ದಾವಣಗೆರೆ: ಜಿಲ್ಲೆಯ ಬರದ ತಾಲ್ಲೂಕು ಜಗಳೂರಿನ 57 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ 640 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅಡಚಣೆ ಉಂಟು ಮಾಡಲು ಯತ್ನಿಸಿದ ಕಕ್ಕರಗೊಳ್ಳದ ಮಂಜುನಾಥ್ ಎಂಬನನ್ನು ರೈತರು ಹಿಡಿದು ಗೂಸಾ ಕೊಟ್ಟಿದ್ದಾರೆ.
ಏಪ್ರಿಲ್ ಮಹತ್ವಾಕಾಂಕ್ಷೆಯ ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಕಾಮಗಾರಿ ಭರದಿಂದ ನಡೆಯುತ್ತಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕುರೆಮಾಕುಂಟೆ ಗ್ರಾಮದ ಬಳಿ ಕಕ್ಕರಗೊಳ್ಳದ ಮಂಜುನಾಥ್ ಅಡಚಣೆ ಉಂಟು ಮಾಡುವ ಉದ್ದೇಶದಿಂದ ಪೈಪ್ ಲೈನ್ ಏರ್ ವಾಲ್ ಓಪನ್ ಮಾಡುತ್ತಿದ್ದ ಎಂಬ ಆರೋಪದ ಮೇಲೆ ರೈತರು ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಂಜುನಾಥ್ ಉದ್ದೇಶ ಪೂರ್ವಕವಾಗಿ ವಾಲ್ ಓಪನ್ ಮಾಡಿ ನೀರು ಮುಂದೆ ಹೋಗದಂತೆ ತಡೆಯುತ್ತಿದ್ದ. ಮಂಜುನಾಥ್ ಕಕ್ಕರಗೊಳ್ಳದ ತಮ್ಮ ಜಮೀನಿನ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇವರ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಯೋಜನೆ ಬಗ್ಗೆ ಜನರಲ್ಲಿ ಕೆಟ್ಟ ಭಾವನೆ ಬರಲು ಈ ರೀತಿ ಮಾಡುತ್ತಿದ್ದಾನೆ ಎಂಬುದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಆರೋಪಗಳನ್ನು ತಳ್ಳಿ ಹಾಕಿರುವ ಮಂಜುನಾಥ್ , ನಮ್ಮ ಜಮೀನಿನಲ್ಲಿ ಪೈಪ್ ಲೈನ್ ಹಾಕಿದ್ದಾರೆ. ಈ ಯೋಜನೆಯಿಂದ ನಮ್ಮ ಜಮೀನು ಹಾಳಾಗಿದೆ. ಜಮೀನಿಗೆ ಪರಿಹಾರ ನೀಡಿಲ್ಲ. ಈ ವಿಚಾರದ ಬಗ್ಗೆ ಮಾತನಾಡಲು ರೈತರನ್ನು ಒಂದೆಡೆ ಸೇರಿಸಲು ಹೋಗಿದ್ದೆ. ಆದ್ರೆ ಅಧಿಕಾರಿಗಳು ನನ್ನ ವಿರುದ್ಧ ಕೆಲ ರೈತರನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ. ಈ ಯೋಜನೆ ವಿರುದ್ಧ ನನ್ನ ಹೋರಾಟ ನಾನು ನಿಲ್ಲಿಲ್ಲ ಎಂದಿದ್ದಾನೆ.
ಬಹುತೇಕ ಕಡೆ ಏರ್ ವಾಲ್ ಓಪನ್ ಮಾಡಿ ನೀರು ಸೋರಿಕೆ ಆಗುವಂತೆ ಮಾಡುವುದು. ಅದನ್ನು ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.



