ಹೊಸಪೇಟೆ: ಬಳ್ಳಾರಿ-ಹೊಸಪೇಟೆ-ದಾವಣಗೆರೆ ನಡುವೆ ರೈಲು ಓಡಿಸಲು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಆಗ್ರಹಿಸಿದೆ.
ನಗರದ ರೈಲು ನಿಲ್ದಾಣದ ನವೀಕರಣ ವೀಕ್ಷಣೆಗೆ ಬಂದಿದ್ದ ಅಧಿಕಾರಿಗಳಿಗೆ ಮನವಿಯಲ್ಲಿ ಸಲ್ಲಿಸಲಾಯಿತು. ಬಳ್ಳಾರಿ-ದಾವಣಗೆರೆ ನಡುವೆ ಪ್ರಯಾಣಿಕರ ರೈಲು ಆರಂಭಿಸಿದರೆ ಕರಾವಳಿ, ಮಲೆನಾಡು ಭಾಗದೊಂದಿಗೆ ಕಲ್ಯಾಣ ಕರ್ನಾಟಕವನ್ನು ಬೆಸೆದಂತಾಗುತ್ತದೆ. ಗದಗ-ಹೊಸಪೇಟೆ-ಬಳ್ಳಾರಿ-ರಾಯಚೂರು ನಡುವೆ ನಿತ್ಯ ಬೆಳಿಗ್ಗೆ ರೈಲು ಓಡಿಸಬೇಕೆಂದು ಆಗ್ರಹಿಸಿದರು.
ಇನ್ನು ಗುಂತಕಲ್-ಮಂತ್ರಾಲಯದ ವರೆಗೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತದೆ. ಮುಂಬೈ-ಗದಗ-ವಾಡಿ ರೈಲು ಹೊಸಪೇಟೆ ವರೆಗೆ ವಿಸ್ತರಿಸಬೇಕು. ಹೊಸಪೇಟೆಯಲ್ಲಿ ಪ್ರಯಾಣಿಕರ ಕೋಚ್ ದುರಸ್ತಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ವಿಜಯನಗರ ರೈಲ್ವೆ ಅಭಿವೃದ್ದಿ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ, ದೀಪಕ್ ಉಳ್ಳಿ, ಟಿ.ಎಂ.ತಿಪ್ಪೇಸ್ವಾಮಿ, ವಿಶ್ವನಾಥ ಕೌತಾಳ್, ಮೊಹಮ್ಮದ್ ಬಾಷಾ, ಬಿ.ಜಹಾಂಗೀರ್, ಬಿ.ವಿರೂಪಾಕ್ಷಪ್ಪ, ರಾಮಕೃಷ್ಣ ಉಪಸ್ಥಿತರಿದ್ದರು.



