ದಾವಣಗೆರೆ; ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಿರ್ವಹಿಸುವಲ್ಲಿ ವಿಫಲರಾದ ಹೆಚ್.ಬಿ. ಮಂಜಪ್ಪನವರನ್ನು ತಕ್ಷಣವೇ ವಜಾ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸುಭಾಶ್ಚಂದ್ರ, ಜಿಲ್ಲಾಧ್ಯಕ್ಷ ಶಾಮನೂರು ಶಿವಶಂಕರಪ್ಪನವರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಯಾವ ಹೈಕಮಾಂಡ್ ಇಲ್ಲ. ನಮಗಿರುವುದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿನ ಹೈಕಮಾಂಡ್ ಮಾತ್ರ. ಯಾರ ಬಗ್ಗೆಯೂ ವ್ಯಕ್ತಿಗತವಾಗಿ ನಮ್ಮ ವಿರೋಧ ಇಲ್ಲ ಎಂದರು.
ಸರಿಯಾಗಿ ಕೆಲಸ ಮಾಡದ ಮಂಜಪ್ಪನವರಿಗೆ ಕನಿಷ್ಠ ಜ್ಞಾನ ಇಲ್ಲ. ಅವರನ್ನು ಪಕ್ಷದಿಂದ ವಜಾ ಮಾಡಿ, ಪಕ್ಷದ ನಿಷ್ಠಾವಂತರು ಹಾಗೂ ಉತ್ತಮ ಕೆಲಸ ಮಾಡುವವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಕೆಪಿಸಿಸಿಗೆ ಒತ್ತಾಯ ಮಾಡುತ್ತೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲು ಆಗಲಿಲ್ಲ. ಹೇಳಿಕೊಳ್ಳುವಂತಹ ಸಾಧನೆ ಪಕ್ಷದಿಂದ ಆಗಿಲ್ಲ. ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ವೇಳೆ ಜೆ.ಎನ್. ಶ್ರೀನಿವಾಸ್ ಹಾಗೂ ಅವರ ಪತ್ನಿ ಶ್ವೇತಾ ಶ್ರೀನಿವಾಸ್ ಗೈರು ಹಾಜರಾದಾಗ ಯಾಕೆ ನೊಟೀಸ್ ನೀಡಲಿಲ್ಲ. ಈಗ ಡಾ.ವೈ.ರಾಮಪ್ಪನವರನ್ನು ಉಚ್ಛಾಟನೆ ಮಾಡಿದ್ದು ಯಾಕೆ? ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯನಾ? ಎಂದರು.
ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದನ್ನು ಬಿಟ್ಟು ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡುವುದನ್ನು ಬಿಡಬೇಕು. ಹಣ, ಶ್ರೀಮಂತಿಕೆ ಹೊಂದಿರುವವರಿಂದ ಪಕ್ಷ ಕಟ್ಟಲು ಆಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ. ವೀರಣ್ಣ,ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ರಾಜಕುಮಾರ್, ಹಾಲೇಶ್, ಕಡತಿ ತಿಪ್ಪಣ್ಣ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಸಿರಾಜ್, ರೆಹಮತ್ ಉಲ್ಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



