ದಾವಣಗೆರೆ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಹೆಲ್ಮೆಟ್ ಧರಿಸದೆ ಒಂದು ಬೈಕ್ ನಲ್ಲಿ ಮೂವರು ಸಂಚರಿಸಿದರೆ, ಮತ್ತೊಂದು ಬೈಕ್ನಲ್ಲಿ ಇಬ್ಬರು ಕೂತು ಅಪಾಯಕಾರಿ ವೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದವರ ಪೈಕಿ ಇಬ್ಬರು ಯುವಕರನ್ನು ಹಾಗೂ 2 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯ್ ಕುಮಾರ್ ಎಂ ಸಂತೋಷ್ ಮತ್ತು ಜಿ ಮಂಜುನಾಥ್,ಡಿವೈಎಸ್ಪಿ ಶರಣಬಸವೇಶ್ವರ ಭೀಮರಾವ್ ಬಿ, ಟ್ರಾಫಿಕ್ ಇನ್ಸ್ಪೆಕ್ಟರ್ ಎನ್ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶೈಲಜಾ ನೇತೃತ್ವದಲ್ಲಿ ಪಿಎಸ್ಐ ನಿರ್ಮಲ, ಎಎಸ್ಐ ಅಣ್ಣಯ್ಯ, ಸಿಬ್ಬಂದಿಗಳಾದ ನಾಗರಾಜ್ ಕೆ, ಪ್ರವೀಣ್ ಕುಮಾರ್, ರವಿನಾಯಕ್, ಶಿವಮೂರ್ತಿ ನಾಯ್ಕ ಅವರ ತಂಡ ವಿಶೇಷ ಕಾರ್ಯಾಚರಣೆ ನಡೆಸಿದೆ.
ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬೈಕ್ ವ್ಹೀಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭರಮಸಾಗರ ನಿವಾಸಿ ರಸೂಲ್, ದಾವಣಗೆರೆಯ ರಾಮನಗರದ ಎಸ್ಓಜಿ ಕಾಲೋನಿಯ ನಿವಾಸಿ ಹಜರತ್ ಅಲಿ ಎಂಬ ಇಬ್ಬರನ್ನು ಬಂಧಿಸಿದ್ದು, ಎರಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಮತ್ತೊಂದು ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಿದ್ದವರ ಮೇಲೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಸ್ತೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುವ ರೀತಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುವುದು ಸಂಚಾರ ನಿಯಮ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಬೈಕ್ ವ್ಹೀಲಿಂಗ್ ಮಾಡುವುದು ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘನೆ. ವೀಲಿಂಗ್ ಮಾಡುವುದು ಕಂಡುಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.



