ಚನ್ನಗಿರಿ: ಹರಿದು ಹಂಚಿ ಹೋಗಿದ್ದ ನಮ್ಮ ಕನ್ನಡ ನಾಡನ್ನು ಏಕೀಕರಣ ಚಳವಳಿಯ ಮೂಲಕ ಒಂದುಗೂಡಿಸಿದ್ದ ಮಹಾತ್ಮರ ಹೋರಾಟಗಳ ತತ್ವ ಮತ್ತು ಆದರ್ಶಗಳನ್ನು ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಅವರಲ್ಲಿ ಕನ್ನಡಾಭಿಮಾನವನ್ನು ಬೆಳೆಸಬೇಕಾಗಿದೆ ಎಂದು ಚನ್ನಗಿರಿ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಕೋರಿ ತಿಳಿಸಿದರು.
ಪಟ್ಟಣದ ಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಮಕ್ಕಳಲ್ಲಿ ನಾಡಿನ ನೆಲ ಜಲ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಲು ಪೂರಕವಾಗಿವೆ ಎಂದು ಹೇಳಿದರು.
ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಎಂ.ಬಿ.ನಾಗರಾಜ್ ಕಾಕನೂರು ಮಾತನಾಡಿ ಸಮಾಜದ ವಾಸ್ತವತೆಯ ಬಗ್ಗೆ ಬೆಳಕು ಚೆಲ್ಲುವ ಸಾಹಿತ್ಯವನ್ನು ವಚನಕಾರರ ವಚನಗಳಲ್ಲಿ ಕಾಣಬಹುದು ಎಂದು ತಿಳಿಸಿದರು.ಬಸವಣ್ಣ ,ಅಲ್ಲಮಪ್ರಭು ಮತ್ತು ಸರ್ವಜ್ಞರ ವಚನಗಳು ಸರ್ವಕಾಲಿಕವಾದವುಗಳು. ಅಂತಹ ಸಾಹಿತ್ಯ ಪ್ರಕಾರಗಳು ನಮಲ್ಲಿ ಹುಟ್ಟಿ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಬೇಕಾಗಿದೆ. 12 ನೇ ಶತಮಾನದ ವಚನಕಾರರ ವಿಚಾರಧಾರೆಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ಸಮಾಜದ ಮೇಲೆ ಬೆಳಕು ಚೆಲ್ಲುವ ಅಗತ್ಯವಿದೆ ಎಂದು ಹೇಳಿದರು.
ಕನ್ನಡ ಪರಿಚಾರಕ ಜಿ.ಚಿನ್ನಸ್ವಾಮಿ ಮಾತನಾಡಿ, ಶಾಂತವೇರಿಗೋಪಾಲಗೌಡ, ಜೆ.ಹೆಚ್.ಪಟೇಲ್, ಜಯಪ್ರಕಾಶ್ ನಾರಾಯಣರಂತಹ ಮಹಾತ್ಮರ ಸಮಾಜವಾದದ ತತ್ವಾದರ್ಶಗಳನ್ನು ಅನುಸರಿಸಬೇಕಾಗಿದೆ ಎಂದರು. ಸಾಮಾಜಿಕ ಕಾರ್ಯಕರ್ತ ರಾಕೇಶ್ ಪಾಂಡೆ ಮಾತನಾಡಿ ಇಂದಿನ ನವಪೀಳಿಗೆಯಲ್ಲಿ ಕನ್ನಡ ನಾಡಿನ ನೆಲ,ಜಲ,ಭಾಷೆ ಹಾಗೂ ಪರಂಪರೆಗಳ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಅಧ್ಯಕ್ಷತೆ ವಹಿಸಿದ್ದರು.ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಯು.ಚನ್ನಬಸಪ್ಪ,ಕೋಶಾಧ್ಯಕ್ಷ ಬಿ.ಈ.ಸಿದ್ದಪ್ಪ,ಪಿ.ಓಂಕಾರಮೂರ್ತಿ, ಮುಖಂಡ ಶಿವಲಿಂಗಪ್ಪ ಮರವಂಜಿ ಮತ್ತಿತರು ಇದ್ದರು.



