ದಾವಣಗೆರೆ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಬರುವ ನೆಹರು ಯುವ ಕೇಂದ್ರ ದಾವಣಗೆರೆ ವತಿಯಿಂದ ಜಿಲ್ಲೆಯ ಅತ್ಯುತ್ತಮ ಯುವಕ ಅಥವಾ ಯುವತಿ ಸಂಘಗಳಿಗೆ ಕೊಡಮಾಡುವ ಜಿಲ್ಲಾ ಯುವ ಸಂಘ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಸೆ.30 ಕೊನೆ ದಿನವಾಗಿದೆ.
ಪ್ರಸಕ್ತ ಸಾಲಿನಲ್ಲಿ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಭಾವೈಕ್ಯತೆ, ಕೋಮು ಸೌಹಾರ್ದತೆ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಶಿಕ್ಷಣ ಮುಂತಾದ ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆಗೈದಿರುವ ಸಂಘಗಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ಅರ್ಜಿ ಸಲ್ಲಿಸಬಯಸುವ ಸಂಘವು ಕರ್ನಾಟಕ ರಾಜ್ಯ ಸಂಘ ಸಂಸ್ಥೆ ನೋಂದಣಿ ಕಾಯ್ದೆಯಡಿ ನೋಂದಣಿಯಾಗಿ, ನೆಹರು ಯುವ ಕೇಂದ್ರದಲ್ಲಿ ಸಂಯೋಜನೆಗೊಂಡಿರಬೇಕು, ಕಡ್ಡಾಯವಾಗಿ ಸಂಘದ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ಖಾತೆ ಹೊಂದಿರಬೇಕು, ಪ್ರಸಕ್ತ ಸಾಲಿನಲ್ಲಿ ಕಾರ್ಯಗೈದ ಸಾಧನೆಗಳ ಬಗ್ಗೆ ಪತ್ರ ಮತ್ತು ಇತರೆ ಸಾಧನೆಗಳ ಬಗ್ಗೆ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಬೇಕು.
2020 ರ ಏಪ್ರಿಲ್ 1 ರಿಂದ 2021 ರ ಮಾರ್ಚ್ 31 ರವರೆಗಿನ ಅವಧಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಮಾತ್ರ ಸಲ್ಲಿಸಬೇಕು. ಒಮ್ಮೆ ಸಲ್ಲಿಸಿದ ಪ್ರಸ್ತಾವನೆಯನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಈ ಹಿಂದೆ ಪ್ರಶಸ್ತಿ ಪಡೆದಂತಹ ಯುವ ಸಂಘಗಳು ಪ್ರಶಸ್ತಿಗೆ ಅರ್ಹರಲ್ಲ.
ಅರ್ಜಿ ನಮೂನೆಯನ್ನು ನೆಹರು ಯುವ ಕೇಂದ್ರ ದಾವಣಗೆರೆ ಕಚೇರಿಯಿಂದ ಪಡೆದು ಸೆ.30 ರೊಳಗಾಗಿ ಸಲ್ಲಿಸಬೇಕು. ಮತ್ತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವಜನ ಅಧಿಕಾರಿಗಳು, ನೆಹರು ಯುವ ಕೇಂದ್ರ ದಾವಣಗೆರೆ, ಕೊಠಡಿ ಸಂಖ್ಯೆ-42, 2ನೇ ಮಹಡಿ, ಜಿಲ್ಲಾಧಿಕಾರಿಗಳ ಕಛೇರಿ, ಪಿ.ಬಿ ರಸ್ತೆ, ದೂ.ಸಂ.08192-263122 ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.



