Connect with us

Dvgsuddi Kannada | online news portal | Kannada news online

ಕೊರೊನಾ ಲಸಿಕೆ: ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲು ಸಿದ್ಧತೆ; ಡಿಸಿ ಮಹಾಂತೇಶ್ ಬೀಳಗಿ

Home

ಕೊರೊನಾ ಲಸಿಕೆ: ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲು ಸಿದ್ಧತೆ; ಡಿಸಿ ಮಹಾಂತೇಶ್ ಬೀಳಗಿ

ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಲಸಿಕೆ ಬಳಕೆಗೆ ಲಭ್ಯವಾಗುವ ಎಲ್ಲ ಸಾಧ್ಯತೆಗಳಿದ್ದು, ಸರ್ಕಾರದ ಸೂಚನೆಯಂತೆ ಮೊದಲ ಆದ್ಯತೆ ವಲಯಕ್ಕಾಗಿ ಅಗತ್ಯ ಅಂಕಿ-ಅಂಶಗಳನ್ನು ಎರಡು ದಿನಗಳ ಒಳಗಾಗಿ ಸಿದ್ಧಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಕೋವಿಡ್-19 ಲಸಿಕೆ ಕಾರ್ಯವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಸಿಕೆ ನೀಡಿಕೆ ಕಾರ್ಯದಲ್ಲಿ ದಾವಣಗೆರೆ ಜಿಲ್ಲೆಯು ರಾಷ್ಟ್ರ ಮತ್ತು ರಾಜ್ಯಕ್ಕೆ ಮಾದರಿಯಾಗುವ ರೀತಿ ಕಾರ್ಯಗತಗೊಳಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ  ಸೂಚನೆ ನೀಡಿದರು.

ಕೋವಿಡ್-19 ಗೆ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ದೇಶದಲ್ಲಿ ಅಂತಿಮ ಹಂತದಲ್ಲಿದ್ದು, ಯಾವುದೇ ಸಮಯದಲ್ಲಿ ಲಸಿಕೆಯು ಬಳಕೆಗೆ ಲಭ್ಯವಾಗುವ ಸಾಧ್ಯತೆಗಳಿವೆ. ಲಸಿಕೆಯನ್ನು ಮೊದಲ ಆದ್ಯತೆಯಾಗಿ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರೂ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಲ್ಲರಿಗೂ ನೀಡಬೇಕೆಂಬುದು ಸರ್ಕಾರದ ನಿಲುವಾಗಿದೆ.

ಜಿಲ್ಲೆಯಲ್ಲಿಯೂ ಇದಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕಿದೆ. ಜಿಲ್ಲೆಯಲ್ಲಿರುವ ಸರ್ಕಾರಿ ಹಾಗೂ ಮಾನ್ಯತೆ ಹೊಂದಿರುವ ಖಾಸಗಿ ಎಲ್ಲ ಆಸ್ಪತ್ರೆಗಳ ವೈದ್ಯರು, ನರ್ಸ್‍ಗಳು, ಪ್ರಯೋಗಶಾಲೆ ನಿರ್ವಹಿಸುವವರು, ಚಾಲಕರು, ಕ್ಲರ್ಕ್‍ಗಳು, ಡಿ-ಗ್ರೂಪ್ ಸಿಬ್ಬಂದಿಯಾದಿಯಾಗಿ ಎಲ್ಲ ಆರೋಗ್ಯ ಕಾರ್ಯಕರ್ತರ ವಿವರಗಳು, ವೈದ್ಯಕೀಯ ಕಾಲೇಜುಗಳು, ದಂತವೈದ್ಯಕೀಯ, ಪ್ಯಾರಾಮೆಡಿಕಲ್, ಆಯುರ್ವೇದಿಕ್ ಸೇರಿದಂತೆ ಎಲ್ಲರ ಸಮಗ್ರ ವಿವರಗಳು ಅಂಕಿ-ಅಂಶ ಸಹಿತ ಎರಡು ದಿನಗಳ ಒಳಗಾಗಿ ಸಿದ್ಧವಾಗಬೇಕು ಎಂದರು.

ಜಿಲ್ಲೆಗೆ ಪ್ರಥಮ ಹಂತದಲ್ಲಿ ಬೇಕಾಗಬಹುದಾದ ಲಸಿಕೆ ಡೋಸ್‍ಗಳ ಸಂಖ್ಯೆಯನ್ನು ವಿವರ ಸಹಿತ ಸಲ್ಲಿಸಬೇಕು. ಪ್ರಥಮ ಆದ್ಯತಾ ವಲಯದ ಯಾರೂ ಕೂಡ ಈ ಅಂಕಿ-ಅಂಶದಲ್ಲಿ ಬಿಟ್ಟುಹೋಗಬಾರದು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಪ್ರತಿ ಗುರುವಾರ ಕೋವಿಡ್ ಲಸಿಕೆಗೆ ಸಂಬಂಧಿಸಿದ ಕಾರ್ಯಪಡೆ ಸಮಿತಿ ಸಭೆಯನ್ನು ನಡೆಸಿ, ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲಾಗುವುದು, ಅಲ್ಲದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತಿ ತಾಲ್ಲೂಕಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದರು.

ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ,  ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಈಗಾಗಲೇ  ಅಂಕಿ-ಅಂಶ ಸಿದ್ಧಪಡಿಸುವ ಕಾರ್ಯ ನಡೆದಿದೆ. ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಲಸಿಕಾಕರ್ತರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಕೋವಿಡ್‍ಗೆ ಸಂಬಂಧಿಸಿದಂತೆ ಭಾರತದಲ್ಲಿ ಒಟ್ಟು 09 ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಈ ಪೈಕಿ 04 ಪ್ರಾಥಮಿಕ ಹಂತ, 02- ದ್ವಿತೀಯ ಹಂತ ಹಾಗೂ 03 ಲಸಿಕೆಗಳು ತೃತೀಯ ಅಂದರೆ ಅಂತಿಮ ಹಂತದಲ್ಲಿವೆ. ಅಂತಿಮ ಹಂತದ ಪ್ರಯೋಗದಲ್ಲಿ ಯಶಸ್ವಿಯಾಗುವ ಲಸಿಕೆಗೆ ಮಾತ್ರ ಬಳಕೆ ಮಾಡಲು ಅನುಮತಿ ದೊರೆಯಲಿದೆ. ಜಾಗತಿಕವಾಗಿ ಒಟ್ಟು 248 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಪೈಕಿ 10 ಲಸಿಕೆಗಳು ಅಂತಿಮ ಹಂತ ತಲುಪಿವೆ ಎಂದರು.

ಕೋವಿಡ್-19 ಲಸಿಕೆ ಬಳಕೆಗೆ ಬಂದ ಕೂಡಲೆ ಮೊದಲ ಆದ್ಯತೆಯಾಗಿ ಆರೋಗ್ಯ ವಲಯದ ಕಾರ್ಯಕರ್ತರಿಗೆ ನೀಡಲಾಗುತ್ತಿದ್ದು, ನಂತರದ ಆದ್ಯತೆಯಾಗಿ ಸರ್ಕಾರ ನಿಗದಿಪಡಿಸುವ ಕ್ಷೇತ್ರದವರಿಗೆ ನೀಡಲು ಕೂಡ ಈಗಲೇ ಸಿದ್ಧ ಮಾಡಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಇಲಾಖೆಗಳು ತಮ್ಮ ಕಚೇರಿಗಳಲ್ಲಿನ ಹಾಗೂ ತಮ್ಮ ವ್ಯಾಪ್ತಿಯ ಎಲ್ಲ ಅಧಿಕಾರಿ, ಸಿಬ್ಬಂದಿಗಳ ಹೆಸರು, ಅಂಕಿ-ಅಂಶ ಸಹಿತ ವಿವರವನ್ನು ನಿಗದಿತ ನಮೂನೆಯಲ್ಲಿ ಸಿದ್ಧಪಡಿಸಿಕೊಳ್ಳಬೇಕು. ಆದಷ್ಟು ಶೀಘ್ರ ವಿವರ ಸಿದ್ಧಪಡಿಸಿ, ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ಲರಿಗಿಂತ ಆರೋಗ್ಯ ಸಿಬ್ಬಂದಿ  ತಾವೇ ಮೊದಲು  ಲಸಿಕೆ ಹಾಕಿಸಿಕೊಂಡು, ಇತರರಿಗೆ ಪ್ರೇರೇಪಿಸುವ ಕೆಲಸ ಮಾಡಬೇಕು.  ಲಸಿಕೆ ಕುರಿತಂತೆ ಆರೋಗ್ಯ ಇಲಾಖೆ, ರೋಟರಿ, ಲಯನ್ಸ್, ಸ್ಕೌಟ್ ಮತ್ತು ಗೈಡ್ಸ್ ನಂತಹ ಸಮಾಜಮುಖಿ ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು. ಯಾವುದೇ ತಪ್ಪುಕಲ್ಪನೆ, ತಪ್ಪು ಗ್ರಹಿಕೆ ಹಾಗೂ ಕಪೋಲ ಕಲ್ಪಿತ ವದಂತಿಗಳಿಗೆ ಆದಷ್ಟು ಕಡಿವಾಣ ಹಾಕಲು ಹಾಗೂ ಸತ್ಯ ಸಂಗತಿಯನ್ನು ಪ್ರಚುರಪಡಿಸಲು ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲು ಕಾರ್ಯಸೂಚಿ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಆರೋಗ್ಯ ಇಲಾಖೆಯಿಂದ ಜಾರಿಗೊಳಿಸುವ ವಿವಿಧ ಲಸಿಕಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕೋವಿಡ್-19 ಲಾಕ್‍ಡೌನ್ ಹಾಗೂ ಅನ್‍ಲಾಕ್ ಸಂದರ್ಭದಲ್ಲಿ ಹಲವು ಬಗೆಯ ಲಸಿಕೆ ಕಾರ್ಯಕ್ರಮವನ್ನು ದೇಶದ ಎಲ್ಲ ಜಿಲ್ಲೆಗಳಿಗಿಂತಲೂ ದಾವಣಗೆರೆ ಜಿಲ್ಲೆಯಲ್ಲಿ ಉತ್ತಮವಾಗಿ ಜಾರಿಗೊಳಿಸಿ, ಅನುಷ್ಠಾನಗೊಳಿಸಿದ್ದಕ್ಕಾಗಿ ದೇಶದಲ್ಲಿಯೇ ಜಿಲ್ಲೆಗೆ ಬೆಳ್ಳಿ ಪ್ರಶಸ್ತಿ ಬಂದಿದೆ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಅವರು ಸಭೆಯ ಗಮನಕ್ಕೆ ತಂದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

To Top
(adsbygoogle = window.adsbygoogle || []).push({});