ದಾವಣಗೆರೆ: ಪ್ರಸಕ್ತ ಸಾಲಿಗೆ ಅರಣ್ಯ ಇಲಾಖಾ ವತಿಯಿಂದ ಸಾರ್ವಜನಿಕ ವಿತರಣೆಗಾಗಿ ಸಸಿ ಬೆಳೆಸುವ ಯೋಜನೆಯಡಿ ಹಾಗೂ ಕೃಷಿ ಅರಣ್ಯ ಪ್ರೋತ್ಸಾಹ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಅಥವಾ ರೈತರಿಗೆ ವಿತರಿಸಲು 6×9 ಅಳತೆಯ ಸಸಿಗಳಿಗೆ ರೂ 1.00 ರಂತೆ ಹಾಗೂ 8×12 ಅಳತೆಯ ಸಸಿಗಳಿಗೆ ರೂ 3.00 ರಂತೆ ಸರ್ಕಾರ ನಿಗಧಿಪಡಿಸಿದ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲು ದಾವಣಗೆರೆ, ಜಗಳೂರು, ಹರಪನಹಳ್ಳಿ, ಹೊನ್ನಾಳಿ ವಿಭಾಗದ ವಲಯಗಳ ಸಸ್ಯಕ್ಷೇತ್ರದಲ್ಲಿ ವಿವಿಧ ಜಾತಿಯ/ಅಳತೆಯ ಸಸಿಗಳು ದಾಸ್ತಾನು ಲಭ್ಯ ಇರುತ್ತದೆ.
ಸಸಿಗಳನ್ನು 2022ನೇ ಮಳೆಗಾಲದ ಜೂನ್ ಮೊದಲನೇ ವಾರದಿಂದ ಸಾರ್ವಜನಿಕರಿಗೆ/ರೈತರಿಗೆ ವಿತರಣೆ ಮಾಡಲು ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹ ಕಾರ್ಯಕ್ರಮದಡಿ ನೋಂದಾಯಿಸಿಕೊಂಡು ಸಸಿಗಳನ್ನು ಪಡೆಯಲು ಇಚ್ಚಿಸುವಂತ ರೈತರಿಗೆ ಅವರ ಜಮೀನಿನಲ್ಲಿ ಬದುಕುಳಿಯುವ ಸಸಿಗಳಿಗೆ ಈ ಕೆಳಕಂಡಂತೆ ಪ್ರೋತ್ಸಾಹ ಧನವನ್ನು ಪಾವತಿಸಲು ಅವಕಾಶ ಇರುತ್ತದೆ.
ಮೊದಲನೇ ವರ್ಷಕ್ಕೆ ಪ್ರತಿ ಸಸಿಗೆ ಪ್ರೋತ್ಸಾಹ ಧನ ರೂ.35, ಎರಡನೇ ವರ್ಷಕ್ಕೆ ರೂ.40, ಮೂರನೇ ವರ್ಷಕ್ಕೆ ರೂ.50 ದರ ನಿಗಧಿಪಡಿಸಲಾಗಿದೆ. ಹಾಗಾಗಿ ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ನೋಂದಣಿಗಾಗಿ ರೂ.10 ಶುಲ್ಕವನ್ನು ಪಾವತಿಸಿ ನೋಂದಾಯಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ವಲಯ ಅರಣ್ಯಾಧಿಕಾರಿಗಳ ಕಚೇರಿ ಸಮಯದಲ್ಲಿ ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದೆಂದು ದಾವಣಗೆರೆ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



