Connect with us

Dvgsuddi Kannada | online news portal | Kannada news online

ಜಗಳೂರು- ಭರಮಸಾಗರ ಏತ ನೀರಾವರಿ ಉದ್ಘಾಟಿಸಲು ಪ್ರಧಾನಿಗೆ ಆಹ್ವಾನ; ತರಳಬಾಳು ಶ್ರೀ

ಪ್ರಮುಖ ಸುದ್ದಿ

ಜಗಳೂರು- ಭರಮಸಾಗರ ಏತ ನೀರಾವರಿ ಉದ್ಘಾಟಿಸಲು ಪ್ರಧಾನಿಗೆ ಆಹ್ವಾನ; ತರಳಬಾಳು ಶ್ರೀ

ದಾವಣಗೆರೆ: 2018 ರ ಜಗಳೂರು ತರಳಬಾಳು ಹುಣ್ಣಿಮೆಯ ಮಹೋತ್ಸವದ ಆಶಯದಂತೆ ಸರ್ಕಾರದ ಸಹಕಾರದೊಂದಿಗೆ 1200 ಕೋಟಿ ರೂಗಳ ವೆಚ್ಚದಲ್ಲಿ

ಅನುಷ್ಠಾನಗೊಂಡ ಭರಮಸಾಗರ ಏತ ನೀರಾವರಿ ವ್ಯಾಪ್ತಿಯ 43 ಕೆರೆಗಳಿಗೆ ಮತ್ತು ಜಗಳೂರು ಏತ ಸೀರಾವರಿ ಯೋಜನೆ ವ್ಯಾಪ್ತಿಯ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾರ್ಯವು ಮುಕ್ತಾಯದ ಹಂತವನ್ನು ತಲುಪಿದ್ದು. ಎಲ್ಲಾ ಕೆರೆಗಳಿಗೆ ನೀರು ಹರಿದು ರೈತರ ನೆಮ್ಮದಿಯ ದಿನಗಳನ್ನು ಕಾಣುವ ಸಾರ್ಥಕತೆಯ ಗಳಿಗೆಗೆ ಎಲ್ಲರೂ ನಿರೀಕ್ಷಿಸುತ್ತಿದ್ದು,
ರಾಜ್ಯದ ಏತ ನೀರಾವರಿ ಯೋಜನೆಗಳಿಗೆ ಮಾದರಿಯಾದ ಈ ಎರಡೂ ಯೋಜನೆಗಳನ್ನು ಹಾಗೂ ಸಿರಿಗೆರೆಯಲ್ಲಿ 45 ಕೋಟಿರೂಗಳ ವೆಚ್ಚದಲ್ಲಿ ಬೃಹನ್ಮಠದಿಂದ ನಿರ್ಮಿಸಿರುವ ಭವ್ಯವಾದ ಅಮೇರಿಕೆಯ ಶ್ವೇತ ಭವನದ ಮಾದರಿಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದ ಉದ್ಘಾಟನೆಗೆ ಪ್ರಧಾನಿ ನರೇಂದ ಮೋದಿಯವರನ್ನು ಆಹ್ವಾನಿಸುವುದಾಗಿ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜ ತಿಳಿಸಿದರು.

ತುಂಬಿ ಹರಿಯುತ್ತಿರುವ ಭರಮಸಾಗರ ಕೆರೆಯ ತೂಬಿನಲ್ಲಿ ಸೀರು ಸೋರಿಕೆ ಕಂಡು ಬಂದ ಹಿನ್ನಲೆಯಲ್ಲಿ ಭಾನುವಾರ ಸಂಜೆ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಶ್ರೀಜಗದ್ಗುರುಗಳವರು ಪ್ರಧಾನಿಯರನ್ನು ಆಹ್ವಾನಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಕರೆ ತೂಬಿನಲ್ಲಿ ಸೀರು ಸೋರಿಕೆಯಾಗುತ್ತಿದ್ದು, ಹರಿವಿನ ಸ್ಥಿತಿಯನ್ನು ಗಮನಿಸಿ ಖಚಿತಪಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ 4 ಪಾಳಿಯನ್ನು ರಚಿಸಿ ಯುವಕರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದ್ದು ನೀರಿನ ಹರಿವಿನ ಕ್ಷಣದ ಮಾಹಿತಿಯ ವಿಡಿಯೊಗಳನ್ನು ನೀರಾವರಿ ನಿಗಮದ ಅಧಿಕಾರಿಗಳಿಗೆ ರವಾನಿಸುವಂತೆ ಕ್ರಮವಹಿಸಲಾಗಿದೆ ಎಂದು ವಿವರಿಸಿದರು.

