ಹನೂರು: ಕೊರೊನಾದಿಂದ ಸ್ಥಗಿತಗೊಂಡಿದ್ದ ಸಪ್ತಪದಿ ಕಾರ್ಯಕ್ರಮವನ್ನು ಶೀಘ್ರ ಪ್ರಾರಂಭಿಸಿ ಬಡವರ್ಗದ ಜನರಿಗೆ ದೇವಾಲಯದ ಮೂಲಕ ಮದುವೆ ಏರ್ಪಡಿಸಲಾಗುವುದು. ಹಾಗೆಯೇ 34 ಸಾವಿರ ದೇವಾಲಯಗಳ ಅರ್ಚಕರಿಗೆ ಆರೋಗ್ಯ ವಿಮೆ ಮತ್ತು ಜೀವವಿಮೆ ಒದಗಿಸುವ ಯೋಜನೆಯೂ ಶೀಘ್ರ ಕಾರ್ಯಾರಂಭಗೊಳ್ಳಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಭಾಗವಹಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟವು ಧಾರ್ಮಿಕ ಪುಣ್ಯಕ್ಷೇತ್ರವಾಗಿದ್ದು ಈ ಕ್ಷೇತ್ರವನ್ನು ಪ್ರಾಧಿಕಾರ ರಚನೆ ಮಾಡುವ ಮೂಲಕ ಅಭಿವೃದ್ಧಿಪಡಿಸಬೇಕು ಎಂಬುವ ಚಿಂತನೆ ಇದೆ ಎಂದರು.
ಕಳೆದ ಬಜೆಟ್ನಲ್ಲಿ ನಾಡಿನ 39 ಮಠಗಳಿಗೆ ಘೋಷಣೆ ಮಾಡಿದ್ದ ಅನುದಾನ ಸಿಎಂ ಯಡಿಯೂರಪ್ಪ ನೀಡಿದ್ದಾರೆ. ಶ್ರೀ ಕ್ಷೇತ್ರಗಳ ಅಭಿವೃದ್ಧಿಗೂ ಹೆಚ್ಚನ ಒತ್ತು ನೀಡಿದ್ದು ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಹೊಂದಿ ಮುಂದಿನ 4-5 ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಅತ್ಯಂತ ಶ್ರೇಷ್ಠ ಧಾರ್ಮಿಕ ಪುಣ್ಯಕ್ಷೇತ್ರವಾಗಲಿದೆ ಎಂದು ತಿಳಿಸಿದರು.



