ದಾವಣಗೆರೆ: ಮಾನವ ತನ್ನ ಸ್ವಾರ್ಥಕ್ಕಾಗಿ ನಿರಂತರವಾಗಿ ಪರಿಸರದ ಮೇಲೆ ಶೋಷಣೆ ಮಾಡುತ್ತಿದ್ದಾನೆ. ಪರಿಸರ ಶೋಷಣೆ ನಿಲ್ಲದಿದ್ದರೆ ಮುಂದೊಂದು ದಿನ ಜಗತ್ತಿನಲ್ಲಿ ಪ್ರಳಯ ಆಗುವುದು ಗ್ಯಾರಂಟಿ ಎಂದು ವಿರಕ್ತ ಮಠದ ಬಸವಪ್ರಭು ಮಹಾಸ್ವಾಮಿಗಳು ತಿಳಿಸಿದರು.
ನಗರದ ಗುಳ್ಳಮ್ಮ ದೇವಸ್ಥಾನದ ಆವರಣದಲ್ಲಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಕೃತಿ ಮತ್ತು ಪರಿಸರದ ಮೇಲೆ ಮಾನವನ ನಿರಂತರ ಮಾಡುತ್ತಿರುವ ದೌರ್ಜನ್ಯದಿಂದಲೇ ಇಂದು ಜಲಪ್ರಳಯ ಬೆಂಕಿ ಅನಾಹುತಗಳು ಆಗುತ್ತಿವೆ. ಅಲ್ಲದೆ ಅತಿವೃಷ್ಟಿ ಅನಾವೃಷ್ಟಿಯ ಆಗುತ್ತಿದೆ. ಇದಲ್ಲದೆ ಬೇಸಿಗೆ ಕಾಲದಲ್ಲೂ ಸಹ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶ ಮತ್ತಿತರ ದುರ್ಘಟನೆಗಳು ನಡೆಯುತ್ತಿವೆ. ಇದರಿಂದಾಗಿ ಮಾನವ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಅಲ್ಲದೇ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ನಗರೀಕರಣದ ಹೆಸರಿನಲ್ಲಿ ನಗರದಲ್ಲಿನ ಮರಗಳನ್ನು ತೆಗೆದು ಹಾಕಲಾಗುತ್ತಿದೆ. ಕೇವಲ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಇದರಿಂದಾಗಿ ಪರಿಸರ ನಾಶವಾಗುತ್ತಿದೆ. ಅಭಿವೃದ್ಧಿಯ ಜೊತೆ ಜೊತೆಯಲ್ಲಿ ಹಸಿರೀಕರಣ ಕೂಡ ಆಗಬೇಕು. ಆಗ ಮಾತ್ರ ಪರಿಸರ ಸಮತೋಲನಕ್ಕೆ ಬರುತ್ತದೆ. ಎಲ್ಲೆಲ್ಲಿ ಗಿಡಗಳನ್ನು ಕೀಳುತ್ತೇವೆಯೋ ಅಲ್ಲಿ ಅದಕ್ಕೆ ಪರ್ಯಾಯವಾಗಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಉಳಿಸುವ ಅಗತ್ಯ ನಮ್ಮೆಲ್ಲರ ಮೇಲಿದೆ ಎಂದು ಕಿವಿಮಾತು ಹೇಳಿದರು.
ಯಾವುದೇ ನಗರ ಗಳನ್ನಾಗಲೀ ಅಭಿವೃದ್ಧಿ ಅಥವಾ ನಗರೀಕರಣ ಮಾಡುವ ಜತೆಯಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಬೇಕು. ಇದಕ್ಕೆ ಜಿಲ್ಲೆಯ ಅಧಿಕಾರಿಗಳು ನಿಷ್ಠೆ ಮತ್ತು ದಕ್ಷತೆಯಿಂದ ಕೆಲಸ ಮಾಡಬೇಕು. ಕೇವಲ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಷ್ಟೇ ಕೆಲಸವಲ್ಲ. ಅದಕ್ಕೆ ತಕ್ಕಂತೆ ಮರಗಳನ್ನು ನೆಟ್ಟು ಪರಿಸರವನ್ನು ಉಳಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ಇದಕ್ಕೆ ರಾಜಕಾರಣಿಗಳು ರಾಜಕೀಯ ನೇತಾರರು ಅಧಿಕಾರಿಗಳು ಕೈಜೋಡಿಸಬೇಕಿದೆ ಎಂದು ಹೇಳಿದರು.
ಪರಿಸರ ಉಳಿದರೆ ಮಾತ್ರ ಮುಂದಿನ ದಿನಗಳಲ್ಲಿ ಮಾನವ ಉಳಿಯುತ್ತಾನೆ. ಇಲ್ಲವಾದಲ್ಲಿ ಖಂಡಿತ ಮಾನವರಿಗೆ ಉಳಿಗಾಲವಿಲ್ಲ. ದೇವರ ಊರಲ್ಲಿ ಬಾಡಿಗೆದಾರರು ನಾವೆಲ್ಲ. ಬಾಡಿಗೆದಾರರಾದ ನಾವು ಭೂಮಿಯ ಮೇಲೆ ಶಾಶ್ವತವಾಗಿ ಇರುವುದಿಲ್ಲ ಎನ್ನುವ ಕವಿಗಳ ಮಾತಿದೆ. ಕಾರಣ ನಾವು ಮುಂಬರುವ ಪೀಳಿಗೆಗೆ ಜೀವ ಸಂಕುಲ, ಸಸ್ಯ ಸಂಕುಲ ಮತ್ತು ಸಸ್ಯ ಸಂಕುಲಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ಕಾರಣ ಪರಿಸರ ನಾಶ ಮಾಡುವ ಮುನ್ನ ನಾವು ಎಚ್ಚರ ವಹಿಸಬೇಕಿದೆ ಇಲ್ಲವಾದಲ್ಲಿ ನಮ್ಮೆಲ್ಲರ ನಾಶ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ ಮಾತನಾಡಿ, ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ನೆಡುವ ಮೂಲಕ ಪರಿಸರ ಉಳಿಸಬೇಕು. ಇದು ಕೇವಲ ಅಧಿಕಾರಿಗಳ ಅಥವಾ ಸರ್ಕಾರದ ಕೆಲಸವಲ್ಲ. ಇದು ಸಾರ್ವಜನಿಕರ ಕೆಲಸವೂ ಹೌದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಸಿ.ವರದರಾಜ್,ಹಿರಿಯ ಸದಸ್ಯರಾದ ಡಿ. ರಂಗನಾಥ್ ರಾವ್, ಎಂ.ವೈ.ಸತೀಶ್, ಯೋಗರಾಜ್, ಜಿ.ಎಸ್. ವಸಂತಕುಮಾರ್, ಚನ್ನಬಸವ ಶೀಲವಂತ್, ಭಾಸ್ಕರ್, ಸಂಜಯ್, ಕುಮಾರ್ ಇತರರು ಇದ್ದರು.