Connect with us

Dvgsuddi Kannada | online news portal | Kannada news online

ದಾವಣಗೆರೆ: ಸ್ವಾತಂತ್ರ್ಯ ಅಮೃತ ಮಹೋತ್ಸವ; ಪ್ರತಿ ಮನೆ, ಮನಗಳಲ್ಲಿಯೂ ಹಬ್ಬದ ಸಂಭ್ರಮ-ಬೈರತಿ ಬಸವರಾಜ

ದಾವಣಗೆರೆ

ದಾವಣಗೆರೆ: ಸ್ವಾತಂತ್ರ್ಯ ಅಮೃತ ಮಹೋತ್ಸವ; ಪ್ರತಿ ಮನೆ, ಮನಗಳಲ್ಲಿಯೂ ಹಬ್ಬದ ಸಂಭ್ರಮ-ಬೈರತಿ ಬಸವರಾಜ

ದಾವಣಗೆರೆ: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶದಾದ್ಯಂತ ಆಚರಿಸುತ್ತಿದ್ದು, ಕಳೆದ ಮೂರು ದಿವಸಗಳಿಂದ ಮನೆ-ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವುದರ ಮೂಲಕ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ 76 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು.
ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಟ ಮಾಡಿದ ಮಹನೀಯರನ್ನು ನಾವು ಸ್ಮರಿಸಲೇಬೇಕು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಮಂಗಲ್ ಪಾಂಡೆ, ನಾನಾ ಸಾಹೇಬ್ ರವರು ಸ್ವತಂತ್ರ್ಯ ಹೋರಾಟದ ಕಿಡಿಯನ್ನು 18ನೇ ಶತಮಾನದ ಆರಂಭದಲ್ಲಿ ಹೊತ್ತಿಸಿದರು. ನಂತರ ಹೋರಾಟಕ್ಕಿಳಿದ ಗೋಪಾಲಕೃಷ್ಣ ಗೋಖಲೆ, ಮಹಾತ್ಮ ಗಾಂಧೀಜಿ, ಲಾಲಾ ಲಜಪತರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಶ್ ಚಂದ್ರಬೋಸ್, ಭಗತ್ ಸಿಂಗ್, ಅಜಾದ್ ಚಂದ್ರಶೇಖರ್, ರಾಜ್ ಗುರು, ಸುಖದೇವ್, ವೀರ ಸಾವರ್ಕರ್ ರಂತಹ ಮಹಾತ್ಮರ ಹೋರಾಟ, ತ್ಯಾಗ ಬಲಿದಾನಗಳನ್ನು ನೆನೆಯುತ್ತಾ ಅವರಿಗೆ ನಮನಗಳನ್ನು ಸಲ್ಲಿಸಬೇಕಾದದ್ದು, ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
1942ರಲ್ಲಿ “ಬ್ರಿಟೀಷರೆ ಭಾರತ ಬಿಟ್ಟು ತೊಲಗಿ” ಚಳವಳಿಯಲ್ಲಿ ದಾವಣಗೆರೆಯಲ್ಲಿ ನಡೆದ ಹೋರಾಟ ಅತ್ಯಂತ ಪ್ರಮುಖವಾದದು ಎಂದರು.

ದಾವಣಗೆರೆ ನಗರದಲ್ಲಿನ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದಿರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪ ಇವರುಗಳು ಅಂದು ಬ್ರಿಟೀಷರ ಗುಂಡಿಗೆ ಪ್ರಾಣಾರ್ಪಣೆ ಮಾಡಿ ಹುತಾತ್ಮರಾಗಿದ್ದನ್ನು ನಾವಿಂದು ನೆನಪಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುತಿದ್ದು, ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನದಡಿ 3668, ವಿಧವಾ ವೇತನದಡಿ 1410, ಅಂಗವಿಕಲ ವೇತನದಡಿ 850, ಸಂಧ್ಯಾ ಸುರಕ್ಷಾ ವೇತನದಡಿ 3893, ಮನಸ್ವಿನಿ ಯೋಜನೆಯಡಿ 192 ಫಲಾನುಭವಿಗಳಿಗೆ ಪಿಂಚಣಿಯನ್ನು ಮತ್ತು ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 400 ಫಲಾನುಭವಿಗಳಿಗೆ ಸಹಾಯಧನವನ್ನು ಮಂಜೂರು ಮಾಡಲಾಗಿದೆ.

ದಾವಣಗೆರೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ದಿ ಕಾಮಗಾರಿಗಳಿಗಾಗಿ ನಗರೋತ್ಥಾನ (ಮುನಿಸಿಪಾಲಿಟಿ) ಹಂತ-4 ರ ಯೋಜನೆಯಡಿ ಹರಿಹರ ನಗರಸಭೆಗೆ- ರೂ.30.00 ಕೋಟಿ, ಚನ್ನಗಿರಿ, ಮಲೇಬೆನ್ನೂರು ಮತ್ತು ಹೊನ್ನಾಳಿ ಪುರಸಭೆಗಳಿಗೆ ತಲಾ- ರೂ.10.00 ಕೋಟಿ ಹಾಗೂ ಜಗಳೂರು, ನ್ಯಾಮತಿ ಪಟ್ಟಣ ಪಂಚಾಯಿತಿಗಳಿಗೆ ತಲಾ – ರೂ.5.00 ಕೋಟಿ, ಒಟ್ಟು ರೂ.70.00 ಕೋಟಿ ಬಿಡುಗಡೆಯಾಗಿರುತ್ತದೆ.
ಆಯುಷ್ ಬಾಲ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಸಾಧಿಸಿರುವ ಪ್ರಗತಿಯನ್ನು ಪರಿಗಣಿಸಿ ದಾವಣಗೆರೆ ಜಿಲ್ಲೆಯನ್ನು Sಏಔಅಊ ಪ್ರಶಸ್ತಿಗೆ ನಾಮನಿರ್ದೇಶನ ಗೊಳಿಸಿರುವ ವಿಷಯ ಪ್ರಸ್ತಾಪಿಸಿ ಹರ್ಷ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಶೇ.50ಕ್ಕಿಂತ ಅಧಿಕ ಪರಿಶಿಷ್ಟ ಜಾತಿ ಜನಸಂಖ್ಯೆಯುಳ್ಳ ಗ್ರಾಮಗಳಲ್ಲಿ ಕೇಂದ್ರ ಸರ್ಕಾರದಿಂದ 75 ಗ್ರಾಮಗಳನ್ನು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಎಂದು ಆಯ್ಕೆ ಮಾಡಲಾಗಿದೆ ಹಾಗೂ ಈಗಾಗಲೇ 17 ಗ್ರಾಮಗಳನ್ನು ‘ಪ್ರಧಾನಮಂತ್ರಿ ಆದರ್ಶ ಗ್ರಾಮ’ವೆಂದು ಘೋಷಿಸಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು. ದಾವಣಗೆರೆ ಜಿಲ್ಲೆಗೆ 2021-22ನೇ ಸಾಲಿನಲ್ಲಿ ನಮ್ಮ ಸರ್ಕಾರದಿಂದ ಬಸವ ವಸತಿ ಯೋಜನೆಯಡಿ 6,158 ಮನೆಗಳು, ಅಂಬೇಡ್ಕರ್ ವಸತಿ ಯೋಜನೆಯಡಿ 1,915, ದೇವರಾಜ್ ಅರಸು ವಸತಿ ಯೋಜನೆಯಡಿ ವಿಶೇಷ ವರ್ಗದವರಿಗಾಗಿ 2,725 ಮನೆಗಳು ಸೇರಿದಂತೆ ಒಟ್ಟು 10,798 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದರು.

