ದಾವಣಗೆರೆ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ (bhadra dam) ವ್ಯಾಪ್ತಿಯಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದೆ. ಕಳೆದ ತಿಂಗಳ ಮಳೆ ಕೊರತೆಯಿಂದ ಖಾಲಿ ಖಾಲಿಯಾಗಿದ್ದ ಡ್ಯಾಂಗೆ ಈಗ ಭರ್ಜರಿ ಪ್ರಮಾಣದಲ್ಲಿ ಒಳ ಹರಿವು ಹರಿದು ಬರುತ್ತಿದ್ದು, ಡ್ಯಾಂ ನೀರಿನ ಸಂಗ್ರಹ ಮಟ್ಟ ಸಹ ಏರಿಕೆಯಾಗಿದೆ.
ಈಗಾಗಲೇ ಮುಂಗಾರು ಬೆಳೆಗೆ ನಾಲೆಯಿಂದ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಪ್ರಕಟಿಸಿದೆ. ಇದರಿಂದ ಆತಂಕ್ಕೆ ಒಳಗಾಗಿದ್ದ ರೈತರಲ್ಲಿ ಮಳೆ ಅಬ್ಬರ, ಒಳ ಹರಿವು ಹೆಚ್ಚಳದಿಂದ ಡ್ಯಾಂ ತುಂಬುವ ಹೊಸ ಭರವಸೆ ಮೂಡಿದೆ. ಒಂದು ವೇಳೆ ಇದೇ ರೀತಿ ಮಳೆ ಮುಂದುವರೆದು ಡ್ಯಾಂ ತುಂಬಿದ್ರೆ ಅಷ್ಟೇ ಸಲಹಾ ಸಮಿತಿ ಸಭೆ ಕರೆದು, ಈ ಬಾರಿ ಮುಂಗಾರು ಬೆಳೆಗೆ ನಾಲೆಯಿಂದ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ನಿಗಮ ತಿಳಿಸಿದೆ.
ಇಂದು(ಜು.7) ಬೆಳಗ್ಗೆ 6ಗಂಟೆ ಹೊತ್ತಿಗೆ ಒಳ ಹರಿವು 8,117 ಕ್ಯೂಸೆಕ್ ನಷ್ಟಿದೆ. ಕಳೆದ ಒಂದು ವಾರ 300 ಕ್ಯೂಸೆಕ್ ನಷ್ಟಿದ್ದ ಒಳಹರಿವು ಒಮ್ಮೆಲೇ 8,117 ಕ್ಯೂಸೆಕ್ ಗಡಿದಾಟಿದೆ. ಇದರಿಂದ ನೀರಿನ ಮಟ್ಟ 140.6 ಅಡಿ ತಲುಪಿದೆ.
ಈ ಬಾರಿಯ ಮುಂಗಾರು ಜೂನ್ ತಿಂಗಳಲ್ಲಿ ಆರಂಭವಾದರೂ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗದಿದ್ದರಿಂದ ಭದ್ರಾ ಜಲಾಶಯಕ್ಕೆ ನೀರಿನ ಒಳನ ಹರಿವು ಕುಂಠಿತವಾಗಿತ್ತು. ಇದೀಗ ಜುಲೈ ಆರಂಭದಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಿದೆ. ಅಚ್ಚುಕಟ್ಟು ಭಾಗದ ರೈತರು ನಿರಂತರ ಮಳೆಯಾಗಿ ಜಲಾಶಯ ಭರ್ತಿಯಾಗಿ ನಾಲೆಗೆ ನೀರು ಹರಿಯುವಂತಾಗಲಿ ಎಂದು ಪ್ರಾರ್ಥಿಸಿಸುತ್ತಿದ್ದಾರೆ.
ಭದ್ರಾ ಜಲಾಶಯ ಇಂದಿನ ( ಜು.7) ಒಳ ಹರಿವು 8,117 ಕ್ಯೂಸೆಕ್ ಇದೆ. ನೀರಿನ ಮಟ್ಟ 140.6 ಅಡಿಯಷ್ಟಿದೆ. ಕಳೆದ ವರ್ಷ ಇದೇ ದಿನ 170.9 ಅಡಿ ನೀರು ಇತ್ತು. ಈ ವರ್ಷ ನೀರಿಕ್ಷಿತ ಮಟ್ಟದಷ್ಟು ಮಳೆ ಸುರಿದಿಲ್ಲ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :7-7-2026
- ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 27,231 ಟಿಎಂಸಿ
- ಗರಿಷ್ಠ ಮಟ್ಟ: 186ಅಡಿ
- ಇಂದಿನ ಮಟ್ಟ:140.6 ಅಡಿ
- ಒಳ ಹರಿವು: ): 8,117 ಕ್ಯೂಸೆಕ್
- ಹೊರ ಹರಿವು : 212 ಕ್ಯೂಸೆಕ್
- ಕ್ರೆಸ್ಟ್ ಗೇಟ್ : 00 ಕ್ಯೂಸೆಕ್
- ಎಡ ದಂಡೆ : 50 ಕ್ಯೂ ಸೆಕ್
- ಬಲ ದಂಡೆ : 00 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 170.9 ಅಡಿ
- ಕಳೆದ ವರ್ಷದ ಇದೇ ದಿನ ಒಳಹರಿವು: 20,626 ಕ್ಯೂಸೆಕ್


