೋಷಕರು ಈ ಶಾಲೆಗೆ ಮಕ್ಕಳನ್ನು ದಾಖಲಿಸಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಕೆ.ಟಿ. ಬಿಇಒ ನಿಂಗಪ್ಪ ಮಾಹಿತಿ ನೀಡಿದ್ದಾರೆ.
- ಮೂಲಸೌಕರ್ಯ ಕೊರತೆ ಹಿನ್ನೆಲೆ 1-10ನೇ ತರಗತಿ ಮಾನ್ಯತೆ ರದ್ದು
- ನೋಟಿಸ್ ಜಾರಿಗೆ ಉತ್ತರಿಸದ ಶಾಲಾ ಆಡಳಿತ ಮಂಡಳಿ
- ಪೀಠೋಪಕರಣ, ಮೈದಾನ, ಶೌಚಾಲಯ, ಸುರಕ್ಷತಾ ಕ್ರಮ ಇಲ್ಲ
- ಈ ಶಾಲೆ ಮಕ್ಕಳನ್ನು ಬೇರೆ ಶಾಲೆಗೆ ದಾಖಲು ಮಾಡುವಂತೆ ಸೂಚನೆ
ಶಾಲೆ ಮಾನ್ಯತೆ ರದ್ದು
ಶಾಲೆಯಲ್ಲಿ ಅಗ್ನಿಸುರಕ್ಷಾ, ಗ್ರಂಥಾಲಯ, ಶೌಚಾಲಯಗಳ , ಪೀಠೋಪಕರಣ ಇಲ್ಲ. ಮಕ್ಕಳ ಸುರಕ್ಷತೆಗೆ ಗ್ರಿಲ್ಸ್ ಅಳವಡಿಸಿಲ್ಲ. ಆಟದ ಮೈದಾನ ಹಾಗೂ ಕಾಂಪೌಂಡ್ ಇನ್ನಿತರೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾದ ಈ ಸೌಲಭ್ಯಗಳನ್ನು ನಿರ್ಲಕ್ಷಿಸಿರುವ ಕಾರಣ ಈ ಶಾಲೆ ಮಾನ್ಯತೆ ಹಿಂಪಡೆಯಲಾಗಿದೆ ಎಂದರು.
ಈ ಬಗ್ಗೆ ಅನೇಕ ದೂರುಗಳು ಬಂದಿವೆ. ಹೀಗಾಗಿ ಶಾಲೆಗೆ ಭೇಟಿ ನೀಡಿ, ವರದಿ ನೀಡುವಂತೆಯೂ ಡಿಡಿಪಿಐ ಕಚೇರಿಯಿಂದ ಆದೇಶವಾಗಿತ್ತು. ಅದರನ್ವಯ ನಮ್ಮ ಕಚೇರಿಯಿಂದಲೂ ಪರಿಶೀಲಿಸಿ ಡಿಡಿಪಿಐ ಕಚೇರಿಗೆ ವರದಿ ನೀಡಿದ್ದೇವೆ. ಅಲ್ಲದೇ, ಶಾಲಾ ಆಡಳಿತ ಮಂಡಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಆಡಳಿತ ಮಂಡಳಿ ಉತ್ತರ ನೀಡಿಲ್ಲ. ಈ ಕಾರಣ ಶಾಲೆಗೆ ನೀಡಿದ್ದ ಮಾನ್ಯತೆ ಹಿಂಪಡೆಯಲಾಗಿದೆ ಎಂದರು.
ಬೇರೆ ಶಾಲೆಗೆ ದಾಖಲು ಮಾಡಿ
ವಿದ್ಯಾರ್ಥಿಗಳು ಹಾಗೂ ಪಾಲಕರ ಹಿತದೃಷ್ಟಿಯಿಂದ ನಾವು ಶಾಲೆ ಆರಂಭಕ್ಕೂ ಮೊದಲೇ ಪೋಷಕರಲ್ಲಿ ಮನವಿ ಮಾಡುತ್ತಿದ್ದೇವೆ. ಸದರಿ ಶಾಲೆಯಲ್ಲಿದ್ದ ಮಕ್ಕಳ ದಾಖಲೆಗಳನ್ನು ಸ್ಥಳೀಯ ಸರ್ಕಾರಿ ಶಾಲೆಗೆ ಹಸ್ತಾಂತರ ಮಾಡಿರುತ್ತೇವೆ. ಅಲ್ಲಿ ತಮ್ಮ ಮಕ್ಕಳ ದಾಖಲೆಗಳನ್ನು ಪಡೆದು, ಬೇರೆ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡಬಹುದು ಎಂದು ಸಲಹೆ ನೀಡಿದರು.
1ನೇ ತರಗತಿಯಿಂದ 10ನೇ ತರಗತಿವರೆಗೆ 259 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳ ದಾಖಲೆಗಳು ಬೇಕಾದರೆ ಸ್ಥಳಿಯ ಸರ್ಕಾರಿ ಶಾಲೆಯಲ್ಲಿ ದೊರೆಯುತ್ತದೆ. ಅಲ್ಲಿಗೆ ಹೋಗಿ ನಿಮ್ಮ ಮಕ್ಕಳ ದಾಖಲೆ ಪಡೆಯಬಹುದು ಎಂದು ತಿಳಸಿದರು.



