ದಾವಣಗೆರೆ: ಚರಂಡಿ ನೀರು ಕುಡಿಯುವ ನೀರಿನಲ್ಲಿ ಪೈಪ್ ನಲ್ಲಿ ಸೇರಿದ್ದರಿಂದ ಕಲುಷಿತ ನೀರು ಕುಡಿದು 16 ಮಂದಿ ಅಸ್ವಸ್ಥರಾದ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುಡಿಯುವ ನೀರಿನ ಪೈಪ್ ಲೈನ್ ಚರಂಡಿಯಲ್ಲಿ ಹಾದು ಹೋಗಿದ್ದು, ಕೆಲವೆಡೆ ಚರಂಡಿ ನೀರು ಕುಡಿಯುವ ನೀರಿನ ಪೈಪ್ ನಲ್ಲಿ ಸೇರಿಕೊಂಡು ನೀರು ಕಲುಷಿತವಾಗಿದೆ. ಈ ನೀರು ಕುಡಿದು ಒಂದು ವಾರದಲ್ಲಿ 16 ಜನ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರನ್ನು ದಾವಣಗೆರೆ, ಶಿವಮೊಗ್ಗ, ಭದ್ರಾವತಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಸೇರಿ ವೈದ್ಯರು, ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮಕ್ಕೆ ಪೂರೈಕೆಯಾಗುತ್ತಿದ್ದ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ಹುಣಸಘಟ್ಟ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಚರಂಡಿಗಳಲ್ಲೇ ಹಾದು ಹೋಗಿದ್ದು, ಅಲ್ಲಲ್ಲಿ ನಲ್ಲಿ ನೀರಿನೊಳಗೆ ಚರಂಡಿ ನೀರು ಸೇರಿಕೊಳ್ಳುತ್ತಿದೆ. ಹೀಗೆ ಕುಡಿಯುವ ನೀರಿನ ಪೈಪ್ ಲೈನ್ಗೆ ಸೇರಿದ ತ್ಯಾಜ್ಯ ನೀರು ಸೇವಿಸಿ, ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.
ಕೆಲವು ಕಡೆ ಪೈಪ್ನಲ್ಲಿ ಸೋರಿಕೆಯಾಗುತ್ತಿದ್ದು, ಮಿನಿ ವಾಟರ್ ಟ್ಯಾಂಕ್ಗೆ ಪೈಪ್ ಅಳವಡಿಸಿ, ಮನೆಗಳಿಗೆ ಗ್ರಾಮಸ್ಥರು ನೀರು ಪೂರೈಸಿಕೊಳ್ಳುತ್ತಿದ್ದು, ಕುಡಿಯುವ ನೀರು ಪೂರೈಸುವ ವೇಳೆ ಸ್ವಚ್ಛತೆಗೆ ಗಮನ ಹರಿಸುವಂತೆ ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿಗೆ ಆರೋಗ್ಯಾಧಿಕಾರಿಗಳು ಸೂಚಿಸಿದರು.



