ದಾವಣಗೆರೆ: ಎಸ್.ಎಸ್.ಎಲ್.ಸಿ ಪಾಸಾದ ನಂತರ ಮುಂದೇನು? ಎನ್ನುವ ವಿದ್ಯಾರ್ಥಿಗಳಿಗೆ ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ಉತ್ತಮವಾದ ಉದ್ಯೋಗವಕಾಶ ಕಲ್ಪಿಸುವ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ ತರಬೇತಿ ನೀಡುವ ಜೊತೆಗೆ ಶೇ.100 ರಷ್ಟು ಉದ್ಯೋಗ ದೊರಕಿಸಲಾಗುವುದು ಎಂದು ಪ್ರಾಂಶುಪಾಲ ಲಕ್ಷ್ಮಣ್ನಾಯ್ಕ್ ಹೇಳಿದರು.
ಮಂಗಳವಾರ ಹರಿಹರದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ತರಬೇತಿ ಕೇಂದ್ರದಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿಗಳನ್ನು ನೀಡಲಾಗುವುದು, ಅಲ್ಪಾವಧಿ ತರಬೇತಿಯಲ್ಲಿ ಸಿಎನ್ ಸಿ ಪೆÇ್ರೀಗ್ರಾಮ್ ಮತ್ತು ಆಪರೇಟರ್, ಟರ್ನರ್, ಮಿಲ್ಲಿಂಗ್, ಟೂಲ್ ರೂಂ, ಮಷೀನಿಸ್ಟ್ ನಂತಹ ಬೇರೆ ಬೇರೆ ವಿಧವಾದ ವಿವಿಧ ತರಬೇತಿಗಳನ್ನು ನೀಡಲಾಗುವುದು. ತರಬೇತಿ ಪಡೆಯಲು ಎಸ್ಎಸ್ಎಲ್ಸಿ, ಐಟಿಐ, ಡಿಪ್ಲೋಮಾ ಮಾಡಿರುವ ವಿದ್ಯಾರ್ಥಿಗಳು ಎರಡೂವರೆ ತಿಂಗಳು ತರಬೇತಿ ಪಡೆದು ಪ್ರಮಾಣಪತ್ರ ಪಡೆದುಕೊಂಡರೆ, ಅವರಿಗೆ ಶೇ.100 ರಷ್ಟು ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ಪ್ರಮುಖವಾಗಿ ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗಗಳನ್ನು ಪಡೆಯಲು ಈ ತರಬೇತಿಯು ಸುವರ್ಣಾವಕಾಶವಾಗಿದೆ. ಈಗಾಗಲೇ ತರಬೇತಿ ಸಂಸ್ಥೆಯಿಂದ 560 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದು ದೇಶ-ವಿದೇಶಗಳ ವಿವಿಧ ಹೆಸರಾಂತ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ತಾಂತ್ರಿಕೇತರ ಪದವಿಗಳನ್ನು ಪಡೆದಂತಹ ವಿದ್ಯಾರ್ಥಿಗಳು ಕೂಡ ಅಲ್ಪಾವಧಿ ಕೋರ್ಸ್ ಮೂಲಕ ತರಬೇತಿ ಪಡೆದು ಉದ್ಯೋಗವನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ವಿವಿಧ ರೀತಿಯ ಕಾರ್ಯಗಾರಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಜಿಟಿಟಿಸಿ ಕೇಂದ್ರದಲ್ಲಿ ಅಲ್ಪಾವಧಿ ಸಿಎನ್ಸಿ ಪ್ರೋಗ್ರಾಮಿಂಗ್ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ದಾಖಲಾತಿ ಮಾಡಿಕೊಳ್ಳಲಾಗುವುದು. ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಮತ್ತು ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಉಚಿತವಾಗಿ ವಿವಿಧ ರೀತಿಯ ಕೌಶಲ್ಯಾಭಿವೃದ್ದಿ ತರಬೇತಿಗಳನ್ನು ಪರಿಶಿಷ್ಠ ಜಾತಿ ಮತ್ತು ಪಂಗಡ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನೀಡುವ ಜೊತೆಗೆ ಪ್ರತಿ ತಿಂಗಳು 2500 ರೂ. ಶಿಷ್ಯವೇತನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 350 ಅಭ್ಯರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡಲಾಗುತ್ತಿದೆ. ದೀರ್ಘಾವಧಿ ಕೋರ್ಸ್ಗಳಲ್ಲಿ ಪ್ರತಿ ವರ್ಷ 60 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು ಅವರಿಗೆ ನಾಲ್ಕು(4+1) ವರ್ಷಗಳ ತರಬೇತಿ ನೀಡಲಾಗುತ್ತದೆ, ದೀರ್ಘಾವಧಿ ಕೋರ್ಸ್ಗೆ ಪ್ರವೇಶ ಪಡೆಯಲು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಎಂದು ಮಾಹಿತಿ ನೀಡಿದರು.
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಅಂತಿಮ ವರ್ಷದ ವಿದ್ಯಾರ್ಥಿನಿ ಪ್ರಿಯಾಂಕ ಮಾತನಾಡಿ, ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಸಿಗಲಿವೆ ಎಂಬ ಉದ್ದೇಶದಿಂದ ಪ್ರವೇಶ ಪಡೆದಿದ್ದೇನೆ. ಶೇ.100 ರಷ್ಟು ಉದ್ಯೋಗ ದೊರಕುವ ನಂಬಿಕೆ ಇದೆ ಎಂದರು.