ದಾವಣಗೆರೆ: ಕೋವಿಡ್ ಲಾಕ್ಡೌನ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ವಿಜಯಪುರ-ಮಂಗಳೂರ ರೈಲು (ರೈಲು ಗಾಡಿ ಸಂಖ್ಯೆ 07377-07378) ಡಿಸೆಂಬರ್ 1 ರಿಂದ ಪುನರಾರಂಭಗೊಂಡಿರುವುದು ದಾವಣಗೆರೆ ಮತ್ತು ಕರಾವಳಿ ಜಿಲ್ಲೆಗಳ ರೈಲು ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿದೆ ಎಂದು ದಾವಣಗೆರೆ-ಕರಾವಳಿ ರೈಲು ಹೋರಾಟ ಸಮಿತಿಯ ಅಧ್ಯಕ್ಷ ನಿರ್ಮಲ್ ರಾಜೇಂದ್ರ ಬಂಗೇರ ಹರ್ಷ ವ್ಯಕ್ತಪಡಿಸಿದರು.
ಡಿಸೆಂಬರ್ 1 ರಿಂದ ಪುನರಾರಂಭಗೊಂಡಿರುವ ವಿಜಯಪುರ ಮಂಗಳೂರು ರೈಲು ಗಾಡಿ ಸಂಖ್ಯೆ 07377 ಮದ್ಯ ರಾತ್ರಿ ದಾವಣಗೆರೆ ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದಾಗ ರೈಲು ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ರೈಲಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ರೈಲ್ವೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಮಾತನಾಡಿ, ದಾವಣಗೆರೆ ಮಾರ್ಗವಾಗಿ ಹಾದುಹೋಗುವ ವಿಜಯಪುರ ಮಂಗಳೂರು ರೈಲು ದಾವಣಗೆರೆ ಸುತ್ತಮುತ್ತಲಿನ ಭಾಗದ ಸಾರ್ವಜನಿಕರಿಗೆ ಕರಾವಳಿ ಜಿಲ್ಲೆಗಳಲ್ಲಿರುವ ಪ್ರಸಿದ್ಧ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಕೊಂಡಿಯಾಗಿತ್ತು. ಜನಸಾಮಾನ್ಯರಿಗೆ ಈ ಸೌಲಭ್ಯವು ಅತ್ಯಂತ ಅನುಕೂಲಕಾರಿಯಾಗಿತ್ತು. ಆದರೆ, ಕೋವಿಡ್ ಹಿನ್ನಲೆಯಲ್ಲಿ ಈ ರೈಲು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಕೋವಿಡ್ ತೀವ್ರತೆಯು ಕಡಿಮೆಯಾದ ಬಳಿಕ ಬೇರೆಲ್ಲ ರೈಲುಗಳು ತಮ್ಮ ಸಂಚಾರವನ್ನು ಪುನರಾರಂಭಗೊಳಿಸಿದ್ದರೂ ಸಹ ಸದರಿ ರೈಲು ಮಾತ್ರ ಆರಂಭಗೊಂಡಿರಲಿಲ್ಲ. ಈ ಹಿನ್ನಲೆಯಲ್ಲಿ ದಾವಣಗೆರೆ-ಕರಾವಳಿ ರೈಲ್ವೆ ಹೋರಾಟ ಸಮಿತಿಯು ಈ ಬಗ್ಗೆ ದಾವಣಗೆರೆ ಸಂಸದರಿಗೆ, ರೈಲ್ವೆ ಅಧಿಕಾರಿಗಳಿಗೆ ಮತ್ತು ಇತರ ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸುವುದರ ಮೂಲಕ ರೈಲು ಪುನರಾರಂಭಗೊಳಿಸಬೇಕೆಂದು ಆಗ್ರಹಿಸಲಾಗಿತ್ತು. ಮಾನ್ಯ ಸಂಸದರಾದ ಜಿ.ಎಮ್.ಸಿದ್ದೇಶ್ವರ ಅವರು ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆಯನ್ನೂ ನೀಡಿದ್ದರು.
ಈ ರೈಲು ಬೇರೊಂದು ಮಾರ್ಗದ ಮೂಲಕ ಮಂಗಳೂರು ತಲುಪುವ ಯೋಜನೆಯ ಬಗ್ಗೆ ರೈಲ್ವೆ ಇಲಾಖೆ ಪರಿಶೀಲಿಸುತ್ತಿದೆ ಎನ್ನುವ ಸುದ್ದಿಗಳು ಆತಂಕಕ್ಕೆ ಕಾರಣವಾಗಿದ್ದವು. ಆದ್ದರಿಂದ ರೈಲ್ವೆ ಹೋರಾಟ ಸಮಿತಿಯಿಂದ ಮತ್ತೊಮ್ಮೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಅದರ ಫಲಶೃತಿಯಾಗಿ ಮತ್ತು ಸಂಸದರ ಸಹಕಾರದಿಂದ ಈಗ ಡಿಸೆಂಬರ್ 1 ರಿಂದ ವಿಜಯಪುರ-ಮಂಗಳೂರು ರೈಲು ಪುನರಾರಂಭಗೊಂಡಿದೆ. ಇದರ ಸಂಪೂರ್ಣ ಯಶಸ್ಸು ದಾವಣಗೆರೆ ಕರಾವಳಿ ರೈಲ್ವೆ ಹೋರಾಟ ಸಮಿತಿಗೆ ಮತ್ತು ದಾವಣಗೆರೆ ಸಂಸದ ಜಿ.ಎಮ್.ಸಿದ್ದೇಶ್ವರ ಅವರಿಗೆ ಸಲ್ಲುತ್ತದೆ ಎಂದು ಕೆ.ರಾಘವೇಂದ್ರ ನಾಯರಿ ಅಭಿಪ್ರಾಯಪಟ್ಟರು. ಇನ್ನು ಸದರಿ ರೈಲು ಮುಂಜಾನೆ 6-7 ಘಂಟೆಗೆ ಮಂಗಳೂರು ತಲುಪುವ ಹಾಗೆ ಸಮಯ ಬದಲಾವಣೆ ಮಾಡಬೇಕು ಹಾಗೂ ರೈಲು ಮಾರ್ಗವನ್ನು ಮಂಗಳೂರಿನಿಂದ ಕುಂದಾಪುರದವರೆಗೆ ವಿಸ್ತರಣೆ ಮಾಡಬೇಕು ಎನ್ನುವ ನಮ್ಮ ಹೋರಾಟ ಸಮಿತಿಯ ಬೇಡಿಕೆ ಇನ್ನೂ ಈಡೇರಿಲ್ಲ. ಆ ಕುರಿತಾಗಿ ಹೋರಾಟ ಮುಂದುವರೆಸಲಾಗುವುದು ಎಂದು ಕೆ.ರಾಘವೇಂದ್ರ ನಾಯರಿ ತಿಳಿಸಿದರು.
ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿಯ ಬಸವರಾಜ ಗಂಗೋತ್ರಿ, ರವೀಂದ್ರ ಸಾಣೂರು, ಆರ್.ಆಂಜನೇಯ, ಜಂಗ್ಲಿ ಶಿವು, ಮಂಜು, ಯಶವಂತ್, ರವಿಚಾರ್ಯ, ಪೂಜಾರಿ ಮಧುಸೂದನ್ ಹಾಗೂ ಮತ್ತಿತರರು ಹಾಜರಿದ್ದರು.