ದಾವಣಗೆರೆ: ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕುಂದುವಾಡ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೊಮ್ಮಗಳನ್ನು ದಾವಣಗೆರೆಗೆ ಬಿಡಲು ಬಂದ ದಂಪತಿ, ಸೇರಿ ನಾಲ್ಕು ವರ್ಷದ ಮಗು ಮೃತಪಟ್ಟಿದ್ದಾರೆ.
ಶಿವಮೊಗ್ಗದ ಟಿಪ್ಪುನಗರದ ಮೊಹಮ್ಮದ್ ಜಬೀವುಲ್ಲಾ (45), ಅವರ ಪತ್ನಿ ಹಮೀದಾ (43) ಹಾಗೂ ಅವರ ಪುತ್ರಿಯ ಮಗಳಾದ ಗೌಸಿಯಾಬಾನು (4) ಮೃತರು. ಮೂವರೂ ಒಂದೇ ಬೈಕಿನಲ್ಲಿ ಶಿವಮೊಗ್ಗದಿಂದ ದಾವಣಗೆರೆಗೆ ಬರುತ್ತಿದ್ದರು. ದಾವಣಗೆರೆಯ ಚಿಕ್ಕನಹಳ್ಳಿಯ ಹೊಸ ಬಡಾವಣೆಯಲ್ಲಿರುವ ಮಗಳ ಮನೆಗೆ ಮೊಮ್ಮಗಳನ್ನು ಬಿಡಲು ಬರುತ್ತಿದ್ದರು.
ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದು, ಲಾರಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಹಮೀದಾ ಹಾಗೂ ಗೌಸಿಯಾಬಾನು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಹಮ್ಮದ್ ಜಬೀವುಲ್ಲಾ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ದಾವಣಗೆರೆ ದಕ್ಷಿಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.