ಜಿಲ್ಲೆಯಾದ್ಯಂತ 2022-23 ನೇ ಸಾಲಿನಲ್ಲಿ ಮುಂಜಾಗರೂಕತೆಯಾಗಿ 85,144 ಜಾನುವಾರುಗಳಿಗೆ ಗಳಲೆಬೇನೆ ಲಸಿಕೆ, 91,300 ಕುಕ್ಕುಟಗಳಿಗೆ ಕೊಕ್ಕರೆ ರೋಗ ಲಸಿಕೆ, 1,92,030 ಕುರಿ, ಮೇಕೆಗಳಿಗೆ ಕರಳುಬೇನೆ ಲಸಿಕೆ, 9,648 ಕುರಿ ಮೇಕೆಗಳಿಗೆ ಪಿ.ಪಿ.ಆರ್ ಲಸಿಕೆ, ಮತ್ತು 7,714 ಜಾನುವಾರುಗಳಿಗೆ ಚಪ್ಪೆಬೇನೆ ಲಸಿಕೆಗಳನ್ನು ನೀಡಲಾಗಿದೆ.

2021-22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಜನಾಂಗದವರ ಸ್ಮಶಾನ ಭೂಮಿ ಅಭಿವೃದ್ಧಿ ಪಡಿಸಲು ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ 12 ಗ್ರಾಮಗಳ ಸ್ಮಶಾನ ಅಭಿವೃದ್ಧಿಗೆ ರೂ.450.00 ಲಕ್ಷಗಳು, ಚನ್ನಗಿರಿ ವಿಧಾನಸಭಾ ಕ್ಷೇತ್ರದ 10 ಗ್ರಾಮಗಳ ಸ್ಮಶಾನ ಅಭಿವೃದ್ಧಿಗೆ ರೂ.250.00ಲಕ್ಷಗಳು ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರದ 06 ಗ್ರಾಮಗಳ ಸ್ಮಶಾನ ಅಭಿವೃದ್ಧಿಗೆ ರೂ.145.00 ಲಕ್ಷಗಳ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ಬಹುಜನರ ಒಳಿತಿಗಾಗಿ, ಬಹುಜನರ ಕಲ್ಯಾಣಕ್ಕಾಗಿ ಜಗಜ್ಯೋತಿ ಬಸವೇಶ್ವರರ ಮಹಾಮನೆಯ ಮಂತ್ರವನ್ನು ಸಾರುತ್ತ, ಭವ್ಯ ಭಾರತ ಕಟ್ಟುವ ಸಂಕಲ್ಪ ಮಾಡೋಣ, ಭಾರತಕ್ಕೊಂದು ಹೊಸ ಭಾಷ್ಯ ಬರೆಯೋಣ ಎಂದು ನುಡಿದರು.

