ಡಿವಿಜಿ ಸುದ್ದಿ, ಮೈಸೂರು:ನಗರದಲ್ಲಿ ಇತ್ತೀಚೆಗೆ ನಡೆದ ನಿಗೂಢ ಕೊಲೆ ರಹಸ್ಯ ಬಯಲಾಗಿದ್ದು, ಸುಪಾರಿ ಕೊಟ್ಟ ಸ್ಯಾಂಡಲ್ವುಡ್ ಖ್ಯಾತ ಹಿನ್ನಲೆ ಗಾಯಕಿ ಅನನ್ಯಭಟ್ ತಂದೆ ವಿಶ್ವನಾಥ್ ಭಟ್ ಅರೆಸ್ಟ್ ಆಗಿದ್ದಾರೆ.
ಕಿರುಕುಳದಿಂದ ಬೇಸತ್ತು ವ್ಯಕ್ತಿಯ ಕೊಲೆಗೆ 7 ಲಕ್ಷಕ್ಕೆ ಸುಪಾರಿ ಕೊಟ್ಟ ಅನನ್ಯ ಭಟ್ ತಂದೆ ಇದೀಗ ಪೊಲೀಸರ ಅತಿಥಿ. ಸೆಪ್ಟೆಂಬರ್ 20 ರಂದು ಮೈಸೂರಿನ ನಿವೇದಿತ ನಗರದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪರಶಿವಮೂರ್ತಿ ಅವರ ಭೀಕರ ಹತ್ಯೆ ನಡೆದಿತ್ತು. ಮೈಸೂರಿನ ಸರಸ್ವತಿ ಪುರಂ ಪೊಲೀಸರು ಈ ಪ್ರಕರಣ ಭೇದಿಸಿದ್ದು, ವಿಶ್ವನಾಥ್ ಸೇರಿದಂತೆ 5 ಆರೋಪಿಗಳನ್ನು ಬಂಧಿಸಲಾಗಿದೆ. ಸುಪಾರಿ ಹಂತಕ ನಾಗೇಶ್, ಸುಪಾರಿ ಹಂತಕನಿಗೆ ಸಹಕರಿಸಿದ ನಿರಂಜನ, ವಿಶ್ವನಾಥ್ ಸ್ಕೆಚ್ಗೆ ಸಹಕರಿಸಿದ ಶಿಕ್ಷಕರಾದ ಸಿದ್ದರಾಜು ಹಾಗೂ ಪರಶಿವ ಬಂಧಿತ ಆರೋಪಿಗಳು.
ಎನ್.ಆರ್.ಮೊಹಲ್ಲಾದಲ್ಲಿರುವ ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕರಾಗಿದ್ದ ವಿಶ್ವನಾಥ್ಗೆ ಕಾರ್ಯದರ್ಶಿಯಾಗಿದ್ದ ಪರಶಿವಮೂರ್ತಿ ಸಾಕಷ್ಟು ಕಿರುಕುಳ ಕೊಡುತ್ತಿದ್ದರು. ಪ್ರತಿ ತಿಂಗಳ ವೇತನದಲ್ಲಿ ಹಾಗೂ ಸರ್ಕಾರದಿಂದ ಬರುವ ಅನುದಾನದಲ್ಲಿ ಪಾಲುಕೊಡುವುದು ಸೇರಿದಂತೆ ಕೆಲವು ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಆರಂಭವಾಗಿತ್ತು.
ಪರಶಿವಮೂರ್ತಿಯನ್ನ ಮುಗಿಸಿದರೆ ತೊಂದರೆ ತಪ್ಪುತ್ತದೆ ಎಂದು ನಿರ್ಧರಿಸಿದ ವಿಶ್ವನಾಥ್ ಸಹ ಶಿಕ್ಷಕರಾದ ಪರಶಿವ ಜೊತೆ ಸಮಾಲೋಚಿಸಿ ಕೊಲೆ ಮಾಡಿಸುವ ನಿರ್ಧಾರಕ್ಕೆ ಬಂದಿದ್ದಾನೆ. ಇಬ್ಬರು ಸಮಾಲೋಚನೆ ನಡೆಸಿ ಮತ್ತೊಂದು ಸಂಸ್ಕೃತ ಪಾಠಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದ ಸಿದ್ದರಾಜು ಜೊತೆ ಈ ವಿಚಾರವನ್ನು ಚರ್ಚಿಸಿದ್ದಾರೆ.
ಮೂವರು ಸೇರಿ ತೀರ್ಮಾನಕ್ಕೆ ಬಸಂಚು ರೂಪಿಸಿ, ಮೈಸೂರು ತಾಲೂಕಿನ ಭೂಗತಹಳ್ಳಿ ನಿವಾಸಿ ನಾಗೇಶ್ ಗೆ ಸುಪಾರಿ ಕೊಟ್ಟಿದ್ದಾರೆ. ಸುಪಾರಿಗೆ ಒಪ್ಪಿಗೆ ಪಡೆದು ಒಂದು ಲಕ್ಷ ಮುಂಗಡ ಪಡೆದ ನಾಗೇಶ್ ತನ್ನ ಸ್ನೇಹಿತ ನಿರಂಜನ್ ಜೊತೆ ಸೇರಿ ಸೆಪ್ಟೆಂಬರ್ 20 ರಂದು ಕೊಲೆ ಮಾಡಿ ಪರಾರಿಯಾಗಿದ್ದರು.
ಕೌಟುಂಬಿಕ ವಿಚಾರದಲ್ಲಿ ಪತ್ನಿಯಿಂದ ಪ್ರತ್ಯೇಕವಾಗಿ ನಿವೇದಿತ ನಗರದಲ್ಲಿ ಒಂಟಿಯಾಗಿ ವಾಸವಿದ್ದ ಪರಶಿವಮೂರ್ತಿ ಸಾಕಷ್ಟು ಬಡ್ಡಿ ವ್ಯವಹಾರ ಮಾಡುತ್ತಿದ್ದರಿ. ಇದಲ್ಲದೆ ಬಡ್ಡಿ ವ್ಯವಹಾರದಲ್ಲಿ ಕೊಲೆ ನಡೆದಿರಬಹುದೆಂಪೊಲೀಸರು ಆರಂಭದಲ್ಲಿ ಶಂಕಿಸಿದ್ದರು. ಕೊಲೆ ಕೇಸ್ನ ವಿಚಾರಣೆ ವೇಳೆ ಸಂಸ್ಕೃತ ಶಾಲೆಯ ಹಳೆಯ ಪ್ರಕರಣ ಮುನ್ನೆಲೆಗೆ ಬಂದಿದೆ. ಶಾಲೆಯ ಕೇಸ್ ಆಧರಿಸಿ ಪೊಲೀಸರು ವಿಶ್ವನಾಥ್ ಭಟ್ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ವಿಶ್ವನಾಥ್ ಭಟ್ ಕೊಲೆ ರಹಸ್ಯವನ್ನು ಹೇಳಿದ್ದಾನೆ.
ವಿಶ್ವನಾಥ್ ಜೊತೆಗಿನ ಸಂಪರ್ಕವನ್ನು ಗಾಯಕಿ ಅನನ್ಯಭಟ್ ಎರಡು ವರ್ಷಗಳ ಹಿಂದೆಯೇ ಕಡಿದುಕೊಂಡಿದ್ದಾರೆ. ಅನನ್ಯಭಟ್ಗೂ ಈ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.



