ವಿಜಯನಗರ: ಜಿಲ್ಲೆಯ ಹರಪನಹಳ್ಳಿ ರೈಲ್ವೆ ಗೇಟ್ ಬಳಿ ಡೀಸೆಲ್ ಟ್ಯಾಂಕರೊಂದು ಬೈಕ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಬೈಕ್ ಸವಾರನೊಬ್ಬ ಸಜೀವ ದಹನವಾಗಿದ್ದಾನೆ.
ಡೀಸೆಲ್ ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ ಲಾರಿ ಧಗಧಗನೇ ಹೊತ್ತಿ ಉರಿದಿದೆ. ಇನ್ನು ಲಾರಿಯಿಂದ ಹಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ. ಸದ್ಯ ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬೈಕ್ ಹಾಗೂ ಡೀಸೆಲ್ ಟ್ಯಾಂಕರ್ ಮುಖಾ ಮುಖಿ ಡಿಕ್ಕಿಯಾಗಿದ್ದು, ಡಿಕ್ಕಿಯಾಗುತ್ತಿದ್ದಂತೆ ಬೈಕ್ ಸವಾರ ಲಾರಿ ಅಡಿ ಸಿಲುಕಿದ್ದ. ಈ ವೇಳೆ ಬೈಕ್ ಹಾಗೂ ಸವಾರನ ಮೇಲೆ ಡೀಸೆಲ್ ತುಂಬಿದ್ದ ಲಾರಿ ಬಿದ್ದಿದೆ. ಪೆಟ್ರೋಲ್ ಟ್ಯಾಂಕ್ ಓಪನ್ ಆಗಿ ಅವಘಡ ಸಂಭವಿಸಿದೆ. ಬೆಂಕಿ ಬೈಕ್ಗೆ ತಗುಲುತ್ತಿದ್ದಂತೆ ಲಾರಿಗೂ ವ್ಯಾಪಿಸಿದೆ. ಡಿಸೇಲ್ ಲಾರಿ ಹೆಚ್.ಪಿ ಕಂಪನಿಗೆ ಸೇರಿದ್ದಾಗಿದೆ.
35 ವರ್ಷದ ನಾಗರಾಜ್ ಮೃತ ಬೈಕ್ ಸವಾರ. ಸವಾರ ಹರಪನಹಳ್ಳಿಯಿಂದ ದಾವಣಗೆರೆಗೆ ಹೋಗುವ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ ನಾಗರಾಜ್ ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿ ಸವಾರ ಚಂದ್ರು ಗೆ ಗಂಭೀರಗಾಯವಾಗಿದೆ. ಗಾಯಾಳು ಚಂದ್ರುನನ್ನ ದಾವಣಗೆರೆ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತದೇಹವನ್ನ ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.


