ಮಲೇಬೆನ್ನೂರು: ಭದ್ರಾ ಅಚ್ಚುಕಟ್ಟಿನ ಪ್ರದೇಶದ ಈ ಬಾರಿಯ ಬೇಸಿಗೆ ಬೆಳೆಗಳಿಗೆ ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದ (ಜ.1) ಹಾಗೂ ಬಲದಂಡೆ ನಾಲೆಗೆ ಜನವರಿ 6 ರಿಂದ ಸತತ 120 ದಿವಸ ನೀರು ಹರಿಸಲು ಭದ್ರಾ ಕಾಡಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನೀರಾವರಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. 12 ದಿನಗಳ ಕಾಲ ಸತತವಾಗಿ ನೀರು ಹರಿಯಲಿದ್ದು, ಕೊನೆ ಭಾಗದ ರೈತರಿಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಸಭೆಯ ಆರಂಭದಲ್ಲಿ ಭದ್ರಾ ಅಧೀಕ್ಷಕ ಅಭಿಯಂತರ ಚಂದ್ರಹಾಸ ಮಾತನಾಡಿ, ಜಲಾಶಯದಲ್ಲಿ ಸದ್ಯ 62.456 (178 ಅಡಿ 6 ಇಂಚು) ಟಿಎಂಸಿ ನೀರಿದ್ದು, ಇದರಲ್ಲಿ ಬೇಸಿಗೆ ಬೆಳೆಗಳಿಗೆ 37.32 ಟಿಎಂಸಿ ಕುಡಿಯುವ ನೀರು, ಕೈಗಾರಿಕೆ ಉದ್ದೇಶಗಳಿಗೆ, ನೀರಿನ ಯೋಜನೆಗಳಿಗೆ, ಜಾತ್ರೆಗಳಿಗೆ ಮತ್ತು ಆವಿಯಾಗುವ ನೀರಿನ ಪ್ರಮಾಣ ಸೇರಿ ಒಟ್ಟು 48.16 ಟಿಎಂಸಿ ನೀರು ಬೇಕಾಗುತ್ತದೆ ಎಂದು ತಿಳಿಸಿದರು.