ದಾವಣಗೆರೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪದ ಮೇರೆಗೆ ಬಂಧಿತರಾಗಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಟಿ. ರವಿ ರಿಲೀಸ್ ಆಗಿದ್ದಾರೆ. ಸಿಟಿ ರವಿ ಎಲ್ಲಿದ್ದಾರೋ, ಅಲ್ಲಿಂದಲೇ ಅವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ನ್ಯಾಯಪೀಠ ಆದೇಶಿಸಿತ್ತು.
ಇದೀಗ ಹೈಕೋರ್ಟ್ ಆದೇಶದ ಪ್ರತಿ ಪೊಲೀಸರಿಗೆ ತಲುಪಿದ್ದು, ದಾವಣಗೆರೆಯಲ್ಲಿ ಸಿಟಿ ರವಿಯವರನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ರವಿ, ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂಬ ಆರೋಪದ ಬೆನ್ನಲ್ಲಿಯೇ ಸಚಿವೆ ಕೊಟ್ಟ ದೂರಿನ ಅನ್ವಯ ಯಾವುದೇ ನೋಟೀಸ್ ನೀಡಿದೇ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಸುವರ್ಣ ಸೌಧದೊಳಗೆ ನುಗ್ಗಿ ಪೊಲೀಸರು ಬಂಧನ ಮಾಡಿರುತ್ತಾರೆ. ಈ ಪ್ರಕ್ರಿಯೆ ಸರಿಯಾಗಿಲ್ಲವೆಂದು ನಿರ್ಧರಿಸಿ ಹೈಕೋರ್ಟ್ನಿಂದ ಕೂಡಲೇ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಲಾಗುತ್ತದೆ.
ಇದರ ಬೆನ್ನಲ್ಲಿಯೇ ಬೆಳಗಾವಿಯಿಂದ ಬೆಂಗಳೂರಿಗೆ ಕರೆ ತರಲಾಗುತ್ತಿದ್ದ ಸಿ.ಟಿ. ರವಿ ಅವರನ್ನು ಹೈಕೋರ್ಟ್ ಆದೇಶ ಪೊಲೀಸರಿಗೆ ಸಿಕ್ಕಿದ ಬೆನ್ನಲ್ಲಿಯೇ ದಾವಣಗೆರೆಯಲ್ಲಿ ಅವರಿಗೆ ಬಿಡುಗಡೆ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಸಿ.ಟಿ. ರವಿ, ನಾನು ಮಾಡದ ತಪ್ಪಿಗೆ ಸುಳ್ಳು ಆರೋಪಕ್ಕೆ ನನ್ನ ಮೇಲೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ನಾನು ಆಕ್ಷೇಪಾರ್ಹ ಪದ ಬಳಕೆ ಮಾಡಿಲ್ಲ.ಇದಕ್ಕೆ ಸಾಕ್ಷಿಯೂ ಇಲ್ಲ, ನೋಟೀಸ್ ನೀಡಿದೇ ಬಂಧಿಸಿದ್ದಾರೆ. ಸಚಿವೆ ಕೊಟ್ಟ ದೂರನ್ನು ದಾಖಲಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಸರ್ಕಾರ ನನ್ನನ್ನು ಬಂಧಿಸಿದೆ. ಸಚಿವೆ ಕೊಟ್ಟ ದೂರು ಎಫ್ಐಆರ್ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಬಂದು ಅರೆಸ್ಟ್ ಮಾಡಿದ್ದಾರೆ.
ಸುವರ್ಣ ಸೌಧದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದ್ದು, ನಾನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ನಾನು ಕೊಟ್ಟ ದೂರನ್ನು ಈವರೆಗೆ ಎಫ್ಐಆರ್ ಕೂಡ ಮಾಡಿಕೊಂಡಿಲ್ಲ. ನಾನು ದೂರು ಕೊಟ್ಟರೂ ಅದನ್ನು ಸರ್ಕಾರದಿಂದ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಲಾಗಿದೆ. ನಾನು ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಯಾವ ರೀತಿಯಾಗಿ ಹೋರಾಟ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇನೆ.
ರಾಜ್ಯದಾದ್ಯಂತ ನನ್ನ ಬಂಧನವಾದ ನಂತರ ಬಿಜೆಪಿ ಕಾರ್ಯಕರ್ತರಿಂದ ಹಿಡಿದು ನಾಯಕರೂ ಬೆಂಬಲಿಸಿದ್ದಾರೆ, ಅವರೆಲ್ಲರಿಗೂ ಧನ್ಯವಾದಗಳು. ಕಾನೂನು ತಜ್ಞರು ಹಾಗೂ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದರು.