ದಾವಣಗೆರೆ: ದೇಶದಾದ್ಯಂತ ಮಕ್ಕಳು ಸೇರಿದಂತೆ ಅನೇಕ ಜನರು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ, ಎಲ್ಲಾ ಪ್ರಜೆಗಳಿಗೂ ಪೋಷಕಾಂಶದ ಕೊರತೆ ನೀಗಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ ಪ್ರತಿ 100 ಕೆಜಿ ಅಕ್ಕಿಗೆ 1 ಕೆಜಿ ಸಾರವರ್ಧಿತ ಅಕ್ಕಿಯನ್ನು ಬೆರೆಸಿ ವಿತರಣೆ ಮಾಡುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ(ಪ್ರಭಾರ) ರೇಷ್ಮಾ ಹಾನಗಲ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಹಾಗೂ ಕಾರ್ಡುದಾರರಿಗೆ ಆಯೋಜಿಸಲಾಗಿದ್ದ ಸಾರವರ್ಧಿತ ಅಕ್ಕಿಯ ಸಂವೇದನಾಶೀಲತೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಯೋಜನೆಯಿಂದ ಶಾಲೆಗಳಲ್ಲಿ ಬಿಸಿಯೂಟ ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡಲಾಗುವ ಅಕ್ಕಿಯ ಮೂಲಕ ಹಂತಹಂತವಾಗಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ. ಸಾರವರ್ಧಿತ ಅಕ್ಕಿ ಕುರಿತಂತೆ ಜನರಲ್ಲಿ ಮೂಡುವ ಸಂಶಯಗಳಿಗೆ ಪರಿಹಾರ ದೊರಕಿಸುವ ಮೂಲ ಉದ್ದೇಶ ಹೊಂದಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ತರಬೇತಿ ನೀಡಿ, ಈ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲ ಉದ್ದೇಶ ಕಾರ್ಯಕ್ರಮದ್ದಾಗಿದೆ ಎಂದು ತಿಳಿಸಿದರು.
ಸರ್ಕಾರ ನೀಡುವ ಸಾರವರ್ಧಿತ ಅಕ್ಕಿಯಿಂದ ಯಾವುದೇ ಅನಾಹುತ ಉಂಟಾಗುವುದಿಲ್ಲ ಜನರು ತಲೆಯಿಂದ ಭಯ-ಆತಂಕಗಳನ್ನು ದೂರ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹೇಳಿದರು.
ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಜನರಿಗೆ ಅಗತ್ಯವಾದ ಆಹಾರವನ್ನು ಹಿಂದಿನಿಂದಲೂ ಸರ್ಕಾರಗಳು ಪೂರೈಕೆ ಮಾಡುತ್ತಾ ಬಂದಿವೆ. ವಿವಿಧ ಪೆÇೀಷಕಾಂಶಗಳ ಕೊರತೆಯಿಂದ ಬಳಲುತ್ತಿರುವವರಿಗೆ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ವಿತರಣೆ ಮಾಡುತ್ತಿರುವ ಅಕ್ಕಿಗೆ ಸಾರವರ್ಧಿತ ಅಕ್ಕಿಯನ್ನು ಬೆರೆಸಿ ಸಾರ್ವಜನಿಕರಿಗೆ ಅವಶ್ಯಕವಿರುವ ಪೋಷಕಾಂಶವನ್ನು ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದ ಸಾರವರ್ಧಿತ ಅಕ್ಕಿಯ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ಮಾತನಾಡಿ, ವೈಜ್ಞಾನಿಕವಾಗಿ ಪ್ರತಿನಿತ್ಯ ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶ ಇರಬೇಕು, ಏಕದಳ ಧಾನ್ಯಗಳು, ತರಕಾರಿ, ಹಣ್ಣುಗಳು, ಹಸಿ ಸೊಪ್ಪಿನ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಆದರೆ ಪ್ರಸ್ತುತ ದಿನಮಾನಗಳಲ್ಲಿ ಅನೇಕರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಠಿಕತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಸರ್ಕಾರ ಸಾರವರ್ಧಿತ ಅಕ್ಕಿ ವಿತರಣೆಗೆ ಮುಂದಾಗಿದೆ. ಸಾರವರ್ಧಿತ ಅಕ್ಕಿಯ ಕುರಿತು ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಪಾಥ್ ಸಂಸ್ಥೆಯ ಪ್ರತಿನಿಧಿ ಸತ್ಯಬ್ರತ್ ಪಧಿ ರವರು ಸಾರವರ್ಧಿತ ಅಕ್ಕಿಯ ಸಂವೇದನಾಶೀಲತೆಯ ತರಬೇತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ ಸ್ವಾಮಿ, ಕೊಟ್ರೇಶ್ ಸೇರಿದಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಶಿರಸ್ತೇದಾರರು, ಸಿಬ್ಬಂದಿಗಳು, ನ್ಯಾಯ ಬೆಲೆ ಅಂಗಡಿ ಮಾಲೀಕರು ಭಾಗವಹಿಸಿದ್ದರು.