ದಾವಣಗೆರೆ: ಯುವಜನೋತ್ಸವ ಅಂಗವಾಗಿ ಹೆಚ್.ಐ.ವಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಏರ್ಪಡಿಸಲಾದ ಮ್ಯಾರಥಾನ್ ಓಟಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಷಣ್ಮುಖಪ್ಪ .ಎಸ್ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಬೆಂಗಳೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರಕ್ತಭಂಡಾರ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ಶಾಲಾ ಶಿಕ್ಷಣ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಎನ್.ಎಸ್.ಎಸ್. ಮತ್ತು ಜಿಲ್ಲೆಯ ವಿವಿಧ ರಕ್ತ ಕೇಂದ್ರಗಳು, ಜಿಲ್ಲಾ ಆರ್.ಆರ್.ಸಿ, ಕಾಲೇಜುಗಳು, ಹಾಗೂ ವಿವಿಧ ಸ್ವಯಂ ಸೇವಾ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಯುವಜನೋತ್ಸವ 2023-24 ಕಾರ್ಯಕ್ರಮದ ಅಂಗವಾಗಿ ಸೋಮವಾರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಚಿಗಟೇರಿ ಅಸ್ಪತ್ರೆಯಿಂದ ಗುಂಡಿ ಸರ್ಕಲ್, ಡೆಂಟಲ್ ಕಾಲೇಜ್ ರಸ್ತೆ, ವಿದ್ಯಾನಗರ, ವಿದ್ಯಾರ್ಥಿಭವನ ಮಾರ್ಗವಾಗಿ ಮರಳಿ ಜಿಲ್ಲಾಸ್ಪತ್ರೆಗೆ ತಲುಪುವ 4 ಕಿ.ಮೀ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಹೆಚ್.ಐ.ವಿ. ಅಥವಾ ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಹೆಚ್.ಐ.ವಿ, ಏಡ್ಸ್ ಕಾಯ್ದೆ 2017, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್.ಟಿ.ಐ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಏರ್ಪಡಿಸಲಾದ ಮ್ಯಾರಥಾನ್ ಓಟದಲ್ಲಿ ಪುರುಷರು, ಮಹಿಳೆಯರು ಒಳಗೊಂಡು ಒಟ್ಟು 80 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮ್ಯಾರಥಾನ್ ಓಟದ ಫಲಿತಾಂಶಗಳು: ನಾಲ್ಕು ಕಿಲೋಮೀಟರ್ ಮ್ಯಾರಥಾನ್ ಪುರುಷರ ವಿಭಾಗದಲ್ಲಿ ದಾವಣಗೆರೆ ಡಿ.ಆರ್.ಆರ್ ಪಾಲಿಟೆಕ್ನಿಕ್ ಕಾಲೇಜಿನ ಕೀರ್ತಿ.ಆರ್ ಪ್ರಥಮ, ಹರಿಹರ ಜಿ.ಎಫ್.ಜಿ.ಸಿ ಕಾಲೇಜಿನ ಸಂಜೀವ್.ಆರ್ ದ್ವಿತೀಯ, ದಾವಣಗೆರೆ ಸೈನ್ಸ್ ಅಕಾಡೆಮಿ ಕಾಲೇಜಿನ ವೀರೇಂದ್ರನಾಯ್ಕ್ ತೃತೀಯ ಬಹುಮಾನವನ್ನು ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ದಾವಣಗೆರೆ ಪ್ರಥಮ ದರ್ಜೆ ಕಾಲೇಜಿನ ಅರ್ಚನಾ ಗಾಯಕ್ವಾಡ್ ಪ್ರಥಮ, ದಾವಣಗೆರೆ ಎ.ವಿ.ಕೆ ಕಾಲೇಜಿನ ಅನುಷ ಪಿ.ಕೆ ದ್ವಿತೀಯ, ದಾವಣಗೆರೆ ಜಿ.ಎಫ್.ಜಿ.ಸಿ ಕಾಲೇಜಿನ ಸಾನಿಯಾ ಸುಜನ್ಸ್ ತೃತೀಯ ಬಹುಮಾನವನ್ನು ಪಡೆದರು.
ವಿಜೇತರಿಗೆ ಕ್ರಮವಾಗಿ ನಗದು ಬಹುಮಾನ ಪ್ರಥಮ ರೂ. 5,000, ದ್ವಿತೀಯ ರೂ 3,500, ತೃತೀಯ ರೂ. 2,500, ಮತ್ತು ಪುರುಷರ ವಿಭಾಗದಲ್ಲಿ ನಾಲ್ಕು ಸಮಾಧಾನಕರ ಬಹುಮಾನದಲ್ಲಿ ಪ್ರಜ್ವಲ್, ಮಧುಕುಮಾರ್, ಸಂತೋμï ಎಂ, ಏಕನಾಥ್ ಇವರಿಗೆ ತಲಾ ರೂ.1 ಸಾವಿರ. ಮತ್ತು ಮಹಿಳೆಯರಿಗೆ ಮೂರು ಸಮಾಧಾನಕರ ಬಹುಮಾನದಲ್ಲಿ ಅರ್ಪಿತ, ಮಮತಾ ಎಂ.ಎಸ್, ಶ್ರೀಲಕ್ಷ್ಮಿ ತಲಾ ರೂ. 1 ಸಾವಿರ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಚಿಗಟೇರಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕರಾದ ಡಾ. ನಾಗೇಂದ್ರಪ್ಪ ಎಂ.ಬಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಕಾರ್ಯಕ್ರಮ ಅಧಿಕಾರಿ ಡಾ. ಡಿ.ಪಿ ಮುರಳೀಧರ, ಹರಿಹರ ಎನ್.ಎಸ್.ಎಸ್ ಅಧಿಕಾರಿ ಅನಂತನಾಯಕ ಮತ್ತು ಗುರುನಾಥ್, ಆ.ಕು.ಕ, ಇಲಾಖೆ, ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.