ದಾವಣಗೆರೆ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ವೈ. ರಾಮಪ್ಪ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿರುವ ಕ್ರಮ ಸರಿ ಇದೆ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚ್ಛಾಟನೆ ಕ್ರಮದ ವಿರುದ್ಧ ಜಿಲ್ಲಾಧ್ಯಕ್ಷರು ಹಾಗೂ ವರಿಷ್ಠರ ವಿರುದ್ಧ ವಿನಃಕಾರಣ ದೂರುವುದು ಸರಿಯಲ್ಲ. ಕಾರ್ಯಕರ್ತರು ನೀಡಿದ ದೂರಿನ್ವಯ ಹಾಗೂ ಶಿಸ್ತು ಸಮಿತಿಯು ಶಿಫಾರಸ್ಸಿನ ಅನ್ವಯ ಡಾ.ವೈ.ರಾಮಪ್ಪ ವಿರುದ್ಧ ಜಿಲ್ಲಾಧ್ಯಕ್ಷರು ಉಚ್ಛಾಟಿಸುವ ಕುರಿತು ಕೆಪಿಸಿಸಿ ಶಿಫಾರಸ್ಸು ಮಾಡಿದ್ದರು. ಅದರಂತೆ ಪಕ್ಷ ಅವರನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ತಿಳಿಸಿದರು.
ಅವರು ಸಭೆ ಸಮಾರಂಭದಲ್ಲಿ ನಡೆದುಕೊಳ್ಳುತ್ತಿದ್ದ ರೀತಿ, ಕಾರ್ಯಕ್ರರ್ತರ ಮೇಲೆ ಹಲ್ಲೆ ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈಗ ನಾನೇನು ಮಾಡಿಲ್ಲ. ಜಿಲ್ಲಾಧ್ಯಕ್ಷರು ಕೆಪಿಸಿಸಿಗೆ ಮಾಡಿರುವ ಶಿಫಾರಸ್ಸು ಸುಳ್ಳು ಎಂದು ಬೀದಿ ನಾಟಕ ಪ್ರಾರಂಭ ಮಾಡುತ್ತಿರುವುದು ಸರಿಯಲ್ಲ. ಒಮ್ಮೆ ಅವರು ಆತ್ಮವಲೋಕನ ಮಾಡಿಕೊಂಡರೆ, ನಾನು ಸರಿ ಇದೆನೋ ಅಥವಾ ಜಿಲ್ಲಾಧ್ಯಕ್ಷರ ಸರಿ ಇದ್ದಾರೆಯೋ ಎಂದು ತಿಳಿಯುತ್ತದೆ ಎಂದು ಹೇಳಿದರು.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ವೈ.ರಾಮಪ್ಪ ಮತ್ತು ಮಾಜಿ ಶಾಸಕ ಶಿವಮೂರ್ತಿ ನಾಯ್ಕ ಅವರು ಬಿಜೆಪಿಗೆ ಮತ ಹಾಕಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿಸಿದ್ದರು. ಇದು ಪಕ್ಷಕ್ಕೆ ಮಾಡಿದ ದೊಡ್ಡ ದ್ರೋಹ. ಪಕ್ಷ ಅವರಿಗೆ ಸಾಕಷ್ಟು ಅವಕಾಶ ಕೊಟ್ಟಿದೆ. ಆದರೆ, ಪಕ್ಷಕ್ಕಾಗಿ ಏನೂ ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು. ಈ ಸಂದರ್ಭದಲ್ಲಿ ಮೆಳ್ಳೇಕಟ್ಟೆ ಡಿ.ಟಿ.ಹನುಮಂತಪ್ಪ, ಅಲೆಕ್ಸಾಂಡರ್ ಜಾನ್, ಮಹಮದ್ ಸನಾವುಲ್ಲಾ, ತೋಳಹುಣಸೆ ಶೇಖರಪ್ಪ, ಆನಗೋಡು ಬಸವರಾಜಪ್ಪ, ಶಂಭುಲಿಂಗಪ್ಪ, ಆಲೂರು ಶಿವಕುಮಾರ್, ವೆಂಕಟೇಶ್, ಸನಾವುಲ್ಲಾ, ಮಂಜುನಾಥ್, ಬಸಣ್ಣ ಇತರರಿದ್ದರು.



