ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿರುವ ಒಳಾಂಗಣ ಕ್ರೀಡಾಂಗಣ ಕಳೆದ ಮೂರು ವರ್ಷಗಳಿಂದಲೂ ಜನರ ಉಪಯೋಗಕ್ಕೆ ಬರುತ್ತಿಲ್ಲ. ಆದಷ್ಟು ಬೇಗ ಜನರ ಬಳಕೆಗೆ ಸಿಗುವಂತೆ ಮಾಡಬೇಕು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದ ತಂಡವು ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿತು.
ದಾವಣಗೆರೆಗೆ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿಸಿ ಶಿವಾನಂದ ಕಾಪಸಿ ಅವರನ್ನು ಭೇಟಿ ಮಾಡಿ ಶುಭ ಕೋರಿದ ವೇಳೆ ಈ ಆಗ್ರಹ ಮಾಡಲಾಗಿದೆ. ಈಜುಕೊಳವು ಕ್ರೀಡಾಪಟುಗಳಿಗೆ, ಸ್ಥಳೀಯರಿಗೆ ಅನುಕೂಲ ಆಗಿತ್ತು. ಮಹಾನಗರ ಪಾಲಿಕೆಯ ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ಹಾಳಾಗಿದೆ. ಈ ಬಗ್ಗೆ ಪಾಲಿಕೆ ಹಾಗೂ ಈ ಹಿಂದಿನ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ. ಈಗ ನೀವು ಬಂದಿದ್ದು, ಈ ಈಜುಕೊಳ ಅಭಿವೃದ್ದಿಪಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮಂಜುನಾಥ್ ಅವರು ಮನವಿ ಮಾಡಿದರು.
ನಗರದ ಗುಂಡಿ ಚೌಟ್ರಿ ಪಕ್ಕದ ರಸ್ತೆಯೂ ಹಾಳಾಗಿದ್ದು, ಜನರು ಓಡಾಡಲು ಕಷ್ಟ ಎಂಬಂತಾಗಿದೆ. ಗುಂಡಿಗಳು ಬಿದ್ದಿರುವ ಕಾರಣ ಮಳೆ ಬಂದಾಗ ಅಲ್ಲಲ್ಲಿ ನೀರು ನಿಲ್ಲುತ್ತಿದೆ. ಸೊಳ್ಳೆ ಕಾಟವೂ ಹೆಚ್ಚಾಗಿದೆ. ಇಲ್ಲಿಯೇ ತಳ್ಳುವ ಗಾಡಿಗಳಲ್ಲಿ ತಿಂಡಿ ವ್ಯಾಪಾರ ಮಾಡಲಾಗುತ್ತದೆ. ನೀರು ನಿಲ್ಲುವ ಕಾರಣ ಮಲೇರಿಯಾ, ಡೆಂಗ್ಯೂ, ಚಿಕನ್ಗುನ್ಯಾದಂತ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಆದಷ್ಟು ಬೇಗ ಅನುದಾನ ನೀಡಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ರಸ್ತೆಯಲ್ಲಿ ರಾತ್ರಿ ವೇಳೆ ಓಡಾಡೋದು ತುಂಬಾನೇ ಕಷ್ಟ. ಸ್ವಲ್ಪ ಯಾಮಾರಿದರೂ ಗುಂಡಿಗಳಲ್ಲಿ ಬೀಳುತ್ತಾರೆ. ಈಗಾಗಲೇ ಕೆಲವರು ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ರಸ್ತೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು. ಈ ವೇಳೆ ಮಹಾನಗರ ಪಾಲಿಕೆಯ ಸದಸ್ಯರಾದ ಎ. ನಾಗರಾಜ್, ಉದಯ್ ಕುಮಾರ್, ಪಾಮೇನಹಳ್ಳಿ ನಾಗರಾಜ್, ಕೊಟ್ರಯ್ಯ, ಜಗದೀಶ್, ಮಾಗನಹಳ್ಳಿ ಪರಶುರಾಮ್ ಮತ್ತಿತರರು ಹಾಜರಿದ್ದರು.