ಆಕರ್ಷಕ ಪಥ ಸಂಚಲನ : ಆಕರ್ಷಕ ಪಥ ಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಸ್.ಎನ್ ಕಿರಣ್ ಕುಮಾರ್ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ನಗರ ಉಪವಿಭಾಗದ ಪ್ರವೀಣ್ ವಾಲೀಕರ್ ನೇತೃತ್ವದ ತಂಡ, ಸಂಜೀವ್‍ಕುಮಾರ್ ನೇತೃತ್ವದ ಗ್ರಾಮಾಂತರ ಉಪವಿಭಾಗ ಪೊಲೀಸ್ ತಂಡ, ಎಸ್.ವಿ ಅಣ್ಣಿಗೇರಿ ನೇತೃತ್ವದ ಡಿ.ಎ.ಆರ್ ಪೊಲೀಸ್ ತಂಡ, ಅಂಬರೀಶ್ ನೇತೃತ್ವದಲ್ಲಿ ಗೃಹರಕ್ಷಕ ದಳ, ಅವಿನಾಶ್ ಮುಂದಾಳತ್ವದಲ್ಲಿ ಅಗ್ನಿಶಾಮಕ ದಳ, ಸಂಜಿನಪ್ಪ ನೇತೃತ್ವದಲ್ಲಿ ಅರಣ್ಯ ರಕ್ಷಕದಳ, ಶ್ರೀಕಾಂತ್ ನೇತೃತ್ವದ ಅಬಕಾರಿ ತಂಡ ಸೇರಿದಂತೆ ಡಿಆರ್‍ಆರ್ ಪಾಲಿಟೆಕ್ನಿಕ್ ಕಾಲೇಜು, ಎವಿಕೆ ಮಹಿಳಾ ಕಾಲೇಜು, ಡಿಆರ್‍ಎಂ ಸೈನ್ಸ್ ಕಾಲೇಜು, ಸೆಂಟ್ ಪಾಲ್ಸ್ ಕಾನ್ವೆಂಟ್ ಸ್ಕೂಲ್, ಆರ್‍ಎಂಎಸ್‍ವಿ ಶಾಲೆ, ಜೈನ್ ಪಬ್ಲಿಕ್ ಶಾಲೆ, ಸಿದ್ದಗಂಗಾ ಪಿಯು ಕಾಲೇಜು, ರಾಷ್ಟ್ರೋತನ್ ವಿದ್ಯಾ ಕೇಂದ್ರ, ಪುಷ್ಪ ಮಹಾಲಿಂಗಪ್ಪ ಸ್ಕೂಲ್, ಎಸ್‍ಟಿಜೆ ಸ್ಕೂಲ್ ಟ್ರೂಪ್, ಸರ್ಟಿಪೈಡ್ ಸ್ಕೂಲ್, ಮೌನೇಶ್ವರ ಕಿವಿಡ ಮತ್ತು ಮೂಗರ ಶಾಲೆ, ಅನ್ಮೋಲ್ ಪಬ್ಲಿಕ್ ಸ್ಕೂಲ್, ಪೊಲೀಸ್ ವಾದ್ಯ ವೃಂದದವರು ಆಕರ್ಷಕ ಪಥಸಂಚಲನ ನಡೆಸಿದರು.

ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮುಖ್ಯಮಂತ್ರಿ ಪದಕ ವಿಜೇತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಂಸ್ಕøತಿಕ ಕಾರ್ಯಕ್ರಮ : ಸಿದ್ದಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪುಲ್ವಾಮಾ ದಾಳಿ, ರಾಷ್ಟ್ರದ ಸೇನಾ ಪಡೆಗಳು ಮತ್ತು ಕೋವಿಡ್-19 ತುರ್ತು ಸಂದರ್ಭಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿದರು. ಪುಷ್ಪ ಮಹಾಲಿಂಗಪ್ಪ ಶಾಲೆಯ ವಿದ್ಯಾರ್ಥಿಗಳು ದೇಶದ ಸೈನಿಕರ ತ್ಯಾಗ-ಬಲಿದಾನ ಬಿಂಬಿಸುವ ನೃತ್ಯಕ್ಕೆ ಹೆಜ್ಜೆ ಹಾಕಿದರು. ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದ ವತಿಯಿಂದ ಶ್ವಾನಗಳು ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚುವ ಕುರಿತು ಸಾಹಸಮಯ ದೃಶ್ಯಗಳನ್ನು ಪ್ರದರ್ಶನ ಮಾಡಿದರು. ನಿಂಚನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ದೇಶಕ್ಕಾಗಿ ಶ್ರಮಿಸುವ ವೀರಯೋಧರ ಯಶೋಗಾಧೆ ಬಿಂಬಿಸುವ ನೃತ್ಯಗಳನ್ನು ಪ್ರದರ್ಶಿಸಿದರು.

ಸಮಾರಂಭದಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ದಾವಣಗೆರೆ ಮಹಾನಗರಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್, ದೂಡಾ ಅಧ್ಯಕ್ಷ ಸುರೇಶ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಐಜಿಪಿ ತ್ಯಾಗರಾಜನ್, ಜಿಪಂ ಸಿಇಒ ಡಾ. ಎ.ಚನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಲೋಕೇಶ್ ಪಿ.ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಸರಗಿ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು, ಶಾಲಾ-ಕಾಲೇಜುಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top