ದಾವಣಗೆರೆ: ನಕಲಿ ಬಂಗಾರ ನೀಡಿ ವಂಚಿಸಿದ್ದ ಮೂವರು ಆರೋಪಿಗಳನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 62.25 ಲಕ್ಷ ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ತಾಲೂಕಿನ ಸಚಿನ್ ಗೋಂಧಳಿ @ಸ್ಯಾಂಡಿ @ ರಮೇಶ(21), ನ್ಯಾಮತಿ ತಾಲೂಕಿನ ಸಂದೀಪ(38), ರವಿ(40) ಬಂಧಿತ ಆರೋಪಿಗಳು. ವಂಚನೆ ಮಾಡಿದ್ದ ಒಟ್ಟು 62,25,000 ರೂ. ನಗದು ಹಣವನ್ನು ವಶಕ್ಕೆಪಡೆಯಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಳೆ ಮನೆ ಕೆಡವಿ ಪಾಯ ತೆಗೆಯುತ್ತಿರುವಾಗ ಬಂಗಾರದ ನಿಧಿ ಸಿಕ್ಕಿದ್ದು, ಕಡಿಮೆ ಬೆಲೆಗೆ ಕೊಡುವುದಾಗಿ ವಿಜಯಕುಮಾರ ಎಂಬುವರ ಮುಖಾಂತರ ಮಹಾರಾಷ್ಟ್ರ ಸೊಲ್ಲಾಪುರ ಜಿಲ್ಲೆಯ ಶಿವಾನಂದಪ್ಪಗೆ ಆರೋಪಿ ರಮೇಶ ನಂಬಿಸಿದ್ದ. ಸ್ಯಾಂಪಲ್ ತೆಗೆದುಕೊಂಡು ಹೋಗಿ ಪರೀಕ್ಷಿಸಿದಾಗ ಅದು ಅಸಲಿ ಬಂಗಾರವಾಗಿತ್ತು. ಕಳೆದ ಜೂ.28ರಂದು ಸವಳಂಗ-ಶಿಕಾರಿಪುರ ರಸ್ತೆಯ ಮಾಚಿಗೊಂಡನಹಳ್ಳಿ ಕೆರೆ ಸಮೀಪದ ತೋಟದಲ್ಲಿ ಶಿವಾನಂದಪ್ಪರನ್ನು ಭೇಟಿಯಾದ ಆರೋಪಿಗಳು 85 ಲಕ್ಷ ರೂ. ಪಡೆದು, ಕವರ್ ನಲ್ಲಿದ್ದ ಅಂದಾಜು 1 ಕೆ.ಜಿ ಯಷ್ಟು ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಓಡಿ ಹೋಗಿದ್ದರು. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಹೆಚ್.ಟಿ.ಶೇಖರ್, ಎಎಸ್ಪಿ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಚನ್ನಗಿರಿ ಡಿವೈಎಸ್ಪಿ ಬಿ.ಎಸ್.ಬಸವರಾಜ್ ಉಸ್ತುವಾರಿಯಲ್ಲಿ ನ್ಯಾಮತಿ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್.ಎಂ.ಸಿದ್ದೇಗೌಡ ನೇತೃತ್ವದ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.


