ಹರಿಹರ: ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿರುವ ವೀರಶೈವ ಪಂಚಮಸಾಲಿ ಲಿಂಗಾಯತ ಗುರು ಪೀಠಕ್ಕೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ 10 ಕೋಟಿ ರೂಪಾಯಿ ಹಣ ನೀಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದರು.
ಹರಜಾತ್ರಾ ಮಹೋತ್ವಸ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಮಠದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ 10 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ನಾಲ್ಕೈದು ದಿನದಲ್ಲಿ ಮಠದ ಖಾತೆಗೆ ಹಣ ಮಂಜೂರು ಮಾಡಲಾಗುವುದು. ಇದರ ಸದುಪಯೋಗವನ್ನು ಪಂಚಮಸಾಲಿ ಮಠ ಪಡೆದುಕೊಳ್ಳಬೇಕು ಎಂದರು. ಸಚಿವ ಮುರುಗೇಶ್ ನಿರಾಣಿ ಪ್ರಯತ್ನದಿಂದ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗ ಪಟ್ಟಿಗೆ ಸೇರಿಸಲು ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ನಾನು ಸದಾ ಪಂಚಮಸಾಲಿ ಸಮಾಜದ ಜೊತೆಗೆ ಇದ್ದು, ನಾನು ಬೇರೆಯಲ್ಲ, ಸಮಾಜ ಬೇರೆಯಲ್ಲ. ಪಂಚಮಸಾಲಿ ಸಮಾಜ ಕೃಷಿಕ ವರ್ಗವಾಗಿದ್ದು, ವಚನಾನಂದ ಶ್ರೀಗಳ ನೇತೃತ್ವದಲ್ಲಿ ಸಮಾಜ ಅರ್ಥಿಕ, ಸಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಿದೆ. ಪಂಚಮಸಾಲಿ ಸಮಾಜ ಸ್ವಾತಂತ್ರ್ಯ ಹೋರಾಟಗಾರು, ವೀರ ವನಿತೆಯರನ್ನು ಕೊಡುಗೆ ನೀಡಿದೆ.
ಅಕ್ಕಮದೇವಿ, ಕಿತ್ತೂರು ರಾಣಿ ಚೆನ್ನಮ್ಮ ಪಂಚಮಸಾಲಿ ಸಮಾಜದವರು ಎನ್ನುವುದು ಹೆಮ್ಮೆಯಾಗುತ್ತದೆ. ಈ ಸಮಾಜ ಜಗತ್ತಿಗೆ ಸಮಾನತೆ ತತ್ವ ಸಾರಿದ ಬಸವಣ್ಣ ಅವರ ತತ್ವನ್ನು ಪಾಲಿಸುತ್ತಿದೆ. ಸಮಾನತೆ, ಸಹಬಾಳ್ವೆ, ಸಂಘಟನೆ ಮೂಲಕ ನೇಸರ ಪಥ ಬದಲಿಸುವ ಸಂದರ್ಭದಲ್ಲಿ ಸಂಕ್ರಾಂತಿ ಸಂಭ್ರಮ ಯಶಸ್ವಿಯಾಗಲಿ ಎಂದು ಶುಭ ಕೋರಿದರು.



