ದಾವಣಗೆರೆ: ಜಿಲ್ಲೆಯಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೋಳಿ ಹಬ್ಬ ಮತ್ತು ಷಬ್-ಎ-ಬರಾತ್ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಹೇಳಿದರು.
ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೋಳಿ ಹಬ್ಬ ಮತ್ತು ಷಬ್-ಎ-ಬರಾತ್ ಹಬ್ಬದ ಪ್ರಯುಕ್ತ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೋಳಿ ಹಬ್ಬ ಹಾಗೂ ಷಬ್-ಎ-ಬರಾತ್ ಹಬ್ಬಗಳು ಒಟ್ಟಿಗೆ ಬಂದಿರುವುದರಿಂದ ಜಿಲ್ಲೆ ಹಾಗೂ ನಗರದಲ್ಲಿ ಸಾರ್ವಜನಿಕರು ಪ್ರಾರ್ಥನೆ ಸಲ್ಲಿಸುವುದು ಮತ್ತು ಕಾಮದಹನ ಮಾಡುವುದರಿಂದ ಕೆಲವು ಕಡೆಗೆ ಸಣ್ಣಪುಟ್ಟ ಅವಗಡಗಳು ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಈ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದ್ದು, ನಗರದ ಮೂರು ಕಡೆ ಖಬರಸ್ಥಾನಗಳಲ್ಲಿ ಮುಸ್ಲಿಂ ಸಮುದಾಯದವರಿಂದ ರಾತ್ರಿಯ ನಮಾಜ್ ನಂತರ ಪ್ರಾರ್ಥನೆ ಸಲ್ಲಿಸುವ ಕಾರ್ಯ ನಡೆಯಲಿದೆ ಮತ್ತು ಕಾಮದಹನದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ರಾತ್ರಿಯ ವೇಳೆಯಲ್ಲಿ ರಸ್ತೆಗಳಲ್ಲಿ ಓಡಾಡುವುದು, ಸುತ್ತಾಡುವುದು ಮಾಡಬಾರದು. ಹೆಚ್ಚಾಗಿ ಹಿರಿಯರಿಗಿಂತ ಯುವಕರು ಕಾನೂನು ವ್ಯಾಪ್ತಿ ಮೀರಿ ಸಂಭ್ರಮಿಸುವ ಘಟನೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಹಾಗಾಗಿ ಎರಡು ಸಮುದಾಯದ ಮುಖಂಡರು ಯುವಪೀಳಿಗೆಗೆ ಬುದ್ಧಿವಾದ ಹೇಳಿ ಮಾರ್ಗದರ್ಶನ ನೀಡಬೇಕು ಎಂದರು.
ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಲ್ಲಿ ಪೆÇಲೀಸರ ಗಮನಕ್ಕೆ ತರದೇ ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದು. ದ್ವಿಚಕ್ರವಾಹನದ ಸೈಲೆಂಸರ್ ಮೂಲಕ ಹೆಚ್ಚಿನ ಶಬ್ದ ಮಾಲಿನ್ಯ ಉಂಟುಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು, ಅಂತಹ ಘಟನೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಜಾತ್ರೆಯ ಪ್ರಯುಕ್ತ ನಗರದೆಲ್ಲೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಪಾಲಿಕೆಯವರ ಅನುಮತಿಯಿಲ್ಲದೆ ಯಾವುದೇ ಪೆÇೀಸ್ಟರ್ ಮತ್ತು ಬ್ಯಾನರ್ಗಳನ್ನು ಹಾಕಬಾರದು. ಹೋಳಿಯ ಸಂದರ್ಭದಲ್ಲಿ ಮಹಿಳೆಯರ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳುವ ಮೂಲಕ ಹೋಳಿಯನ್ನು ಸಂತೋಷವಾಗಿ ಆಚರಿಸಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮೇಯರ್ ಜಯಮ್ಮ ಗೋಪಿನಾಯ್ಕ್ ಮಾತನಾಡಿ, ಹೋಳಿ ಹಬ್ಬದ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರೋಡಿನಲ್ಲಿ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಣ್ಣ ಎರಚುವುದು ಹಾಗೂ ನೀರು ಹಾಕುವುದು, ಬಲವಂತವಾಗಿ ಮೊಟ್ಟೆ ಹೊಡೆಯುವುದು ಅಲ್ಲಲ್ಲಿ ಕಂಡುಬರುತ್ತದೆ ಪೆÇಲೀಸರು ಇದರ ಬಗ್ಗೆ ಗಮನ ಹರಿಸಬೇಕು.
ಮಹಾನಗರ ಪಾಲಿಕೆಯಿಂದ ಹೋಳಿ ಹಬ್ಬ ಹಾಗೂ ಷಬ್ ಎ ಬರಾತ್ ಹಬ್ಬ ಹಾಗೂ ದುರ್ಗಾದೇವಿ ಜಾತ್ರೆಯ ಪ್ರಯುಕ್ತ ನಗರದಲ್ಲಿ ನೀರು, ಸ್ವಚ್ಛತೆ, ವಿದ್ಯುತ್ ಹಾಗೂ ಎಲ್ಲ ರೀತಿಯ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು.
ಉಪಮೇಯರ್ ಗಾಯತ್ರಿಬಾಯಿ, ಅಬಕಾರಿ ಮುಖ್ಯಸ್ಥ ನಾಗರಾಜ್, ಡಿವೈಎಸ್ಪಿ ನರಸಿಂಹ ವಿ ತಾಮ್ರಧ್ವಜ, ತಹಶೀಲ್ದಾರ್ ಬಸವನಗೌಡ್ರು, ಕೆ.ಬಿ ಶಂಕರನಾರಾಯಣ್, ಮಾಜಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಿರಾಜ್, ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರ್ ಹಾಗೂ ಹಿಂದೂ-ಮುಸ್ಲಿಂ ಸಮುದಾಯದ ವಿವಿಧ ಮುಖಂಡರು, ಸಾರ್ವಜನಿಕರು ಹಾಜರಿದ್ದರು.