ದಾವಣಗೆರೆ: ನಗರಾಭಿವೃದ್ಧಿ ಸಚಿವ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಪಿತೃ ವಿಯೋಗ ದುಃಖದ ನಡುವೆಯೂ ದಾವಣಗೆರೆ ಆಗಮಿಸಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿದರು.
ನಿನ್ನೆ (ಆ.14) ತಂದೆ ಕಳೆದುಕೊಂಡಿದ್ದ ಸಚಿವರು, ಸಕಲ ಕಾರ್ಯ ಮುಗಿಸಿ ಇಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬೈರತಿ ಬಸವರಾಜ್, ಬಳಿಕ ತೆರೆದ ವಾಹನದಲ್ಲಿ ಕವಾಯತು ತಂಡಗಳನ್ನು ವೀಕ್ಷಣೆ ಮಾಡಿದರು. ನಂತರ ಪೊಲೀಸ್ , ಅಗ್ನಿಶಾಮಕ, ಗೃಹ ರಕ್ಷಕ ದಳದಿಂದ ಪಥ ಸಂಚಲನ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಎಸ್. ಎ ರವೀಂದ್ರನಾಥ್, ಸಂಸದ ಜಿಎಂ ಸಿದ್ದೇಶ್ವರ್ ಹಾಗೂ ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ, ಜಿಪಂ ಸಿಇಒ ಚನ್ನಪ್ಪ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಉಪಸ್ಥಿತರಿದ್ದರು.



