ಚನ್ನಗಿರಿ: ನೀರಾವರಿ ಇಲಾಖೆ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಸೂಳೆಕೆರೆಗೆ ಭದ್ರಾ ನಾಲೆಯಿಂದ ಕುಡಿಯುವ ಉದ್ದೇಶಕ್ಕೆ ಪ್ರತಿ ದಿನ 50 ಕ್ಯೂಸೆಕ್ ನೀರು ಬಿಡಬೇಕಿತ್ತು. ಆದರೆ, ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಶಾಸಕ ಬಸವರಾಜು ವಿ. ಶಿವಗಂಗಾ ಖುದ್ದು, ಹಾಜರಾಗಿ ಕೆರೆಗೆ ನೀರು ಬಿಡಿಸಿದರು.
ಸೂಳೆಕೆರೆಯಿಂದ ಚಿತ್ರದುರ್ಗ, ಚನ್ನಗಿರಿ, ಜಗಳೂರು, ಭೀಮಸಮುದ್ರ, ಸಿರಿಗೆರೆ, ಮಲ್ಲಾಡಿಹಳ್ಳಿ ಹಾಗೂ ಹೊಳಲ್ಕೆರೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಮುಂಬರುವ ಬೇಸಿಗೆ ಗಮನದಲ್ಲಿ ಇಟ್ಟುಕೊಂಡು ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ಭದ್ರಾ ನಾಲೆಯ ಗೇಟ್ ತೆರೆದು ಸೂಳೆಕೆರೆಗೆ ನೀರು ಹರಿಸಿದರು.
ಶಿವಮೊಗ್ಗದಲ್ಲಿ ನಡೆದ ನೀರಾವರಿ ಇಲಾಖೆ ಸಲಹಾ ಸಮಿತಿ ಸಭೆಯಲ್ಲಿ ಸೂಳೆಕೆರೆ ಬಳಿ ಇರುವ ಭದ್ರಾ ನಾಲೆಯಿಂದ ಕುಡಿಯುವ ಉದ್ದೇಶಕ್ಕೆ ಪ್ರತಿ ದಿನ 50 ಕ್ಯೂಸೆಕ್ ನೀರನ್ನು ಕೆರೆಗೆ ಹರಿಸುವಂತೆ ತೀರ್ಮಾನಿಸಲಾಗಿತ್ತು. ಜ. 15ರಿಂದ ಭದ್ರಾ ನಾಲೆಗೆ ನೀರು ಹರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನೀರಾವರಿ ಇಲಾಖೆ ಎಇಇ ವಿಜಯ್ ಸಿ. ತೇತಾಂಬಿ, ಕುಡಿಯುವ ನೀರು ಇಲಾಖೆ ಎಇಇ ಲೋಹಿತ್ ಉಪಸ್ಥಿತರಿದ್ದರು.



