ದಾವಣಗೆರೆ: ಮದಕರಿ ನಾಯಕರ ಮಹಾದ್ವಾರ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ತೆರವುಗೊಳಿಸಿದ್ದನ್ನು ಖಂಡಿಸಿ ಮೇ.7ರಂದು ನಡೆಯುವ ದಾವಣಗೆರೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಜಿಲ್ಲೆಯ ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ನಾಯಕ ಸಮಾಜ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡ ಪುಟ್ಟಪ್ಪ,ಜಿಲ್ಲಾಧಿಕಾರಿಗಳು ಲಿಖಿತವಾಗಿ ಭಾನುವಳ್ಳಿಯಲ್ಲಿ ಮತ್ತೆ ಮದಕರಿ ನಾಯಕ ಮಹಾದ್ವಾರ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತ ಮರು ಸ್ಥಾಪಿಸುವ ಭರವಸೆ ನೀಡಿದರೆ ಮಾತ್ರ ನಾವು ಮತದಾನಕ್ಕೆ ಮನಸ್ಸು ಮಾಡಬಹುದು. ಇಲ್ಲವಾದರೆ, ನಾವು ಯಾವುದೇ ಕಾರಣಕ್ಕೂ ಮೇ.7ರಂದು ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದರು
ಎರಡೂವರೆ ದಶಕದಷ್ಟು ಹಳೆಯ ಶ್ರೀ ರಾಜ ವೀರಮದಕರಿ ನಾಯಕರ ಮಹಾದ್ವಾರ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ತೆರವುಗೊಳಿಸಲಾಗಿದೆ.1999ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಶಿವಪ್ಪ ಹಾಗೂ ಸಮಾದ ಹಿರಿಯ ಗುರುಗಳಾದ ಲಿಂಗೈಕ್ಯ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಅವರು, ಜಿಪಂ ಪರಿಶಿಷ್ಟರ ಅನುದಾನದಲ್ಲಿ ರಾಜವೀರ ಮದಕರಿ ನಾಯಕ ಮಹಾದ್ವಾರ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಿಸಲಾಗಿತ್ತು.
ಗ್ರಾಮದ ಹಾಲುಮತ ಸಮಾಜದ ಕೆಲ ಕಿಡಿಗೇಡಿಗಳು 7.11.2023ರಂದು ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪಿಸಲು ಪ್ರಯತ್ನಿಸಿದ್ದರು. ಆಗ ನಮ್ಮ ಸಮಾಜದಿಂದ ಸಂಬಂಧಿಸಿದ ಎಲ್ಲಾ ಇಲಾಖೆಗೂ ಮಾಹಿತಿ ನೀಡಿ, ಊರಿನಲ್ಲಿ ಶಾಂತಿ ಸ್ಥಾಪಿಸುವಂತೆ ಮನವಿ ಮಾಡಿದ್ದೇವು. ನಮ್ಮ ಯಾವುದೇ ಮಾತು ಪರಿಗಣಿಸದೇ ಜ. 9, 2024ರ ಮಧ್ಯರಾತ್ರಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಈ ಬಗ್ಗೆ ಡಿಸಿಗೆ ಮನವಿ ಮಾಡಿ, ಹೋರಾಟ ನಡೆಸಿದರೂ ಸ್ಪಂದಿಸಿಲ್ಲ.
ಜಿಲ್ಲಾಡಳಿತವು ಈಚೆಗೆ ಮತ್ತೊಂದು ಸಮುದಾಯದ ಮಾತು ಕೇಳಿ, ಮದಕರಿ ನಾಯಕ ಮಹಾದ್ವಾರ, ವಾಲ್ಮೀಕಿ ವೃತ್ತ ತೆರವುಗೊಳಿಸುವ ಮೂಲಕ ಪರಿಶಿಷ್ಟ ಪಂಗಡದ ನಾಯಕ ಸಮಾಜಕ್ಕೆ ತೀವ್ರ ಅವಮಾನ ಮಾಡಿದೆ. ಸುಮಾರು 16 ದಿನಗಳ ಕಾಲ ಭಾನುವಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಸಮಾಜ ಬಾಂಧವರು ಪ್ರತಿಭಟನಾ ಧರಣಿ ನಡೆಸಿದ್ದು, 1999ರ ದಾಖಲೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಹ ಒಂದು ಸಮುದಾಯದ ಮಾತು ಕೇಳುತ್ತಿದ್ದು, ಈ ಹಿನ್ನೆಲೆ ಲೋಕಸಭೆ ಚುನಾವಣೆ ಬಹಿಷ್ಕರಿಸುತ್ತಿದ್ದೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರಿಯಪ್ಪ, ರಂಗಸ್ವಾಮಿ, ನಾರಾಯಣಪ್ಪ ದೊಡ್ಮನಿ, ಅಜಯಕುಮಾರ, ನಾಗಪ್ಪ, ಮಹಾಂತೇಶ ಇದ್ದರು.