43 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಮೀಸಲಿರಿಸಿ 66 ಕೆ.ವಿ ವಿದ್ಯುತ್ ಸ್ಥಾವರ ಮತ್ತು ಟವರ್ ಕಾಮಗಾರಿಗೆ ಕೆಲ ರೈತರು ಅಡ್ಡಿ ಪಡಿಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಸಂಬಂಧಪಟ್ಟ ರೈತರೊಂದಿಗೆ ಯೋಜನೆಯ ಫಲಶೃತಿಯ ಬಗ್ಗೆ ಮನವರಿಕೆ ಮಾಡಿ ಮನವೊಲಿಸುವಂತೆ ಜಿ.ಪಂ.ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿಯವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕೆರೆ ನೀರಾವರಿಯ ಸಮಿತಿಯ ಅಧ್ಯಕ್ಷ ಶಶಿಧರ್, ಸಾಮಿಲ್ ಶಿವಣ್ಣ, ಸೇರಿದಂತೆ ಪದಾಧಿಕಾರಿಗಳು ನೂರಾರು ರೈತರು ಹಾಜರಿದ್ದರು.

ಕೊರೊನಾ ಕಾರಣದಿಂದ ತರಳಬಾಳು  ಸದ್ಧರ್ಮ ನ್ಯಾಯಪೀಠದ ಕಾರ್ಯಕಲಾಪಗಳು ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದವು. ಜನವರಿ ತಿಂಗಳಲ್ಲಿ ಎರಡು ಸೋಮವಾರ ನ್ಯಾಯಪೀಠವನ್ನು ಪುನರಾರಂಭಿಸಿ ಮತ್ತೆ ಕೋವಿಡ್ ಹೆಚ್ಚಾದ ಕಾರಣದಿಂದ ಮುಂದೂಡಲಾಗಿತ್ತು. ಈಗ ಎಲ್ಲಾ ನ್ಯಾಯಾಲಯಗಳು ಖುದ್ದಾಗಿ ಹಾಜರಾಗಲು ಅವಕಾಶ ಕಲ್ಪಿಸಿಕೊಟ್ಟಿವೆ. ಆದ ಕಾರಣ ನಮ್ಮ ಮಠದ ಸದ್ಧರ್ಮ ನ್ಯಾಯಪೀಠದ ಕಾರ್ಯಕಲಾಪಗಳನ್ನು ಇಂದಿನಿಂದ
ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಸೋಮವಾರದಿಂದ
ಪುನರಾರಂಭಗೊಳಿಸರ ನಿರ್ಧರಿಸಿದ್ದು, ಎಂದಿನಂತೆ ಭಕ್ತಾದಿಗಳು ಇನ್ನು ಮುಂದೆ ಪ್ರತಿ ಸೋಮವಾರ ನ್ಯಾಯಪೀಠಕ್ಕೆ ತಮ್ಮ ಅಹವಾಲುಗಳೊಂದಿಗೆ ಹಾಜರಾಗಬಹುದು. ಎಂದು ಶ್ರೀಜಗದ್ಗುರುಗಳವರು ತಿಳಿಸಿದರು.

ದಿನಾಂಕ 28-2-2022 ರಂದು 29 ಕೇಸುಗಳ ವಿಚಾರಣೆಗಳು ಇವೆ. ಸಂಬಂಧಪಟ್ಟವರು ನ್ಯಾಯಪೀಠಕ್ಕೆ ಹಾಜರಾಗುವುದು. ಎಲ್ಲರೂ ತಪ್ಪದೆ ಮಾಸ್ಕ್ ಧರಿಸಿಕೊಂಡು ಬಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಿದೆ ಎಂದು ಪೂಜ್ಯರು ತಿಳಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top