ದಾವಣಗೆರೆ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ (bhadra dam) ವ್ಯಾಪ್ತಿಯಲ್ಲಿ ಮತ್ತೆ ಮುಂಗಾರು ಚೇತರಿಕೆ ಕಂಡಿದೆ. ಕಳೆದ 10 ದಿನದಿಂದ ಮಳೆ ಕೊರತೆಯಿಂದ ಡ್ಯಾಂಗೆ ಒಳ ಹರಿವು ಗಣನೀಯವಾಗಿ ತಗ್ಗಿತ್ತು. ಆದರೆ, ಕಳೆದ ಎರಡ್ಮೂರು ದಿನದಿಂದ ನಿರಂತರ ಮಳೆಯಾಗುತ್ತಿದ್ದು, ಒಳ ಹರಿವು 7 ಸಾವಿರ ಕ್ಯೂಸೆಕ್ ವರೆಗೆ ಏರಿಕೆಯಾಗಿದೆ.
ಈಗಾಗಲೇ ಮುಂಗಾರು ಬೆಳೆಗೆ ನಾಲೆಯಿಂದ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಪ್ರಕಟಿಸಿದೆ. ಒಂದು ವೇಳೆ ಮಳೆಯಿಂದ ಡ್ಯಾಂ ತುಂಬಿದ್ರೆ ಸಲಹಾ ಸಮಿತಿ ಸಭೆ ಕರೆದು, ಈ ಬಾರಿ ಮುಂಗಾರು ಬೆಳೆಗೆ ನಾಲೆಯಿಂದ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಹ ನಿಗಮ ತಿಳಿಸಿದೆ.
ಇಂದು(ಜು.20) ಬೆಳಗ್ಗೆ 6ಗಂಟೆ ಹೊತ್ತಿಗೆ ಒಳ ಹರಿವು 6,972 ಕ್ಯೂಸೆಕ್ ನಷ್ಟಿದೆ. ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಎರಡ್ಮೂರು ದಿನದಿಂದ ಸತತ ಮಳೆಯಾಗಿದ್ದು, ನೀರಿನ ಮಟ್ಟ 149.1 ಅಡಿ ತಲುಪಿದೆ.
ಈ ಬಾರಿಯ ಮುಂಗಾರು ಜೂನ್ ತಿಂಗಳಲ್ಲಿ ಆರಂಭವಾದರೂ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗದಿದ್ದರಿಂದ ಭದ್ರಾ ಜಲಾಶಯಕ್ಕೆ ನೀರಿನ ಒಳನ ಹರಿವು ಕುಂಠಿತವಾಗಿತ್ತು. ಇದೀಗ ಜುಲೈ ಆರಂಭದಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಿದೆ. ಅಚ್ಚುಕಟ್ಟು ಭಾಗದ ರೈತರು ನಿರಂತರ ಮಳೆಯಾಗಿ ಜಲಾಶಯ ಭರ್ತಿಯಾಗಿ ನಾಲೆಗೆ ನೀರು ಹರಿಯುವಂತಾಗಲಿ ಎಂದು ಪ್ರಾರ್ಥಿಸಿಸುತ್ತಿದ್ದಾರೆ. ಕಳೆದ ವರ್ಷ ಇದೇ ದಿನ 179.1 ಅಡಿ ನೀರು ಇತ್ತು. ಈ ವರ್ಷ ನೀರಿಕ್ಷಿತ ಮಟ್ಟದಷ್ಟು ಮಳೆ ಸುರಿದಿಲ್ಲ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :20-7-2026
- ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 33.569 ಟಿಎಂಸಿ
- ಗರಿಷ್ಠ ಮಟ್ಟ: 186ಅಡಿ
- ಇಂದಿನ ಮಟ್ಟ:149.1 ಅಡಿ
- ಒಳ ಹರಿವು: 6,972 ಕ್ಯೂಸೆಕ್
- ಹೊರ ಹರಿವು : 178 ಕ್ಯೂಸೆಕ್
- ಕ್ರೆಸ್ಟ್ ಗೇಟ್ : 00 ಕ್ಯೂಸೆಕ್
- ಎಡ ದಂಡೆ : 50 ಕ್ಯೂ ಸೆಕ್
- ಬಲ ದಂಡೆ : 00 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 179.1ಅಡಿ
- ಕಳೆದ ವರ್ಷದ ಇದೇ ದಿನ ಒಳಹರಿವು: 10,508 ಕ್ಯೂಸೆಕ್


